ಸಾಮೂಹಿಕ ಅತ್ಯಾಚಾರದ ದೂರು ನೀಡಿ ಊರಿಗೆ ಹೋದ ಮಹಿಳೆ!
Team Udayavani, Apr 26, 2017, 11:37 AM IST
ಬೆಂಗಳೂರು: ನಾಲ್ಕು ಮಂದಿ ಅಪರಿಚಿತರು ತಮ್ಮನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ. ಆದರೆ ವಿಚಾರಣೆಗೆ ಸಹಕರಿಸುವ ಬದಲು ಊರಿಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ತಮ್ಮನ್ನು ಮಾ.30ರಂದು ತಡರಾತ್ರಿ ಕೋರಮಂಗಲದ ಬಳಿ ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು, ಬೆಳಗಿನ ಜಾವ 5 ಗಂಟೆವರೆಗೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ, ಸಂತ್ರಸ್ತೆ ಘಟನೆ ನಡೆದು 10 ದಿನಗಳ ಬಳಿಕ, ರಾಕೇಶ್, ರಾಜಪ್ಪ, ನರಸಿಂಹ, ಹಾಗೂ ಕಾರಿನ ಚಾಲಕ ಸೇರಿ ನಾಲ್ವರ ವಿರುದ್ಧ ದೂರು ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದೀಗ ಸಂತ್ರಸ್ತ ಮಹಿಳೆ ಊರಿಗೆ ತೆರಳಿದ್ದು, ದೂರು ನೀಡುವ ವೇಳೆ ಠಾಣೆಗೆ ಬಂದಿದ್ದ ಸ್ನೇಹಿತೆ ಕೂಡ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಂತ್ರಸ್ತ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಪತಿ ವಿಚ್ಛೇಧನ ನೀಡಿದ್ದಾರೆ.
ಈ ಆಘಾತದಿಂದ ಆಕೆ ಇನ್ನೂ ಹೊರಬಂದಿಲ್ಲ. ದೂರು ನೀಡುವ ಸಂದರ್ಭದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದರು. ಘಟನೆ ನಡೆದ ದಿನಾಂಕವೇ ಅವರಿಗೆ ಗೊತ್ತಿಲ್ಲ. ಮೊದಲಿಗೆ ಆರೋಪಿಗಳು ಅಪರಿಚಿತರು ಎನ್ನುತ್ತಿದ್ದರು. ಬಳಿಕ ದೂರಿನಲ್ಲಿ ಆರೋಪಿಗಳ ಹೆಸರು ಬರೆದಿದ್ದಾರೆ. ಆದರೆ, ದೂರಿನ್ವಯ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.