ನಿತಿನ್ ಗಡ್ಕರಿ ಪ್ರೇರಣೆಯಿಂದ ಇ-ಕಾರು ಖರೀದಿ: ಜೈರಾಂ ರಮೇಶ್
Team Udayavani, Aug 6, 2022, 9:52 PM IST
ನವದೆಹಲಿ: ಈ ವರ್ಷದ ಬಜೆಟ್ ಕುರಿತ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜತೆಗೆ ರಾಜ್ಯಸಭೆಯಲ್ಲಿ ನಡೆಸಿದ ಮಾತುಕತೆಯ ನಂತರ ತಾವು ಟಾಟಾ ನೆಕ್ಸಾನ್ ವಿದ್ಯುತ್ ಕಾರು ಖರೀದಿಸಿರುವುದಾಗಿ ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಹೇಳಿದ್ದಾರೆ.
ಈ ವಿಚಾರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ಮಾರ್ಚ್ 22ರಂದು ನಾನು ಗಡ್ಕರಿ ಜತೆಗೆ ಸದನದಲ್ಲಿ ಇ-ವಾಹನಗಳ ಬಗ್ಗೆ ಸರ್ಕಾರ ಹೊಂದಿರುವ ಗುರಿಯ ಬಗ್ಗೆ ಚರ್ಚೆ ನಡೆಸಿದ್ದೆ. ಆಗ, ನನಗೆ ಗಡ್ಕರಿ ಅವರು ಇ-ವಾಹನಗಳ ಮಹತ್ವ ತಿಳಿಸಿದ್ದರು. ಅವರ ಮಾತಿನಿಂದ ಪ್ರಭಾವಿತನಾಗಿ ನಾನು ಟಾಟಾ ನೆಕ್ಸಾನ್ ಇ-ಕಾರು ಖರೀದಿಸಿದ್ದೇನೆ.
2035ರ ಹೊತ್ತಿಗೆ ಭಾರತದಲ್ಲಿ ತೈಲಾಧಾರಿತ ಕಾರುಗಳು ಗಣನೀಯವಾಗಿ ತಗ್ಗಿ, ವಿದ್ಯುತ್ ವಾಹನಗಳು ಹೆಚ್ಚಾಗುತ್ತವೆ ಎಂದು ಭಾವಿಸಿದ್ದೇನೆ. ಆದರೆ, ವಿದ್ಯುತ್ ಆಧಾರಿತ ಕಾರುಗಳ ನಿರ್ವಹಣಾ ವೆಚ್ಚವನ್ನೂ ಸರ್ಕಾರ ಗಣನೀಯವಾಗಿ ತಗ್ಗಿಸಬೇಕಿದೆ ಎಂದು ಹೇಳಿದ್ದಾರೆ.