ಕನ್ನಡ ಭಾಷೆ ಅಭಿವೃದ್ದಿ ಸಮಗ್ರ ವಿಧೇಯಕಕ್ಕೆ ಶಾಸಕರ ಬೆಂಬಲ
Team Udayavani, Sep 14, 2022, 6:49 PM IST
ರಾಯಚೂರು: ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಅಭಿಯಾನ ಕನ್ನಡ ಸಾಹಿತ್ಯ ಪರಿಷತ್ ನಿಂದ ನಡೆಯಿತು.
ಜಿಲ್ಲೆಯ ಎಲ್ಲ ಶಾಸಕರು ತಮ್ಮ ಬೆಂಬಲ ಪತ್ರ ಕಸಾಪ ತಾಲೂಕು ಘಟಕಗಳ ಸಮಿತಿಗಳಿಗೆ ಸಲ್ಲಿಸುವ ಮೂಲಕ ಜವಾಬ್ದಾರಿ ಮೆರೆದರು. ನಗರದಲ್ಲಿ ಶಾಸಕ ಡಾ| ಶಿವರಾಜ್ ಪಾಟೀಲ್ ಸೇರಿದಂತೆ ಆಯಾ ತಾಲೂಕಿನ ಶಾಸಕರು ಮನವಿ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಡಾ| ಶಿವರಾಜ್ ಪಾಟೀಲ್, ಕನ್ನಡ ಆಡಳಿತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ ಸಲುವಾಗಿ ಅನೇಕ ವಿಧೇಯಕ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಇದೀಗ ಕರ್ನಾಟಕ ಕಾನೂನು ಆಯೋಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳೊಂದಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಅನುಷ್ಠಾನಗೊಳಿಸುವ ಮೂಲಕ, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಕನ್ನಡಿಗರಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಒದಗಿಸುವ ಸಲುವಾಗಿ ಮತ್ತು ಕನ್ನಡಿಗರಿಗಾಗಿ ಸಾರ್ವಜನಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಅವಕಾಶ ಹಾಗೂ ಕಲ್ಯಾಣ ಕಾರ್ಯಕ್ರಮ ಕಲ್ಪಿಸುವುದು ನಮ್ಮೆಲ್ಲರ ಆದ್ಯತೆ ಎಂದರು.
ಈ ವೇಳೆ ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಗೌರವ ಕಾರ್ಯದರ್ಶಿ ರಾವುತರಾವ್ ಬರೂರ, ಜಿಲ್ಲಾ ಸಹ ಕಾರ್ಯದರ್ಶಿ ದಂಡಪ್ಪ ಬಿರಾದಾರ, ಸಂಘಟನಾ ಕಾರ್ಯದರ್ಶಿ ರಾಜಾಶಂಕರ್ ಎನ್., ವಿಶೇಷ ಆಹ್ವಾನಿತರಾದ ಶಿವಮೂರ್ತಿ ಹಿರೇಮಠ, ಶಾಂತಾ ಕುಲಕರ್ಣಿ, ಖಾನ್ ಸಾಬ್ ಮೋಮಿನ್, ರಾಮಣ್ಣ ಬೋಯರ್ ಸೇರಿದಂತೆ ಇತರರಿದ್ದರು.