ನ್ಯಾಯಾಂಗ ಬಂಧನ ವಿಸ್ತರಣೆ : ರಾವುತ್ ಗೆ ದೀಪಾವಳಿಯೂ ಜೈಲಿನಲ್ಲೆ
Team Udayavani, Oct 21, 2022, 8:11 PM IST
ಮುಂಬಯಿ : ಪತ್ರಾ ಚಾಲ್ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರಿಗೆ ಸೆಷನ್ಸ್ ನ್ಯಾಯಾಲಯ ನವೆಂಬರ್ 2 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲು ಸೂಚಿಸಿದೆ. ದಸರಾ ನಂತರ, ಸಂಜಯ್ ರಾವುತ್ ಅವರು ದೀಪಾವಳಿಯನ್ನೂ ಜೈಲಿನಲ್ಲಿ ಕಳೆಯುವಂತಾಗಿದೆ.
ಗೋರೆಗಾಂವ್ನಲ್ಲಿ ಆಪಾದಿತ ಪತ್ರಾ ಚಾವ್ಲ್ ಜಮೀನು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಜುಲೈ 31 ರಂದು ಇಡಿ ಬಂಧಿಸಿತ್ತು. ಇದಾದ ಬಳಿಕ ಸಂಜಯ್ ರಾವುತ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು (ಅ 21) ವಿಚಾರಣೆ ನಡೆಯಿತು. ಆದರೆ, ಕೋರ್ಟ್ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದೆ.ಹೀಗಾಗಿ ಸಂಜಯ್ ರಾವತ್ ಅವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ.
ಸಂಜಯ್ ರಾವತ್ ಅವರು ಮೊದಲಿನಿಂದಲೂ 1039 ಕೋಟಿ ರೂಪಾಯಿಗಳ ಪತ್ರಾ ಚಾಲ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಈ ಪ್ರಕರಣದಲ್ಲಿ ಇಡಿ ಇತ್ತೀಚೆಗೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಪತ್ರಾ ಚಾಲ್ ಪುನರಾಭಿವೃದ್ಧಿಯಲ್ಲಿ ರಾವುತ್ ನೇರವಾಗಿ ಭಾಗಿಯಾಗಿದ್ದಾರೆ ಮತ್ತು ಮೊದಲಿನಿಂದಲೂ ಎಲ್ಲವನ್ನೂ ಕೆಲಸ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ಆರೋಪಪಟ್ಟಿಯಲ್ಲಿ ಹೇಳಿಕೊಂಡಿದೆ.