CSK: ರೈಲು ನಿಲ್ದಾಣದಲ್ಲಿ ರಾತ್ರಿ ಕಳೆದ ಚೆನ್ನೈ ಅಭಿಮಾನಿಗಳು
Team Udayavani, May 30, 2023, 7:36 AM IST
ಅಹ್ಮದಾಬಾದ್: ಐಪಿಎಲ್ ಇತಿಹಾದಲ್ಲೇ ಮೊದಲ ಬಾರಿಗೆ ಫೈನಲ್ ಪಂದ್ಯ ಮೀಸಲು ದಿನಕ್ಕೆ ಕಾಲಿಟ್ಟ ಪರಿಣಾಮ ಅನೇಕರು ಸಂಕಟಕ್ಕೆ ಸಿಲುಕಬೇಕಾಯಿತು. ಮುಖ್ಯವಾಗಿ ಅನ್ಯ ರಾಜ್ಯಗಳಿಂದ ಪಂದ್ಯ ವೀಕ್ಷಿಸಲೆಂದು ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳ ಪಾಲಿಗೆ ಈ ವಿದ್ಯಮಾನ ತ್ರಿಶಂಕುವಾಗಿ ಪರಿಣಮಿಸಿತು. ಅತ್ತ ಮನೆಗೂ ತೆರಳಲಾಗದೆ, ಇತ್ತ ಮೀಸಲು ದಿನದ ಪಂದ್ಯವನ್ನೂ ಬಿಡಲಾಗದೆ ಪರದಾಡಿದರು. ಪರಿಣಾಮ, ಇವರೆಲ್ಲ ಅಹ್ಮದಾಬಾದ್ ರೈಲು ನಿಲ್ದಾಣದಲ್ಲೇ ರಾತ್ರಿಯನ್ನು ಕಳೆಯಬೇಕಾಯಿತು.
ಚೆನ್ನೈ, ಬೆಂಗಳೂರು, ಕೊಚ್ಚಿ, ಚಂಡೀ ಗಢ, ಹೊಸದಿಲ್ಲಿ ಮೊದಲಾದೆಡೆಯಿಂದ ಧೋನಿ ಪಡೆಯ ಆಟ ಕಾಣಲು ಅಭಿ ಮಾನಿಗಳು ಆಗಮಿಸಿದ್ದರು. ಅನೇಕರು ಕುಟುಂಬ ಸಮೇತ ಬಂದಿದ್ದರು. ಇವರೆಲ್ಲ ತವರಿಗೆ ಮರಳಲಾಗದೆ ಪರದಾಡಬೇಕಾಯಿತು.
ಇವರಲ್ಲಿ ಹೆಚ್ಚಿನವರು ಅಹ್ಮದಾ ಬಾದ್ನ ಲಾಡ್ಜ್ನಲ್ಲಿ ತಂಗಿದ್ದರು. ಪಂದ್ಯ ಮುಗಿದೊಡನೆ ನೇರವಾಗಿ ಮನೆಗೆ ಮರಳಲು ರೈಲ್ವೇ ಟಿಕೆಟ್ಗಳನ್ನೂ ಖರೀದಿಸಿದ್ದರು. ಆದರೆ ಮಳೆಯಿಂದಾಗಿ ಪಂದ್ಯ ಸೋಮವಾರಕ್ಕೆ ಮುಂದೂಡಲ್ಪಿಟ್ಟತು. ಮತ್ತೆ ಹೊಟೇಲಿಗೆ ತೆರಳಿ ವಾಸ್ತವ್ಯ ಹೂಡುವ ಸ್ಥಿತಿಯಲ್ಲಿ ಇವರಿರಲಿಲ್ಲ. ಹೀಗಾಗಿ ರೈಲು ನಿಲ್ದಾಣಕ್ಕೆ ತೆರಳಿ ಪ್ಲಾಟ್ಫಾರ್ಮ್ನಲ್ಲೇ ಮಲಗಿ ರಾತ್ರಿ ಕಳೆದರು. ಹೇಗಾದರೂ ಮಾಡಿ ಪಂದ್ಯವನ್ನು ನೋಡಿಯೇ ಹೋಗಬೇಕೆಂಬುದು ಇವರ ಉದ್ದೇಶವಾಗಿತ್ತು. ಅಲ್ಲದೆ ರವಿವಾರದ ಟಿಕೆಟ್
ಮೀಸಲು ದಿನಕ್ಕೂ ಅನ್ವಯವಾಗುವ ಕಾರಣ ಬಹುತೇಕ ಮಂದಿ ಚೆನ್ನೈ ತಂಡದ ಹಳದಿ ಜೆರ್ಸಿಯನ್ನೇ ಧರಿಸಿದ್ದರು. ಈ ಚಿತ್ರ ವೈರಲ್ ಆಗಿದೆ. ಇದು ಚೆನ್ನೈ ತಂಡದ ಹಾಗೂ ಧೋನಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತದೆ.