ಬೆಳಗಾವಿ ಪ್ರಭಾವಿಗಳ ಮೌನ ಮಹಾರಾಷ್ಟ್ರಕ್ಕೆ ವರ; ಸಿಎಂ ಅವರನ್ನು ಕಟ್ಟಿಹಾಕುವ ಸಲುವಾಗಿ ತಟಸ್ಥರಾದರೇ?
Team Udayavani, Dec 4, 2022, 6:53 AM IST
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಬೆಳಗಾವಿಯ ಪ್ರಭಾವಿ ರಾಜ ಕಾರಣಿಗಳ ಮೌನ ಮತ್ತು ತಟಸ್ಥ ನಿಲುವು ಈಗ ಅನು ಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸದ್ಯದಲ್ಲೇ ಬೆಳಗಾವಿ ಗಡಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಹಾಗೆಯೇ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಬರಲು ತಯಾರಾಗಿದ್ದಾರೆ. ಈ ಅಂಶಗಳಿಂದ ವಿವಾದಕ್ಕೆ ಹೆಚ್ಚಿನ ಮಹತ್ವ ಬಂದಿದೆ.
ಬೆಳಗಾವಿಯ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ ಬೆಳಗಾವಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿನ ಮರಾಠಿ ಭಾಷಿಕ ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಗಡಿ ಭಾಗದಲ್ಲಿ ಈಗ ಪರಿಸ್ಥಿತಿ ಸರಿಯಾಗಿಲ್ಲ. ಇಂತಹ ವಾತಾವರಣದಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸರಿಯಾದ ಕ್ರಮವಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಬಹಿರಂಗವಾಗಿ ಹೇಳಿದ್ದಲ್ಲದೆ ಸರಕಾರದಿಂದ ಪತ್ರ ಬರೆದಿದ್ದಾರೆ. ಅದಕ್ಕೆ ಸವಾಲೊಡ್ಡುವಂತೆ ಇಬ್ಬರು ಸಚಿವರು ಬೆಳಗಾವಿಗೆ ಬಂದೇ ಬರುತ್ತೇವೆ ಎಂದು ಹೇಳಿಕೆ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರ ತೀವ್ರ ಸ್ವರೂಪ ಪಡೆದಿರುವಾಗ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಮೌನ ಎರಡೂ ರಾಜ್ಯಗಳ ನಡುವಿನ ಸಂಪರ್ಕವೇ ಕಡಿತಗೊಳ್ಳುವಂತೆ ಮಾಡಿದೆ. ಇದು ಸೌಹಾರ್ದಯುತ ವಾತಾವರಣದ ಮೇಲೆ ಪರಿಣಾಮ ಬೀರುತ್ತಿದೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ಪ್ರಭಾವಿ ರಾಜಕಾರಣಿಗಳಿದ್ದಾರೆ. ಈ ನಾಯಕರಿಗೆ ಮಹಾರಾಷ್ಟ್ರದ ಸಚಿವರು ಮತ್ತು ಸರಕಾರದ ಜತೆ ಉತ್ತಮ ಬಾಂಧವ್ಯ ಇರುವುದು ಸುಳ್ಳೇನಲ್ಲ.
ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ್ ಅವರೊಂದಿಗೆ ರಮೇಶ ಜಾರಕಿಹೊಳಿ ಮತ್ತಿತರ ಜಿಲ್ಲೆಯ ನಾಯಕರು ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಇವರ ಮಾತನ್ನು ಚಂದ್ರಕಾಂತ ಪಾಟೀಲ್ ನಿರಾಕರಿಸುವುದಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲೆಯ ನಾಯಕರು ತಮ್ಮ ಪ್ರಭಾವ ಹೊಂದಿದ್ದಾರೆ. ಕೆಲವು ದಿನಗಳಿಂದ ಚಂದ್ರಕಾಂತ ಪಾಟೀಲ್ ಕರ್ನಾಟಕ ಸರಕಾರಕ್ಕೆ ಸವಾಲು ಹಾಕುವಂತಹ ಹೇಳಿಕೆಗಳನ್ನು ಟ್ವೀಟ್ ಮೂಲಕ ನೀಡುತ್ತಿದ್ದರೂ ಜಿಲ್ಲೆಯ ನಾಯಕರು ವಿಶೇಷವಾಗಿ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್, ಉತ್ತರ ಶಾಸಕ ಅನಿಲ ಬೆನಕೆ ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೇಲಿಂದ ಮೇಲೆ ತಮ್ಮ ಕೆಲಸಗಳಿಗಾಗಿ ಮಹಾರಾಷ್ಟ್ರದ ಸಚಿವರನ್ನು ಹಾಗೂ ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡುವ ಜಿಲ್ಲೆಯ ನಾಯಕರು ಗಡಿ ವಿವಾದ ವಿಷಯ ಉಂಟಾದಂದಿನಿಂದ ಮಹಾರಾಷ್ಟ್ರದ ಯಾವ ನಾಯಕರ ಜತೆಗೂ ಮಾತುಕತೆ ನಡೆಸಿಲ್ಲ. ತೆÌàಷಮಯ ವಾತಾವರಣ ತಣ್ಣಗಾಗುವಂತೆ ಪ್ರಯತ್ನ ಮಾಡಿಲ್ಲ. ಇದು ಸಿಎಂ ಬೊಮ್ಮಾಯಿ ಅವರಿಗೆ ಸಮಸ್ಯೆ ಉಂಟುಮಾಡಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಕನ್ನಡ ಹೋರಾಟಗಾರರ ಆತಂಕ
ಒಂದು ವೇಳೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಬೆಳಗಾವಿಗೆ ಬಂದು ಸಭೆ ಮಾಡಿದರೆ ಇಲ್ಲಿನ ಮರಾಠಿ ಭಾಷಿಕರನ್ನು ಪ್ರಚೋದನೆ ಮಾಡಿ ಎತ್ತಿಕಟ್ಟುತ್ತಾರೆ. ಇನ್ನೊಂದು ಕಡೆ ಕರ್ನಾಟಕ ಸರಕಾರ ಅವರನ್ನು ಬಂಧನ ಮಾಡಿದರೆ ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ. ಇದನ್ನೇ ನೆಪ ಮಾಡಿಕೊಂಡು ಮಹಾರಾಷ್ಟ್ರದವರು ಗಡಿ ಭಾಗದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಬಿಂಬಿಸುತ್ತಾರೆ ಎಂಬ ಆತಂಕ ಕನ್ನಡ ಹೋರಾಟಗಾರರದ್ದು.
ಗಡಿ ವಿಷಯ ಮುಂದಿಟ್ಟುಕೊಂಡು ಯಾವು ದಕ್ಕೂ ಸಹಕಾರ ನೀಡದಿರುವ ಮಹಾರಾಷ್ಟ್ರದ ಜತೆ ಮೊದಲಿನ ಅನ್ಯೋನ್ಯ ಸಂಬಂಧ ಮುಂದುವರಿಸಿಕೊಂಡು ಹೋಗಲು ಬೆಳಗಾವಿ ಜಿಲ್ಲೆಯ ನಾಯಕರ ಪಾತ್ರ ಬಹಳ ಮುಖ್ಯವಾಗಿದೆ. ಮುಖ್ಯಮಂತ್ರಿಗಳ ಜತೆ ಮುನಿಸಿಕೊಂಡಿರುವ ನಾಯಕರು ಗಡಿ ಭಾಗದ ಕನ್ನಡಿಗರ ಪರ ನಿಲ್ಲುವರೇ ಎಂಬ ಪ್ರಶ್ನೆ ಕಾಡುತ್ತಿದೆ.
ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ?
ಒಂದು ಮೂಲದ ಪ್ರಕಾರ ಮುಖ್ಯಮಂತ್ರಿಗಳ ಜತೆ ಮುನಿಸಿಕೊಂಡಿರುವ ಜಿಲ್ಲೆಯ ನಾಯ ಕರು ಉದ್ದೇಶಪೂರ್ವಕವಾಗಿಯೇ ಈ ವಿವಾದ ದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಖ್ಯ ಮಂತ್ರಿಯವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇದರ ಉದ್ದೇಶ. ಹೀಗಾಗಿ ಜಿಲ್ಲೆಯ ನಾಯಕರ ತಟಸ್ಥ ನಿಲುವು ಮಹಾರಾಷ್ಟ್ರದ ನಾಯಕರಿಗೆ ವರವಾಗಿ ಬದಲಾಗಿದೆ.
ಬೊಮ್ಮಾಯಿ ಸಿಎಂ ಆದ ಬಳಿಕ ಮಹಾರಾಷ್ಟ್ರದ ಜತೆಗೆ ಅನೇಕ ಮಹತ್ವದ ಮಾತುಕತೆಗಳು ಸ್ಥಗಿತ ಗೊಂಡಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಮುಖ್ಯವಾಗಿ ಕುಡಿಯುವ ನೀರಿನ ವಿಷಯದಲ್ಲಿ ಕೃಷ್ಣಾ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದ ಜತೆಗೆ ಶಾಸನಬದ್ಧ ಒಡಂಬಡಿಕೆ ಮಾಡಿಕೊಳ್ಳಬೇಕಾಗಿದೆ.
- ಕೇಶವ ಆದಿ