ಅವಿನಾಶ್ ಈಗ ನಿರ್ದೇಶಕ
Team Udayavani, May 7, 2023, 4:11 PM IST
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ, ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ, ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ನರಸಿಂಹರಾಜು ಈಗ ನಿರ್ದೇಶನದತ್ತ ಮುಖ ಮಾಡಿದ್ದಾರೆ.
“ಜುಗಾರಿ’ “ಚೇಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅವಿನಾಶ್, ಈಗ “ರುದ್ರಾಂಕುಶ’ ಎಂಬ ಹೆಸರಿನ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಸದ್ಯ ಈ ಸಿನಿಮಾದ ಒಂದು ಸಣ್ಣ ಝಲಕ್ ಅನ್ನೂ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಇನ್ನು ಹಿರಿಯ ನಟ ನರಸಿಂಹರಾಜು ಅವರು ಹುಟ್ಟಿ ಈ ವರ್ಷ 100 ವರ್ಷಗಳು ಆಗುತ್ತಿದೆ. ಇದೇ ಜು. 24 ರಂದು ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ “ರುದ್ರಾಂಕುಶ’ ಸಿನಿಮಾದ ಟೀಸರ್ ಅನ್ನು ಅಂದೇ ರಿಲೀಸ್ ಮಾಡಲು ಅವಿನಾಶ್ ಪ್ಲಾನ್ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಸಿನಿಮಾದ ಬಗ್ಗೆ ಒಂದಷ್ಟು ಅಪ್ಡೇಟ್ ಕೂಡ ನೀಡಲಿದ್ದಾರೆ.