228 ಗ್ರಾಮಗಳಲ್ಲಿ ಚರ್ಮಗಂಟು ರೋಗ ಉಲ್ಬಣ
4,334 ಜಾನುವಾರುಗಳಲ್ಲಿ ರೋಗ ಪತ್ತೆ-288 ಬಲಿ ; ರೈತರಲ್ಲಿ ಆತಂಕದ ಛಾಯೆ ; ವೈದ್ಯರ ಕೊರತೆ-ಕಡಿಮೆ ಪರಿಹಾರ
Team Udayavani, Nov 24, 2022, 4:06 PM IST
ಧಾರವಾಡ: ರೈತ ಸಮುದಾಯದ ಜೀವನಾಡಿಯಾಗಿರುವ ಜಾನುವಾರುಗಳಿಗೆ ಗಂಟು ಬಿದ್ದಿರುವ ಚರ್ಮ ಗಂಟು ರೋಗವು ಜಿಲ್ಲೆಯಲ್ಲಿ ಉಲ್ಬಣಗೊಂಡಿದ್ದು, ಈ ರೋಗಕ್ಕೆ ಬಲಿಯಾದ ಜಾನುವಾರುಗಳ ಸಂಖ್ಯೆ 300ರ ಆಸುಪಾಸಿಗೆ ತಲುಪಿದೆ.
ನ.22ರವರೆಗೆ ಪಶು ಸಂಗೋಪನಾ ಇಲಾಖೆ ನೀಡಿರುವ ಮಾಹಿತಿ ಅನ್ವಯ ಜಿಲ್ಲೆಯ ಐದು ತಾಲೂಕಿನ 228 ಗ್ರಾಮಗಳಲ್ಲಿ ಚರ್ಮ ಗಂಟು ರೋಗ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಇದಲ್ಲದೇ ಚರ್ಮ ಗಂಟು ರೋಗಕ್ಕೆ 288 ಜಾನುವಾರುಗಳು ಮೃತಪಟ್ಟಿದ್ದು, ಈ ಪೈಕಿ ಹುಬ್ಬಳ್ಳಿಯಲ್ಲಿಯೇ ಅಧಿಕ 79 ಜಾನುವಾರುಗಳು ಅಸುನೀಗಿವೆ.
ಇನ್ನು ಈವರೆಗೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ತಾಲೂಕಿನ 228 ಗ್ರಾಮಗಳ ವ್ಯಾಪ್ತಿಯ 4334 ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿದೆ. ಈ ಪೈಕಿ ಈಗಾಗಲೇ 2879 ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖ ಹೊಂದಿವೆ. 1455 ಜಾನುವಾರುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನಲ್ಲಿ ರೋಗ ಪತ್ತೆಯಾದ ಜಾನುವಾರುಗಳ ಸಂಖ್ಯೆ ಸಾವಿರ ಗಡಿ ದಾಟಿದೆ.
ವೈದ್ಯರ ಕೊರತೆ: ಜಿಲ್ಲೆಗೆ ಒಟ್ಟು 600 ಜನ ವೈದ್ಯರು ಹಾಗೂ ಸಿಬ್ಬಂದಿ ಅವಶ್ಯಕತೆ ಇದೆ. ಈ ಪೈಕಿ ಶೇ.50 ಹುದ್ದೆಗಳು ಖಾಲಿಯಿವೆ. ಜಿಲ್ಲೆಯಲ್ಲಿ 108ಕ್ಕೂ ಹೆಚ್ಚು ಪಶು ಆಸ್ಪತ್ರೆಗಳಿವೆ. 78 ವೈದ್ಯರ ಅನುಮೋದನೆಗೊಂಡ ಹುದ್ದೆಗಳಿವೆ. ಆದರೆ ಕೇವಲ 48 ವೈದ್ಯರು ಮಾತ್ರ ಇದ್ದಾರೆ. ಅದರಲ್ಲಿ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಇದ್ದಾರೆ. ಜತೆಗೆ ಸಿಬ್ಬಂದಿ ವರ್ಗ ಇಲ್ಲ. ಹೀಗಾಗಿ ಅನೇಕ ರೈತರು ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದಾರೆ. ಎರಡು ಮೂರು ಊರುಗಳಲ್ಲಿ ಒಬ್ಬರೇ ವೈದ್ಯರು ಇದ್ದರೆ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಲು ಸಾಧ್ಯ? ಇದಲ್ಲದೇ ಜಾನುವಾರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಬರುವುದು ಕೂಡ ಸವಾಲಿನ ಕೆಲಸವಾಗಿದೆ.
ಸಾವನ್ನಪ್ಪಿದ ಜಾನುವಾರು ಪರಿಹಾರ ಮೊತ್ತ ರೈತರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ. ಒಂದು ಎತ್ತಿನ ಬೆಲೆ ಕನಿಷ್ಟ 1 ಲಕ್ಷಕ್ಕೂ ಅಧಿಕ ಇದೆ. ಆದರೆ ಎತ್ತು/ಹೋರಿಗೆ ಕೇವಲ 30 ಸಾವಿರ ನೀಡಲಾಗುತ್ತಿದೆ. ಆಕಳಿಗೆ 20 ಸಾವಿರ, ಕರುವಿಗೆ ಕೇವಲ 5 ಸಾವಿರ ಪರಿಹಾರ ಧನ ವಿತರಿಸುತ್ತಿದೆ. ಅದೂ ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ ಎಂಬುದು ರೈತಾಪಿ ಸಮುದಾಯದ ಅಳಲು.
ಸಂತೆ ನಿಷೇಧಿಸಿದರೂ ಮರಣ ಮೃದಂಗ
ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಸೆ.27ರಿಂದ ಅ.26ರವರೆಗೆ ಜಿಲ್ಲಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಹಾಗೂ ಜಾನುವಾರು ಸಾಗಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇಷ್ಟಾದರೂ ದಿನದಿಂದ ದಿನಕ್ಕೆ ರೋಗ ಉಲ್ಬಣಗೊಂಡ ಕಾರಣ ನ.30ರವರೆಗೂ ನಿಷೇಧ ವಿಸ್ತರಿಸಿದೆ. ಆರಂಭದಲ್ಲಿ ಜಿಲ್ಲೆಯ ಬರೀ ಎರಡು ತಾಲೂಕಿನಲ್ಲಿದ್ದ ರೋಗ ಇದೀಗ ಐದು ತಾಲೂಕಿನಲ್ಲಿ ಕಂಡುಬಂದಿದೆ. ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಂಡುಬಂದಿದ್ದರೂ ಇದರಿಂದ ಜಾನುವಾರುಗಳು ಮೃತಪಟ್ಟಿರಲಿಲ್ಲ. ಆದರೆ ಈ ಸಲ ಜಾನುವಾರುಗಳ ಮರಣ ಮೃದಂಗವೇ ಆಗುತ್ತಿದೆ.
ಚರ್ಮ ಗಂಟು ರೋಗದಿಂದ ರೈತಾಪಿ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ರೋಗಕ್ಕೆ ಬಲಿಯಾದ ಜಾನುವಾರು ಮಾಲೀಕರಿಗೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ. ಈವರೆಗೆ ಜಿಲ್ಲೆಗೆ ಮಂಜೂರಾದ ಒಟ್ಟು ಪರಿಹಾರ ಮೊತ್ತ 62 ಲಕ್ಷ 40 ಸಾವಿರ ಇದೆ. ಈ ಪೈಕಿ 7.95 ಲಕ್ಷ ಮಾತ್ರ ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ ಸಂಚಾರಿ ಆಸ್ಪತ್ರೆ ಬಿಟ್ಟು 113 ಪಶು ಆಸ್ಪತ್ರೆ ಇದೆ. ಪಶು ಸಂಗೋಪನೆ ಇಲಾಖೆಯ ಕೆಲ ವೈದ್ಯರು, ಸಿಬ್ಬಂದಿ ಬೇರೆ ಬೇರೆ ಕಡೆ ನಿಯೋಜನೆಯಲ್ಲಿದ್ದಾರೆ. ಹೀಗಾಗಿ ಸರ್ಕಾರ ಅವರನ್ನು ಮಾತೃ ಇಲಾಖೆಗೆ ಮರಳಿ ಕರೆ ತರಬೇಕು. ತಾತ್ಕಾಲಿಕವಾಗಿ ನಿವೃತ್ತರಾದವರನ್ನು ಸೇವೆಗೆ ನಿಯೋಜಿಸಬೇಕು. ಪರಿಹಾರ ಮೊತ್ತ ಏರಿಸಬೇಕು. ಈ ಕುರಿತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು. ಬಸವರಾಜ ಕೊರವರ, ಜನಜಾಗೃತಿ ಸಂಘದ ಅಧ್ಯಕ್ಷ
ಜಿಲ್ಲೆಯಲ್ಲಿ ಒಟ್ಟು 2.33 ಲಕ್ಷ ಜಾನುವಾರುಗಳಿದ್ದು, ಇದರಲ್ಲಿ ದನ, ಎಮ್ಮೆ, ಎತ್ತುಗಳು ಒಳಗೊಂಡ 1.87 ಲಕ್ಷ ಜಾನುವಾರುಗಳಿವೆ. ಈ ಪೈಕಿ ಈಗಾಗಲೇ 1,33,012 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದಂತೆ ಬೇಕಿರುವ ಲಸಿಕೆ ಎರಡ್ಮೂರು ದಿನಗಳಲ್ಲಿ ಬರಲಿದ್ದು, ಆದಷ್ಟು ಬೇಗ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕುತ್ತೇವೆ. –ಡಾ| ಮನೋಹರ ಪಿ. ದ್ಯಾಬೇರಿ, ಪಶು ಪಾಲನಾ ಇಲಾಖೆ ಉಪನಿರ್ದೇಶಕರ ಕಚೇರಿ ಮುಖ್ಯ ಪಶುವೈದ್ಯಾಧಿಕಾರಿ
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು
Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ
BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!
Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್
Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
The Safest Online Gaming Sites: Shielding Your Gaming Experience
ವಿಕ್ರಮ್ ಪುತ್ರನ ಜೊತೆ ಮಾರಿ ಸೆಲ್ವರಾಜ್ ಸಿನಿಮಾ: ʼಬೈಸನ್ʼ ಫಸ್ಟ್ ಲುಕ್ ಔಟ್
Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…
Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO
Casino Financial Institution Repayment Methods: A Comprehensive Guide