Atiq Ahmed Case: ಅತೀಕ್ ಕಚೇರಿಯಲ್ಲಿ ರಕ್ತದ ಕಲೆಗಳಿರುವ ಚಾಕು, ಬಟ್ಟೆ ಪತ್ತೆ
ವಿಧಿವಿಜ್ಞಾನ ತಂಡದಿಂದ ರಕ್ತದ ಮಾದರಿ ಸಂಗ್ರಹ
Team Udayavani, Apr 25, 2023, 8:00 AM IST
ಪ್ರಯಾಗ್ರಾಜ್: ಇತ್ತೀಚೆಗೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ನ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಚಾಕಿಯಾದಲ್ಲಿರುವ ಕಚೇರಿಯನ್ನು ಪೊಲೀಸರು ಪರಿಶೀಲಿಸಿದಾಗ ಅನೇಕ ಸಂಗತಿಗಳು ಹೊರಬಿದ್ದಿವೆ.
ಕಚೇರಿಯ ಒಂದು ಕೊಠಡಿಯಲ್ಲಿ ರಕ್ತದ ಕಲೆಗಳಿರುವ ಚಾಕು ಮತ್ತು ಬಟ್ಟೆ ಪತ್ತೆಯಾಗಿವೆ. ಅಲ್ಲದೇ ಮೆಟ್ಟಿಲುಗಳ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳಿವೆ. ಮತ್ತೂಂದು ಕೊಠಡಿಯಲ್ಲಿ ರಕ್ತದಿಂದ ತುಂಬಿರುವ ದುಪ್ಪಟ್ಟಾ ಮತ್ತು ಬಳೆಗಳು ದೊರೆತಿವೆ. ಕಚೇರಿಯ ಒಂದು ಭಾಗವನ್ನು ಈಗಾಗಲೇ ಕೆಡವಲಾಗಿದೆ. ಕೊಠಡಿಯಲ್ಲಿ ಕಂಡುಬಂದ ರಕ್ತದ ಕಲೆಗಳು ತಾಜಾ ಆಗಿವೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ರಕ್ತದ ಮಾದರಿಯನ್ನು ಸಂಗ್ರಹಿಸಲು ಮತ್ತು ಇದು ಎಷ್ಟು ಹಳೆಯದು ಎಂದು ಪತ್ತೆಹಚ್ಚಲು ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನು ಕರೆಸಲಾಗುತ್ತದೆ. ಈ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಸಾಧು ಶವ ಪತ್ತೆ:
ಪಶ್ಚಿಮ ಬಂಗಾಳದ ಬಿಭೂಮ್ ಜಿಲ್ಲೆಯ ಪುರಂದರ್ಪುರ್ನ ಕಾಳಿ ದೇಗುಲದ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಘೋರಿ ಸಾಧು ಒಬ್ಬರ ಶವ ಪತ್ತೆಯಾಗಿದೆ. ಇವರನ್ನು ಭೂವನ್ ಬಾಬಾ ಎಂದು ಗುರುತಿಸಲಾಗಿದೆ.
“ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಕೊಲೆಗೆ ಪ್ರತೀಕಾರವಾಗಿ ಸಾಧು ಹತ್ಯೆ ಮಾಡಿ, ಮರಕ್ಕೆ ಬಿಗಿಯಲಾಗಿದೆ. ತೃಣಮೂಲ ಕಾಂಗ್ರೆಸ್ನಿಂದ “ನೇತಾಡುವ ಬಂಗಾಳ’ ಪದ್ಧತಿ ಜಾರಿಯಲ್ಲಿದೆ. ಅವರು ವ್ಯಕ್ತಿಯನ್ನು ಹತ್ಯೆ ಮಾಡಿ, ನೇಣು ಬಿಗಿಯುತ್ತಾರೆ. ಇದೇ ರೀತಿ ಸಾಧು ಪ್ರಕರಣದಲ್ಲೂ ನಡೆದಿದೆ,’ ಎಂದು ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕ ಸುವೇಂಧು ಅಧಿಕಾರಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈಗ ಕಾನೂನು ಮತ್ತು ಸುವ್ಯಸ್ಥೆ ಸುಧಾರಿಸಿದೆ. ಈ ಹಿಂದೆ ಮಾಫಿಯಾದಿಂದ ಗುರುತಿಸುತ್ತಿದ್ದ ರಾಜ್ಯವನ್ನು, ಇದೀಗ ಭವ್ಯ ಹಬ್ಬಗಳ ಆಚರಣೆಯ ಕಾರಣದಿಂದ ಗುರುತಿಸಲಾಗುತ್ತಿದೆ.
– ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ