ಕೇಜ್ರಿವಾಲ್ ವೈಭವೀಕರಣದ ಜಾಹೀರಾತು: ಆಪ್ ಪಾವತಿಸಬೇಕಿದೆ 97 ಕೋ.ರೂ.
Team Udayavani, Mar 30, 2017, 11:45 AM IST
ಹೊಸದಿಲ್ಲಿ : ಸುಪ್ರೀಂ ಕೋರ್ಟಿನ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಗೈದು ಪತ್ರಿಕೆಗಳಲ್ಲಿ ದಿಲ್ಲಿ ಸರಕಾರದ ಸರಣಿ ಜಾಹೀರಾತುಗಳನ್ನು ಪ್ರಕಟಿಸಿದ್ದರ ವೆಚ್ಚವಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೇ 97 ಕೋಟಿ ರೂ.ಗಳನ್ನು ಪಾವತಿಸಬೇಕು ಎಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅಪ್ಪಣೆ ಕೊಡಿಸಿದ್ದಾರೆ. ಒಂದು ತಿಂಗಳ ಒಳಗಾಗಿ ಆಮ್ ಆದ್ಮಿ ಪಕ್ಷ ಈ ಮೊತ್ತವನ್ನು ಪಾವತಿಸಬೇಕು ಎಂದವರು ಸೂಚಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಕೇಜ್ರಿವಾಲ್ ಅವರ ಪ್ರತಿಕ್ರಿಯೆ ಕೇಳಿದಾಗ, ರಾಜ್ಯಪಾಲರ ಆದೇಶದ ಪ್ರತಿ ಇನ್ನೂ ನನ್ನ ಕೈಸೇರಿಲ್ಲ; ಅದನ್ನು ನೋಡಿದ ಬಳಿಕವೇ ಆ ಬಗ್ಗೆ ನಾನು ಪ್ರತಿಕ್ರಿಯಿಸುವೆ’ ಎಂದು ಹೇಳಿದರು.
ಕೇಂದ್ರ ಸರಕಾರವು ನೇಮಿಸಿದ್ದ ಸಮಿತಿ, ದಿಲ್ಲಿ ಸರಕಾರ ದಿನಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಜಾಹೀರಾತುಗಳನ್ನು ಅವಲೋಕಿಸಿ ಮುಖ್ಯಮಂತ್ರಿ ಹಾಗೂ ಅವರ ಪಕ್ಷವನ್ನು ವೈಭವೀಕರಿಸುವ ಉದ್ದೇಶದೊಂದಿಗೆ ಪ್ರಕಟಿಸಲಾಗಿರುವ ಈ ಜಾಹೀರಾತುಗಳು ಸಾರ್ವಜನಿಕರ ಹಣದ ಸಾರಾಸಗಟು ದುರಪಯೋಗದ ನಿದರ್ಶನವಾಗಿದೆ ಎಂದು ವರದಿ ಕೊಟ್ಟಿತ್ತು.
ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಕೊಟ್ಟಿದ್ದ ದೂರಿನ ಮೇಲೆ ಕೇಂದ್ರ ಸರಕಾರವು ಸಮಿತಿಯನ್ನು ರೂಪಿಸಿ ದಿಲ್ಲಿ ಸರಕಾರ ಪ್ರಕಟಿಸಿದ್ದ ಜಾಹೀರಾತುಗಳ ಬಗ್ಗೆ ತನಿಖೆ ನಡೆಸಿತ್ತು.