ಜಾನುವಾರು ಅಕ್ರಮ ಸಾಗಾಟ ಪ್ರಕರಣ: ಓರ್ವನ ಬಂಧನ
Team Udayavani, Mar 27, 2023, 5:34 AM IST
ಬಂಟ್ವಾಳ: ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ತುಂಬಿಸಿ ಅಕ್ರಮ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಫರಂಗಿಪೇಟೆ ಸಮೀಪದ ಅಮ್ಮೆಮಾರ್ನಲ್ಲಿ ವಾಹನ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಕಪ್ ಚಾಲಕ ಪ್ರವೀಣ್ ಪ್ರದೀಪ್ ಫೆರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು, ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ವಾಹನದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿದ್ದ ಎರಡು ಕರು ಸಹಿತ ಪಿಕಪ್ ವಾಹನ ಸೇರಿ ಒಟ್ಟು ಹಲವು ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಉದಯರವಿ ವೈ.ಎಂ. ಅವರ ತಂಡ ಮಾ. 25ರಂದು ಫರಂಗಿಪೇಟೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಬಂದ ಮಾಹಿತಿಯಂತೆ ಅಮ್ಮೆಮಾರ್ ರೈಲ್ವೇ ಕ್ರಾಸಿಂಗ್ ಬಳಿ ಪಿಕಪ್ ವಾಹನವನ್ನು ತಡೆದಾಗ ಜಾನುವಾರು ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಈ ವೇಳೆ ಇಬ್ಬರು ಪ್ರಮುಖ ಆರೋಪಿಗಳಾದ ರೋಯಲ್ ಸಲ್ದಾನ ಹಾಗೂ ಸಮೀಮ್ ಅಡ್ಯಾರ್ಪದವು ಪರಾರಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.