ಅಕ್ರಮ ಚಿನ್ನ ಪತ್ತೆ, ಇಬ್ಬರ ಬಂಧನ
Team Udayavani, Feb 10, 2017, 3:45 AM IST
ಮಂಗಳೂರು: ಕೇಂದ್ರ ಸರಕಾರದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ.) ದ ಮಂಗಳೂರು ಕೇಂದ್ರದ ಅಧಿಕಾರಿಗಳು ಬುಧವಾರ ಮಿಂಚಿನ ಕಾರ್ಯಾಚರಣೆ ನಡೆಸಿ ದುಬಾೖನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೇರಳದ ಕಾಸರಗೋಡಿಗೆ ಅಕ್ರಮವಾಗಿ ಸಾಗಿಸಲೆತ್ನಿಸಿದ 20,24,780 ರೂ. ಮೌಲ್ಯದ 698.200 ಗ್ರಾಂ ಚಿನ್ನವನ್ನು ವಶ ಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಕಾಸರಗೋಡಿನ ಹಾರಿಸ್ ಪನಲಂ ಮಹಮದ್ ಕುಂಞಿ (42) ಮತ್ತು ಪಯ್ಯನ್ನೂರಿನ ಫೈಝಲ್ (42) ಬಂಧಿತರು.
ದುಬಾೖನಿಂದ ವಿಮಾನ ಮೂಲಕ ಅಕ್ರಮವಾಗಿ ಸಾಗಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಿ ಚಿನ್ನವನ್ನು ಕಾರಿನಲ್ಲಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದಾಗ ಪಂಪ್ವೆಲ್ ವೃತ್ತದ ಬಳಿ ಡಿಆರ್ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.
ಕಾಸರಗೋಡು ಮೂಲದ ಪ್ರಯಾಣಿಕರನ್ನು ಬಳಸಿಕೊಂಡು ಕೆಲವು ಶಕ್ತಿಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿಮಾನ ನಿಲ್ದಾಣದ ಕಸ್ಟಮ್ಸ್ ಸ್ಕ್ಯಾನಿಂಗ್ ಯಂತ್ರವನ್ನು ತಪ್ಪಿಸಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದಾರೆ ಹಾಗೂ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಬಳಿಕ ಚಿನ್ನವನ್ನು ಪಂಪ್ವೆಲ್ ಸಮೀಪ ಕಳ್ಳ ಸಾಗಾಟಗಾರರ ಏಜೆಂಟನೋರ್ವನಿಗೆ ಹಸ್ತಾಂತರಿಸಲಾಗುತ್ತಿದೆ ಎಂಬ ಮಾಹಿತಿ ಡಿಆರ್ಐ ಅಧಿಕಾರಿಗಳಿಗೆ ಬುಧವಾರ ಬೆಳಗ್ಗೆ ಲಭಿಸಿತ್ತು. ಮಾಹಿತಿಯ ಬೆಂಬತ್ತಿ ಕಾರ್ಯಪ್ರವೃತ್ತರಾದಾಗ ಆಗ ತಾನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬಾೖನಿಂದ ಬಂದಿಳಿದ ಜೆಟ್ ಏರ್ವೆàಸ್ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನೊಬ್ಬ ಪಂಪ್ವೆಲ್ ಕಡೆಗೆ ಕಾರಿನಲ್ಲಿ ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಹಾಗೆ ಡಿಆರ್ಐ ಅಧಿಕಾರಿಗಳು ಪಂಪ್ವೆಲ್ ಕಡೆಗೆ ದೌಡಾಯಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು.
ಪಂಪ್ವೆಲ್ನಲ್ಲಿ ಅಧಿಕಾರಿಗಳು ಕಾಯುತ್ತಿದ್ದಾಗ ಮಾರುತಿ ಆಲ್ಟೋ ಕಾರೊಂದು ವೇಗವಾಗಿ ಬಂದು ಪೆಟ್ರೋಲ್ ಪಂಪ್ ಬಳಿ ನಿಂತಿದೆ. ಅಷ್ಟರಲ್ಲಿ ಅಲ್ಲಿಯೇ ಕಾಯುತ್ತಿದ್ದ ವ್ಯಕ್ತಿಯೊಬ್ಬ ಕಾರಿನ ಬಳಿ ಹೋಗಿದ್ದಾನೆ. ಕಾರಿನ ಬಳಿಗೆ ಹೋದ ವ್ಯಕ್ತಿ ಮತ್ತು ಕಾರಿನಲ್ಲಿದ್ದವರು ಮಾತುಕತೆ ನಡೆಸುತ್ತಿದ್ದಾಗ ಸಂಶಯಗೊಂಡ ಡಿಆರ್ಐ ಅಧಿಕಾರಿಗಳು ಕಾರನ್ನು ಸುತ್ತುವರಿದು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿ ಹಾರಿಸ್ ಪನಲಂ ಮಹಮದ್ ಕುಂಞಿ ಆಗ ತಾನೇ ದುಬಾೖನಿಂದ ವಿಮಾನದಲ್ಲಿ ಬಂದಿಳಿದವನಾಗಿದ್ದು, ಪಂಪ್ವೆಲ್ನಲ್ಲಿ ಕಾಯುತ್ತಿದ್ದವನ್ನು ಫೈಝಲ್ ಎಂದು ವಿಚಾರಣೆಯಿಂದ ಗೊತ್ತಾಗಿದೆ.
ಆ್ಯಂಪ್ಲಿಫೈರ್ನಲ್ಲಿತ್ತು ಚಿನ್ನ
ಅಕ್ರಮ ಚಿನ್ನ ಹೊಂದಿದ್ದ ಲಗ್ಗೇಜ್ ಕಾರಿನ ಹಿಂಬದಿಯ ಸೀಟಿನಲ್ಲಿ ಇರಿಸಲಾಗಿತ್ತು. ಚಿನ್ನವನ್ನು ಪೋರ್ಟಬಲ್ ವೈರ್ಲೆಸ್ ಆ್ಯಂಪ್ಲಿಫೈರ್ನಲ್ಲಿ ಅಡಗಿಸಿಡಲಾಗಿತ್ತು. 24 ಕ್ಯಾರೆಟ್ನ ಚಿನ್ನವನ್ನು ಕರಗಿಸಿ ತೆಳು ತಗಡುಗಳನ್ನಾಗಿಸಿ ಬಳಿಕ ಅದನ್ನು ಇಂಗ್ಲಿಷ್ನ “ಇ’ ಮತ್ತು “ಐ’ ಆಕಾರದಲ್ಲಿ ಕತ್ತರಿಸಿ ಅದಕ್ಕೆ ಪಾದರಸದ ಲೇಪನ ಕೊಟ್ಟು ಬಳಿಕ ಅವುಗಳನ್ನು ಆ್ಯಂಪ್ಲಿಫೈರ್ನ ಒಂದು ಭಾಗದಲ್ಲಿರುವ ಟ್ರಾನ್ಸ ಫಾರ್ಮರ್ (ಕಾಯಿಲ್)ನ ಒಳಗೆ ಗಟ್ಟಿಯಾಗಿ ಪ್ಯಾಕ್ ಮಾಡಲಾಗಿತ್ತು.
ಹಣಕ್ಕಾಗಿ ಮತ್ತು ಉಚಿತ ವಿಮಾನ ಟಿಕೆಟ್ಗಾಗಿ ತಾನು ಈ ಚಿನ್ನವನ್ನು ಆಂಪ್ಲಿಫೈರ್ನ ಒಳಗೆ ಬಚ್ಚಿಟ್ಟು ದುಬಾಯಿನಿಂದ ಮಂಗಳೂರಿಗೆ ತರಲು ಸಮ್ಮತಿಸಿದ್ದೆನು. ವಿಮಾನ ನಿಲ್ದಾಣದಿಂದ ಹೊರಗೆ ಬಂದ ಬಳಿಕ ಅದನ್ನು ಪಂಪ್ವೆಲ್ನಲ್ಲಿ ಕಾಯುತ್ತಿದ್ದ ಫೈಝಲ್ನಿಗೆ ಹಸ್ತಾಂತರಿಸ ಬೇಕು ಎಂದು ತನಗೆ ಸೂಚಿಸಲಾಗಿತ್ತು ಎಂದು ಹಾರಿಸ್ ಪನಲಂ ಮಹಮದ್ ಕುಂಞಿ ತಿಳಿಸಿದ್ದಾನೆ.
ಆರೋಪಿ ಫೈಝಲ್ ತಾನು ಈ ಹಿಂದೆ ಕೂಡ ಇಂತಹ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ತಾನು ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿನ್ನವನ್ನು ಕಾಸರಗೋಡಿನಲ್ಲಿರುವ ಇನ್ನೋರ್ವ ಏಜಂಟನಿಗೆ ತಾನು ತಲುಪಿಸುತ್ತಿದ್ದು, ಅಲ್ಲಿಂದ ಅದು ಈ ಜಾಲದ ಕಿಂಗ್ಪಿನ್ಗೆ ತಲಪುತ್ತದೆ ಎಂದು ಆತ ವಿವರಿಸಿದ್ದಾನೆ.
ನ್ಯಾಯಾಂಗ ಬಂಧನ: ಇಬ್ಬರೂ ಆರೋಪಿಗಳನ್ನು ಮಂಗಳೂರಿನ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಮಕ್ಷಮ ಹಾಜರು ಪಡಿಸಲಾಗಿದ್ದು, ಇಬ್ಬರಿಗೂ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಅಕ್ರಮ ಚಿನ್ನ ಸಾಗಾಟದ ಹಿಂದೆ ದೊಡ್ಡ ಜಾಲವೇ ಇದ್ದು, ಅದನ್ನು ಪತ್ತೆ ಹಚ್ಚಲು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.