ಶ್ರೀ ಶ್ರೀಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ
Team Udayavani, Apr 28, 2017, 2:01 AM IST
ಹೊಸದಿಲ್ಲಿ: ಕೇಂದ್ರ, ದಿಲ್ಲಿ ಸರಕಾರ ಹಾಗೂ ಎನ್ಜಿಟಿಗೇ ದಂಡ ವಿಧಿಸಬೇಕು ಎಂದು ಹೇಳಿಕೆ ನೀಡಿದ್ದ ಆರ್ಟ್ ಆಫ್ ಲಿವಿಂಗ್ನ ಸ್ಥಾಪಕ ಶ್ರೀ ರವಿಶಂಕರ್ ಗುರೂಜಿಗೆ ಗುರುವಾರ ಎನ್ಜಿಟಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಮೇ 9ರ ಒಳಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡುವಂತೆ ನ್ಯಾ|ಸ್ವತಂತ್ರಕುಮಾರ್ ನೇತೃತ್ವದ ಪೀಠ ಆದೇಶಿಸಿದೆ.
ವಿಶ್ವ ಸಾಂಸ್ಕೃತಿಕ ಉತ್ಸವದ ಹೆಸರಲ್ಲಿ ಯಮುನಾ ನದಿ ಹರಿವಿನ ಪ್ರದೇಶದಲ್ಲಿ ಭಾರೀ ಹಾನಿ ಉಂಟುಮಾಡಿರುವ ಆರೋಪಕ್ಕೆ ಸಂಬಂಧಿಸಿ ರವಿಶಂಕರ್ರನ್ನು ಎನ್ಜಿಟಿ ತರಾ ಟೆಗೆ ತೆಗೆದುಕೊಂಡಿತ್ತು. ರವಿಶಂಕರ್ ಅವರ ಹೇಳಿಕೆಯು ನ್ಯಾಯಾಂಗದ ಮುಕ್ತ ಹಾಗೂ ನ್ಯಾಯಸಮ್ಮತ ನಡೆಯ ಮೇಲಿನ ಹಸ್ತಕ್ಷೇಪ ಎಂದು ಆರೋಪಿಸಿ ಮನೋಜ್ ಮಿಶ್ರಾ ಎಂಬವರು ಎನ್ಜಿಟಿ ಮೆಟ್ಟಿಲೇರಿ, ರವಿಶಂಕರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಬೇಕೆಂದು ಕೋರಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಟ್ ಆಫ್ ಲಿವಿಂಗ್ ವಕ್ತಾರ ಕೇದಾರ್ ದೇಸಾಯಿ ‘ಎನ್ಜಿಟಿ ನೋಟಿಸ್ ನೀಡುವಂಥ ಆದೇಶವನ್ನೇ ನೀಡಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ಸಂಗತಿ,’ ಎಂದು ಸ್ಪಷ್ಟನೆ ನೀಡಿದ್ದಾರೆ.