ತ್ಯಾಜ್ಯ ನಿರ್ವಹಣೆಗೆ ನಾವೇ ನಾಂದಿ ಹಾಡಬೇಕು


Team Udayavani, Mar 11, 2017, 3:45 AM IST

Waste.jpg

ಎಲ್ಲವನ್ನೂ ನಾವು ಹಣದ ತುಲಾಭಾರದಲ್ಲಿ ತೂಗಿ ಮೌಲ್ಯ ನಿಗದಿಪಡಿಸುತ್ತಿದ್ದೇವೆ. ಶುದ್ಧ ಸಂಪನ್ಮೂಲಗಳ ಬೆಲೆಯೇ ಅರಿಯದ ನಮಗೆ ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ತೋರುತ್ತಿರುವುದು ಅತ್ಯಂತ ಸಹಜವೇ.

ಹೀಗೆ ಮಾಡಿದರೆ ಹೇಗೆ?
ಇಂಥದ್ದೇ ಒಂದು ಪ್ರಶ್ನೆಯಿಂದ ಎಲ್ಲ ಸಂಶೋಧನೆಗಳು, ಒಳ್ಳೆಯ ಕ್ರಮಗಳು, ಅನುಸರಣಾ ನೀತಿಗಳು ಸಮಾಜದಲ್ಲಿ ಆರಂಭವಾಗುವಂಥದ್ದು. ಬಹುಶಃ ಥಾಮಸ್‌ ಅಲ್ವಾ ಎಡಿಸನ್‌ ಸಹ ತನ್ನ ಸಂಶೋಧನೆಗಳಿಗೆ ಇಂಥದ್ದೇ ಒಂದು ಪ್ರಶ್ನೆಯನ್ನು ಇಟ್ಟುಕೊಂಡು ಮುಂದಾಗಿರಬೇಕು. ಅದರಲ್ಲೂ ನಾಗರಿಕ ಸಮಾಜಗಳಲ್ಲಿ ಅಂದರೆ ಆಧುನಿಕ ಸಂದರ್ಭದಲ್ಲಿ ಬಹುಪಾಲು ಹೊಸ ರಚನಾತ್ಮಕ ಕ್ರಮಗಳು/ಆವಿಷ್ಕಾರಗಳು ನಡೆದಿರುವುದು ಇಂಥದ್ದೇ ಒಂದು ಪ್ರಶ್ನೆಯ ಹಿನ್ನೆಲೆಯಲ್ಲೇ.

ನಗರಗಳ ಅತ್ಯಂತ ದೊಡ್ಡ ಸಮಸ್ಯೆಯಾದ ತ್ಯಾಜ್ಯ ನಿರ್ವಹಣೆಗೆ ಇಂಥದ್ದೇ ಒಂದು ಪ್ರಶ್ನೆಯ ಹಿಂದೆ ಕೆಲಸ ಮಾಡಬೇಕಾದ ಹೊತ್ತಿದು. ಇಡೀ ವರ್ಷದಲ್ಲಿ ಪ್ರತಿ ದಿನವೂ ಯಾವುದಾದರೂ ಒಂದು ಮೂಲೆಯಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ, ಉದಾಸೀನವನ್ನು ಜನರು ಪ್ರಶ್ನಿಸುತ್ತಲೇ ಇರುತ್ತಾರೆ. ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಾರೆ. ಸ್ಥಳೀಯ ಪಂಚಾಯಿತಿಗಳ ತ್ಯಾಜ್ಯ ಸಂಗ್ರಹದ ಲಾರಿಗಳನ್ನು ತಡೆಯುತ್ತಾರೆ. ಇದು ಒಂದು ಬದಿಯಲ್ಲಿ ನಡೆದರೆ, ಮತ್ತೂಂದು ಬದಿಯಲ್ಲಿ ಅದೇ ಜನರನ್ನು ಏನಾದರೊಂದು ನೆವ ಹೇಳಿ, ಕೊನೆಗೆ ಕಾಲು-ಕೈ ಹಿಡಿದೋ ಮತ್ತೆ ರಾಶಿ ರಾಶಿ ತ್ಯಾಜ್ಯವನ್ನು ತಂದು ಸುರಿಯುತ್ತೇವೆ. ರಾಶಿ ಬೆಟ್ಟದಷ್ಟು ಬೆಳೆಯುತ್ತಲೇ ಇರುತ್ತದೆ. ಎಲ್ಲಾದರೂ ಏನಾದರೂ ಅನಾಹುತ ಘಟಿಸಿದರೆ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಎಲ್ಲವೂ ಸರಿ ಇದೆ ಎನ್ನುವಂತೆ ಪ್ರದರ್ಶನ ಕೊಟ್ಟು ಸುಮ್ಮನಾಗುತ್ತೇವೆ. ಇದು ವಾಸ್ತವ.

ಹಾಗೆಂದು ಬಹಳ ಬೇಸರದಿಂದ ಎಲ್ಲ ವ್ಯವಸ್ಥೆಯೂ ಹೀಗೆಯೇ ಎಂದು ನಿರ್ಧಾರಕ್ಕೆ ಬಂದು ಬಿಡಬೇಕಾಗಿಲ್ಲ. ಇತ್ತೀಚೆಗಷ್ಟೇ ಆಲೆಪ್ಪಿಯಲ್ಲಿ ಕೈಗೊಂಡ ಸುಧಾರಣೆ ಬಗ್ಗೆ ತಿಳಿದಿದ್ದೆವು. ರಾಜ್ಯದ ಮೈಸೂರಿನಲ್ಲೂ ಅಂಥದ್ದೇ ಒಂದು ಪ್ರಯತ್ನ ನಡೆಯುತ್ತಿದೆ. ಈಗ ಗ್ರಾಮ ಪಂಚಾಯತ್‌ಗಳೂ ತ್ಯಾಜ್ಯ ನಿರ್ವಹಣೆ ಘಟಕ ಹೊಂದುವ, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಹೊತ್ತಿವೆ. ಇದರ ಮಧ್ಯೆಯೇ ನಮಗೆ ಯಾವುದರ ಉಸಾಬರಿಯೂ ಬೇಡ ಎಂದು ಹೇಳುವ ಸ್ಥಳೀಯ ಸಂಸ್ಥೆಗಳೂ ಇವೆ, ಅಧಿಕಾರಶಾಹಿಯೂ ಇದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ ಎಂದುಕೊಳ್ಳೋಣ. 

ಮನೆಯೊಳಗೆ ಏನಾದರೂ ಮಾಡಲು ಸಾಧ್ಯವೇ?
ತ್ಯಾಜ್ಯ ನಿರ್ವಹಣೆಯ ಕುರಿತು ಹೆಚ್ಚು ತಲೆಕೆಡಿಸಿಕೊಂಡಾಗ ನನ್ನ ತಲೆಯೊಳಗೆ ಹೊರಟ ಮತ್ತೂಂದು ಪ್ರಶ್ನೆಯೆಂದರೆ, ನಮ್ಮ ಮನೆಯೊಳಗೆ ಏನಾದರೂ ಮಾಡಲು ಸಾಧ್ಯವೇ? ಎಂಬುದು. ಯಾಕೆಂದರೆ, ಇದಕ್ಕೂ ಒಂದು ಸ್ಪಷ್ಟ ಕಾರಣವಿದೆ. ಇಂದು ಜಗತ್ತಿನಾದ್ಯಂತ ತ್ಯಾಜ್ಯ ನಿರ್ವಹಣೆಯಲ್ಲಿ ಯಶಸ್ವಿಯಾಗಿರುವ ರಾಷ್ಟ್ರಗಳಲ್ಲಿ (ಜರ್ಮನಿ, ಸಿಂಗಾಪುರ ಇತ್ಯಾದಿ) ಹೆಚ್ಚು ಗಮನ ಕೊಟ್ಟಿರುವುದು ಕಸ ಕಡಿಮೆ ಮಾಡುವ ಬಗ್ಗೆ. ಇದರೊಂದಿಗೆ ಕಸ ವಿಂಗಡಣೆಗೆ ಒತ್ತು ಕೊಟ್ಟಿರುವುದು ಸ್ಪಷ್ಟ. ತ್ಯಾಜ್ಯ ನಿರ್ವಹಣೆಯಲ್ಲಿ ಬಹಳ ಮಹತ್ವದ ಮತ್ತು ಪ್ರಮುಖ ಹಂತಗಳಿವು. ಕಸ ಉತ್ಪತ್ತಿಯಾಗದಂತೆ ನೋಡಿಕೊಳ್ಳುವ ಕ್ರಮ, ಮರುಬಳಕೆಯ ಕ್ರಮಗಳತ್ತ ಗಮನಹರಿಸಬೇಕೆನ್ನುತ್ತಾರೆ ಹಲವು ತಜ್ಞರು. 

ಅದರಲ್ಲೂ ಮನೆಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ, ಹೊಟೇಲ್‌ಗ‌ಳಲ್ಲಿ, ಇನ್ನಿತರ ಅಂಗಡಿ ಮಳಿಗೆಗಳಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯ ಇಡೀ ಸಮಸ್ಯೆಯ ಚಿತ್ರಣವನ್ನು ಬಿಗಡಾಯಿಸುವಂತೆ ಮಾಡುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಒಂದು ವಾರದ ಹಿಂದೆ ಬನ್ನೂರಿನ ಡಂಪಿಂಗ್‌ ಯಾರ್ಡ್‌ನ ಕಸದ ರಾಶಿಗೆ ಬೆಂಕಿ ಬಿದ್ದು ಸುತ್ತಲಿನ ಆರೋಗ್ಯವನ್ನು ಕೆಡಿಸಿದ್ದನ್ನು ನಾವು ಕೇಳಿದ್ದೇವೆ. ಅಲ್ಲಿಯೂ ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿರುವುದು ಈ ತ್ಯಾಜ್ಯಗಳಲ್ಲಿ ಸೇರುತ್ತಿರುವ ಹಸಿ ತ್ಯಾಜ್ಯ. ಮೊನ್ನೆಯ ಘಟನೆಗೆ ಬೆಂಕಿ ಬಿದ್ದು ಸೃಷ್ಟಿಯಾದ ಹೊಗೆ ಇರಬಹುದು. ಆದರೆ, ಈ ತ್ಯಾಜ್ಯಗಳ ಮೇಲೆ ಮಳೆ ನೀರು ಬಿದ್ದು, ಅವೆಲ್ಲವೂ ಕೊಳೆತು ಸೊಳ್ಳೆಗಳ ಆವಾಸಿ ತಾಣವಾಗಿ ಬದಲಾಗುತ್ತದೆ. 

ಅಲ್ಲಿಂದ ಅನಾರೋಗ್ಯಗಳ ಸರಮಾಲೆ ಆರಂಭವಾಗುತ್ತದೆ. ಈ ಕಸ ವಿಂಗಡಣೆಗೇ ಮಹತ್ವ ಕೊಟ್ಟರೆ ಸಮಸ್ಯೆಯ ನಿರ್ವಹಣೆ ನಿಜಕ್ಕೂ ಸುಲಭ. ಅದರಲ್ಲೂ ಜೈವಿಕ ತ್ಯಾಜ್ಯ (ಹಸಿ ತ್ಯಾಜ್ಯ)ವನ್ನು ಆದಷ್ಟು ನಮ್ಮ ಮನೆಗಳಲ್ಲೇ ನಿರ್ವಹಣೆ ಮಾಡಲು ಯಶಸ್ವಿಯಾದರಂತೂ ನಗರಕ್ಕೆ ಪೆಡಂಭೂತವಾಗಿ ಕಾಡುತ್ತಿರುವ ಈ ಸಮಸ್ಯೆ ಬಹುಪಾಲು ನಿವಾರಣೆಯಾದಂತೆಯೇ. 

ಯಾವುದಕ್ಕೆ ಮೌಲ್ಯ ಕೊಡಬೇಕು
ಈ ತ್ಯಾಜ್ಯ ವಿಂಗಡಣೆ ಸಂಬಂಧ ಎಲ್ಲ ಸ್ಥಳೀಯ ಪಂಚಾಯಿತಿಗಳು ಸಾಕಷ್ಟು ಗಮನ ಕೊಡುತ್ತಿವೆ. ಜಗತ್ತಿನಲ್ಲೂ ತ್ಯಾಜ್ಯ ನಿರ್ವಹಣೆಯಲ್ಲಿ ಯಶಸ್ವಿಯಾದವರ ಕಥೆಗೂ ಇದೇ ಮುನ್ನುಡಿ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಪಾಲಿಕೆ ಸೇರಿದಂತೆ ಬಹುಪಾಲು ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ವಾರ್ಡ್‌ಗಳ ನಾಗರಿಕರಿಗೆ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕವಾದ ಬಕೆಟ್‌ (ಬಿನ್‌ಗಳನ್ನು) ನೀಡಲಾಯಿತು. ಹೇಗೆ ಕಸ ವಿಂಗಡಣೆ ಮಾಡಬೇಕೆಂಬುದನ್ನೂ ಹಲವೆಡೆ ಹೇಳಿಕೊಡಲಾಯಿತು. ಅದಾದ ಮೇಲೂ ಕೇಳಿಬರುತ್ತಿರುವ ದೂರೆಂದರೆ, “ನಾಗರಿಕರು ಕಸ ವಿಂಗಡಣೆಯನ್ನು ಸರಿಯಾಗಿ ಮಾಡುವುದಿಲ್ಲ. ಅದರಿಂದ ಸಮಸ್ಯೆ ಹೆಚ್ಚುತ್ತಿದೆ’ ಎಂಬುದು. ಇದರಲ್ಲಿ ಆಂಶಿಕ ಸತ್ಯವಿರಬಹುದು. ಪೂರ್ಣ ಸತ್ಯವಲ್ಲ. ಬಹಳಷ್ಟು ಜನರು ಮುತುವರ್ಜಿ ವಹಿಸಿ ಕಸ ನಿರ್ವಹಣೆಯನ್ನು ಮನೆಯಲ್ಲೇ ನಿರ್ವಹಿಸುವವರಿದ್ದಾರೆ. 

ಉದಾಹರಣೆಗೆ, ಮೈಸೂರಿನ ಶ್ಯಾಂಸುಂದರ್‌ ಎನ್‌ಐಇ ಕಾಲೇಜಿನ ಕ್ರೆಸ್ಟ್‌ ವಿಭಾಗದ ಮುಖ್ಯಸ್ಥರು. ಕ್ರೆಸ್ಟ್‌ ಎಂದರೆ ಹಲವು ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನಗಳ ಸಂಶೋಧನಾ ಕೇಂದ್ರ. ಇಲ್ಲಿ ನಡೆಯುತ್ತಿರುವ ಸಂಶೋಧನೆ ಈ ನೆಲೆಯದ್ದೇ. ಅವರ ಮನೆಯಲ್ಲಿ ಬಯೋಗ್ಯಾಸ್‌ ಘಟಕವನ್ನು ಸ್ಥಾಪಿಸಿದ್ದಾರೆ. ಮನೆಯಲ್ಲಿ ನಿರ್ಮಾಣವಾಗುವ ಹಸಿ ತ್ಯಾಜ್ಯವನ್ನು ಈ ಘಟಕದಲ್ಲಿ ಬಳಸಿ ಇಂಧನವನ್ನು ಪಡೆಯುತ್ತಾರೆ. ಇಡೀ ಮನೆಗೆ ಈ ಇಂಧನ ಸಾಲದು; ಆದರೆ ಸುಸ್ಥಿರ ಬದುಕಿಗೆ ಇದು ಅಡಿಪಾಯವಾಗಬಲ್ಲದು. ಈ ಬಗ್ಗೆ ಶ್ಯಾಂಸುಂದರ್‌ ಹೇಳುವ ಮಾತು ಚೆನ್ನಾಗಿದೆ, “ಸುಮಾರು ನೂರು ಕೆಜಿ ಜೈವಿಕ ತ್ಯಾಜ್ಯ ಸಾಮರ್ಥ್ಯದ ಬಯೋ ಘಟಕ ಮಾಡುವಾಗ ದುಬಾರಿ ಎನಿಸಬಹುದು. ಇದನ್ನು ಹಣಗಳಿಕೆಯ ಮಾರ್ಗ ಎನ್ನುವ ದೃಷ್ಟಿಯಲ್ಲಿ ನೋಡುವುದಕ್ಕಿಂತಲೂ ಸುಸ್ಥಿರ ಬದುಕಿನ ಹೂಡಿಕೆ ಎಂದು ನೋಡಿದಾಗ ಖರ್ಚು ಎನಿಸದು’ ಎನ್ನುತ್ತಾರೆ. 

ನಾವು ಎಲ್ಲವನ್ನೂ ಹಣದ ಲೆಕ್ಕದಲ್ಲಿ ಅಳೆಯುತ್ತಿದ್ದೇವೆ. ಹಾಗಾಗಿಯೇ ಹತ್ತು ಹಲವು ಸಮಸ್ಯೆಗಳು ಹೆಚ್ಚುತ್ತಿವೆ. ಸಂಪನ್ಮೂಲಗಳ ದೃಷ್ಟಿಯಲ್ಲಿ ನಾವು ಇಡೀ ಸನ್ನಿವೇಶವನ್ನು ಬದಲಾಯಿಸಿಕೊಂಡರೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ನಾವು ಮಾಡುವ ವೆಚ್ಚವೂ ದೊಡ್ಡದೆನಿಸುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ಇದರಿಂದ ಲಾಭವೇನು ಎಂಬ ಮಾತು ಹೊರಡುವುದಿಲ್ಲ. ಅಚ್ಚರಿ ಎನಿಸಬಹುದು. ನಮ್ಮ ಆಧುನಿಕ ಬದುಕನ್ನು ರೌರವ ಎನ್ನುವಂತೆ ಮಾಡಿಕೊಂಡಿರುವುದಕ್ಕೆ ಎಲ್ಲದರಲ್ಲೂ ಲಾಭವನ್ನು ಹುಡುಕುವ ದೃಷ್ಟಿಯೇ ಕಾರಣ. ಗ್ರಾಹಕ ಮನೋಧರ್ಮಕ್ಕೂ ಮನುಷ್ಯನ ಮನೋಧರ್ಮಕ್ಕೂ ವ್ಯತ್ಯಾಸವಿದೆ. ಮಾರುಕಟ್ಟೆಗಳಿಗೆ ಗ್ರಾಹಕರು ಬೇಕು. ಆದರೆ, ಸಮಾಜಕ್ಕೆ ಮನುಷ್ಯರು ಬೇಕು!

ಇಷ್ಟಾದರೂ ಮಾಡೋಣ
ಸಮಾಜದ ಆರೋಗ್ಯವನ್ನು ಕಾಪಾಡುವುದರಲ್ಲಿ ಬರೀ ಆಡಳಿತ ವ್ಯವಸ್ಥೆಯ ಪಾತ್ರವಿರುವುದಿಲ್ಲ. ನಾಗರಿಕ ಸಮಾಜದ ಭಾಗೀದಾರರಾದ ನಮ್ಮ ಪಾಲೂ ಅಷ್ಟೇ ಇದೆ. ನೀತಿ ನಿರೂಪಣೆಯ ಕೆಲಸಗಳನ್ನು ಆಡಳಿತ ನಡೆಸುವವರು ಕೈಗೊಳ್ಳಬಹುದು. ಆದರೆ, ಆ ನೀತಿಯ ಅನುಷ್ಠಾನದ ಯಶಸ್ಸಿಗೆ ನಮ್ಮ ಪಾತ್ರ ತೀರಾ ಅವಶ್ಯ. ಹಕ್ಕಿನ ಬಗ್ಗೆ ಸದಾ ಮಾತನಾಡುವ ನಾವು ನಮ್ಮ ಹೊಣೆಗಾರಿಕೆಯನ್ನೂ ಅರ್ಥ ಮಾಡಿಕೊಳ್ಳುವ ಹೊತ್ತಿದು ಎಂದು ಬೇರೆ ಹೇಳಬೇಕಿಲ್ಲ.
ಇನ್ನೊಂದು ಕೊನೆಯ ಅಂಶವೆಂದರೆ, ನಾವು ನಮ್ಮ ಮನೆಯ ತ್ಯಾಜ್ಯವೆಂದಷ್ಟೇ ನೋಡುತ್ತಿದ್ದೇವೆ. ಅದು ಜನಾರೋಗ್ಯವನ್ನು ಹಾಳು ಮಾಡಬಹುದಾದ ವಿಷವೆಂದು ಪರಿಗಣಿಸುತ್ತಿಲ್ಲ. ಶುದ್ಧ ಸಂಪನ್ಮೂಲಗಳ ಬೆಲೆ ಅರಿಯದ್ದರಿಂದಲೇ ಇಂದು ಶುದ್ಧ ಗಾಳಿ, ಶುದ್ಧ ನೀರಿಗಾಗಿ ಬಡಿದಾಡುವಂತಾಗಿದೆ. ಹಣದ ರಾಶಿ ಸುರಿದರೂ ಶುದ್ಧ ಸಂಪನ್ಮೂಲಗಳು ಸಿಗದ ಸ್ಥಿತಿ ನಿರ್ಮಾಣವಾಗುತ್ತಿರುವಾಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ, ತೆರಬಹುದಾದ ದಂಡಕ್ಕೆ ಮಿತಿ ಇರದು.

– ಅರವಿಂದ ನಾವಡ

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.