ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ: ನಾಲ್ಕೇ ಜಿಲ್ಲೆಗಳಲ್ಲಿ ಆಸಕ್ತಿ-ಉಳಿದೆಡೆ ನಿರಾಸಕ್ತಿ
Team Udayavani, Jun 16, 2022, 7:10 AM IST
ಕುಂದಾಪುರ: ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಕಂತು ಪಾವತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.
ಮೇ 23ರಿಂದ ಜೂ. 15ರ ವರೆಗೆ ರಾಜ್ಯದಲ್ಲಿ 15.48 ಕೋ.ರೂ. ಸಂಗ್ರಹವಾಗಿದೆ. 1,61,028 ಮಂದಿವಿಮೆ ನೋಂದಣಿ ಮಾಡಿದ್ದು ದ.ಕ. ಜಿಲ್ಲೆಯಲ್ಲಿ 44,693 ಮಂದಿಯ ದ್ದಾಗಿದೆ. ಹಾಸನ 33,341, ತುಮ ಕೂರು 22,300, ಕಾರವಾರ 17,848 ಇದ್ದರೆ ಉಡುಪಿಯಲ್ಲಿ 2,384 ಮಂದಿಯಷ್ಟೇ ಮಾಡಿದ್ದಾರೆ.
ಬೆಳೆ ಸಮೀಕ್ಷೆ ಎಡವಟ್ಟು
2018ರಿಂದ ಫ್ರುಟ್ ತಂತ್ರಾಂಶದಲ್ಲಿ ಬೆಳೆ ಸಮೀಕ್ಷೆ ದಾಖಲು ಮಾಡಲಾಗುತ್ತಿದೆ. ದಾಖಲೀಕರಣ ವನ್ನು ಹೊರಗುತ್ತಿಗೆ ನೀಡಲಾಗುತ್ತಿದ್ದು ಅವರು ಅಡಿಕೆ ಬೆಳೆದಲ್ಲಿ ರಬ್ಬರ್ ಮರಗಳ ಫೋಟೊವನ್ನು ಅಪ್ಲೋಡ್ ಮಾಡಿದ ಘಟನೆಗಳಾಗಿವೆ. ಇದರಿಂದಾಗಿ ವಿಮೆ ಕಂತು ಪಾವತಿಸಿ ದ್ದರೂ ಪರಿಹಾರ ದೊರೆಯುವುದಿಲ್ಲ. ಇನ್ನು ಕೆಲವರು ಈ ತಂತ್ರಾಂಶದಲ್ಲಿ ಬೆಳೆ ದಾಖಲು ಮಾಡಲಿಲ್ಲ. ಇದರಿಂದಲೂ ವಿಮೆ ದೊರೆಯು ವುದಿಲ್ಲ. 2021-22ರ ಬೆಳೆ ದಾಖಲೆ “ಡಾಟಾ ನಾಟ್ ಫೌಂಡ್’ ಎಂದು ಕ್ರಾಪ್ ಸರ್ವೇ ವೆಬ್ಸೈಟ್ ತೋರಿಸುತ್ತಿದೆ. ಸಹಕಾರಿ ಸಂಸ್ಥೆಗಳ ಮೂಲಕ ಕಂತು ಪಾವತಿಗೆ ಹೋದಾಗಲೂ 2019-20ರ ಬೆಳೆ ದಾಖಲೆಯನ್ನೇ ಈ ವೆಬ್ಸೈಟ್ ತೋರಿಸುತ್ತಿದೆ.
ಪರಿಹಾರವೂ ಕಷ್ಟ
ಆರ್ಟಿಸಿಯಲ್ಲಿ ರಬ್ಬರ್ ಎಂದು ನಮೂದಾಗಿ ಅಡಿಕೆ ಬೆಳೆಗೆ ಕಂತು ಪಾವತಿಸಿದರೆ ವಿಮೆ ಪರಿಹಾರ ದೊರೆಯುವುದಿಲ್ಲ. ಕುಂದಾಪುರದ ವಿವಿಧೆಡೆ ಈ ಸಮಸ್ಯೆ ಕಂಡು ಬಂದಿದೆ. ಆರ್ಟಿಸಿಯಲ್ಲಿ ಕೃಷಿ ನಮೂದಾಗದೇ ಇದ್ದರೂ ಪರಿಹಾರ ದೊರೆ ಯುವುದಿಲ್ಲ. ವಾರ್ಷಿಕ ಬೆಳೆ ವಿಮೆ ನೋಂದಣಿ ಮಾಡುವಾಗಲೇ ಗಮನಿಸಿ ಯಾವ ಕೃಷಿ ಎಂದು ಸರಿಯಾಗಿ ನಮೂದಿಸಬೇಕು. ರೈತರೇ ನೇರವಾಗಿ ಮಾಡುವುದಕ್ಕೆ ಅವಕಾಶವಿದೆ.
ಸಹಾಯವಾಣಿ ನೆರವು
ಆರ್ಟಿಸಿಗೆ ಇದುವರೆಗೆ ಆಧಾರ್ ಲಿಂಕ್ ಆಗಿಲ್ಲ. ಹೊಸ ನಿಯಮದ ಪ್ರಕಾರ ಎರಡೂ ಕಡೆಯಲ್ಲಿ ಹೆಸರು ಒಂದೇ ರೀತಿ ಇರಬೇಕು. ಕೆಲವೆಡೆ ಇದು ಹೊಂದಾಣಿಕೆಯಾಗದಿರುವುದು ಆರಂಭದಲ್ಲಿ ಸಮಸ್ಯೆಯಾಗಿತ್ತು. ಈಗ ಅದನ್ನು ನಿವಾರಿಸಲೆಂದೇ ಸಹಾಯವಾಣಿ ತೆರೆಯಲಾಗಿದೆ. 080- 26564535ಕ್ಕೆ ಕರೆ ಮಾಡಿ ವಿಮೆ ಕುರಿತು ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಭತ್ತಕ್ಕಿಲ್ಲ ಆಸಕ್ತಿ
ಉಡುಪಿ ಜಿಲ್ಲೆಯಲ್ಲಿ ಪ್ರಾದೇಶಿಕವಾರು ಬೆಳೆಗಳಲ್ಲಿ ವ್ಯತ್ಯಾಸ ಇರುವುದು ಜನ ನೋಂದಣಿಗೆ ಮನ ಮಾಡದಿರುವುದಕ್ಕೆ ಕಾರಣ ಎನ್ನಲಾಗಿದೆ. ಪರಿಹಾರಕ್ಕೆ ಇಡೀ ಗ್ರಾಮವನ್ನು ಘಟಕವಾಗಿಸಿದ ಕಾರಣ ಕೆಲವರಿಗಷ್ಟೇ ಬೆಳೆಹಾನಿಯಾದರೆ ಪರಿಹಾರ ದೊರೆಯುವುದಿಲ್ಲ. ಉಡುಪಿಯಲ್ಲಿ ಭತ್ತದ ಬೆಳೆ ಹೆಚ್ಚಿದ್ದು ಅದಕ್ಕೆ ಪರಿಹಾರ ಕಡಿಮೆಯಾದುದೂ ನಿರಾಸಕ್ತಿಗೆ ಕಾರಣ.
ರಾಜ್ಯದಲ್ಲಿ ಹಿಂದಿನ ವರ್ಷಗಳಲ್ಲಿನ ವಿಮೆ ನೋಂದಣಿ
2016-17- 29 ಲಕ್ಷ
2017-18- 20 ಲಕ್ಷ
2018-19- 19.8 ಲಕ್ಷ
2019-20- 21 ಲಕ್ಷ
– ಲಕ್ಷ್ಮೀ ಮಚ್ಚಿನ