ಸಾಲದ ಸುಳಿಯಲ್ಲಿ ದ್ವೀಪರಾಷ್ಟ್ರ ಕಂಗಾಲು: ಪೆಟ್ರೋಲ್, ಡೀಸೆಲ್ ಅಭಾವ; ಜನರ ಪರದಾಟ
ಇಂಧನ ದಾಸ್ತಾನು ಮಾಡಿಕೊಳ್ಳುವ ಬಗ್ಗೆ ಟೆಂಡರ್ ಅನ್ನು ಪಡೆದಿಲ್ಲ.
Team Udayavani, Jun 17, 2022, 1:29 PM IST
ಕೊಲೊಂಬೊ: ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಅಭಾವದಿಂದಾಗಿ, ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುವಂತಾಗಿದೆ. ಅಲ್ಲದೇ ಶ್ರೀಲಂಕಾಕ್ಕೆ ಇಂಧನ ಸರಬರಾಜಾಗುವ ಲಕ್ಷಣ ಕಡಿಮೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆಯವರೇ ಅಪಾಯದ ಕತ್ತಿ ನಿಮ್ಮ ತಲೆ ಮೇಲಿದೆ: ಬಿಜೆಪಿ ಟ್ವೀಟ್
ಪೆಟ್ರೋಲ್, ಡೀಸೆಲ್ ಅಭಾವದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಶುಕ್ರವಾರ (ಜೂನ್ 17) ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ರಜೆ ಘೋಷಿಸಿದೆ. ಇದರಿಂದಾಗಿ ರಾಜಧಾನಿ ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳು ನಿರ್ಜನವಾಗಿದೆ.
ಮತ್ತೊಂದೆಡೆ ಇಂಧನಕ್ಕಾಗಿ ಕಿಲೋ ಮೀಟರ್ ಗಳಷ್ಟು ದೂರ ವಾಹನಗಳು ಮತ್ತು ಚಾಲಕರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಕಂಡು ಬಂದಿರುವುದಾಗಿ ವರದಿ ವಿವರಿಸಿದೆ.
“ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಶನ್ ಇಂಧನ ದಾಸ್ತಾನು ಮಾಡಿಕೊಳ್ಳುವ ಬಗ್ಗೆ ಟೆಂಡರ್ ಅನ್ನು ಪಡೆದಿಲ್ಲ. ಇದಕ್ಕೆ ಕಾರಣ ಹಿಂದಿನ ಬಾಕಿ ಪಾವತಿ ಮಾಡದಿರುವುದಕ್ಕೆ ಇಂಧನ ಸರಬರಾಜು ತಡೆ ಹಿಡಿದಿರುವುದಾಗಿ ಶ್ರೀಲಂಕಾದ ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನ ವಿಜೆಶೇಖರ ತಿಳಿಸಿದ್ದಾರೆ.
ಇಂಧನ ಆಮದು ಮಾಡಿಕೊಳ್ಳಲು ಭಾರತದ ಸರ್ಕಾರದ 500 ಮಿಲಿಯನ್ ಡಾಲರ್ ಸಾಲದ ನಿರೀಕ್ಷೆಯಲ್ಲಿರುವುದಾಗಿ ಶ್ರೀಲಂಕಾ ಸರ್ಕಾರ ಹೇಳಿದೆ. ಶ್ರೀಲಂಕಾದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದು ದ್ವೀಪರಾಷ್ಟ್ರದ ಇತಿಹಾಸದ ಕರಾಳ ದಿನಗಳಾಗಿದೆ ಎಂದು ವರದಿ ತಿಳಿಸಿದೆ.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಪ್ರಕಾರ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಭಾರತ, ಚೀನಾ ಸೇರಿದಂತೆ ಅಂದಾಜು 6 ಬಿಲಿಯನ್ ಡಾಲರ್ ಶತಕೋಟಿ ಮೊತ್ತದ ನೆರವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು, ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಪರದಾಡುವಂತಾಗಿದೆ ಎಂದು ಬ್ಲೂಮ್ ಬರ್ಗ್ ಎಕಾನಾಮಿಕ್ಸ್ ತಿಳಿಸಿದೆ.