ಐಪಿಒ ಷೇರುಗಳ ತತ್ಸಮ-ತದ್ಭವ!


Team Udayavani, May 22, 2017, 1:06 AM IST

Share-Market-900.jpg

ಸಾವಿರಾರು ಕೋಟಿ ಮೌಲ್ಯದ ಐಪಿಒಗಳ ದಂಡೇ ಬರಲಿರುವ ಈ ಸಮಯದಲ್ಲಿ ಸಾರ್ವಜನಿಕರು ಈ ತತ್ಸಮ ತದ್ಭವಗಳ ವ್ಯಾಕರಣವನ್ನರಿತು ಅವುಗಳ ನೈಜವಾದ ಮೌಲ್ಯವನ್ನರಿತುಕೊಂಡೇ ದುಡ್ಡು ಹೂಡುವುದು ಒಳ್ಳೆಯದು.

ಕಳೆದ ಶುಕ್ರವಾರ ಮಾರುಕಟ್ಟೆ ತೆರೆಯುವುದನ್ನೇ ಹಲವು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಗೆಳೆಯ ‘I.P.O ರಾವ್‌’ ಆ ದಿನ ತನ್ನ ಹೊಸ IPO ಷೇರು ‘‘Andhera Power Company’’ ಲಿಸ್ಟ್‌ ಆದಂತೆಯೇ ಗೋತಾ ಹೊಡೆದದ್ದು ಕಂಡು ತೀರಾ ಖನ್ನನಾದ.  ರುಪಾಯಿಗಳಿಗೆ ಐಪಿಒದಲ್ಲಿ ಖರೀದಿಸಿದ ಅಂಧೇರಾ ಪವರ್‌ ಕಂಪೆನಿಯ ಷೇರು ಲಿಸ್ಟ್‌ ಆದ ಮೊದಲ ದಿನವೇ ರೂ. 39ಕ್ಕೆ ಕ್ಲೋಸ್‌ ಆಗಿ 13% ನಷ್ಟ ಉಂಟಾಯಿತು. I.P.O (Initial Public Offer) ತೆರವು ಇದ್ದಾಗ 22 ಪಟ್ಟು ಹೆಚ್ಚುವರಿ ಬೇಡಿಕೆಯೊಂದಿಗೆ (Over subscription) ಜಯಭೇರಿ ಹೊಡೆದಿತ್ತು. ಅದನ್ನು ನೋಡಿಯೇ ಆತ ಐಪಿಒಗೆ ದುಡ್ಡುಕಟ್ಟಿ ಅರ್ಜಿ ಹಾಕಿದ್ದ. ಅಷ್ಟೊಂದು ಬೇಡಿಕೆ ಹುಟ್ಟಿಸಿರುವ ಈ ಹೊಸ ಷೇರು ಲಿಸ್ಟ್‌ ಆಗುವ ಹೊತ್ತಿಗೆ ಇಶ್ಯೂ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಕೋಟ್‌ ಆದದ್ದಾದರೂ ಹೇಗೆ? ಈ ವರ್ಷದಲ್ಲಿ ಹೊರಬಿದ್ದ 16 ಐ.ಪಿ.ಓಗಳಲ್ಲಿ 9 ಐ.ಪಿ.ಓಗಳು ಈ ರೀತಿ ಗೋತಾ ಹೊಡೆದಿವೆ. ಯಾಕೆ – ಏನು ಎಂದು ಏನೇನೂ ಅರ್ಥವಾಗದೆ ಗೆಳೆಯ ಐಪಿಒ ರಾವ್‌ ಮಂಡೆ ಬಿಸಿ ಮಾಡಿಕೊಂಡು ಕಪಾಟೆಲ್ಲಾ ಹುಡುಕಿ ಇದ್ದದ್ದರಲ್ಲಿ ದಪ್ಪಗಿದ್ದ ರಗ್ಗನ್ನು ಎತ್ತಿಕೊಂಡು ಹೊದ್ದು ಮಲಗಿದನು.  

ನಾನು ಎಪ್ಪತ್ತರ ದಶಕದಿಂದಲೂ ನೋಡುತ್ತಲೇ ಇದ್ದೇನೆ. ಈತನಿಗೆ ಇದೇ ಕೆಲಸ. ಹೊಸ ಕಂಪೆನಿಗಳ ಐ.ಪಿ.ಓ ಬಿಡುಗಡೆಯಾದಂತೆಯೇ ದುಡ್ಡುಕಟ್ಟಿ ಅವುಗಳು ಪ್ರೀಮಿಯಂ ದರದಲ್ಲಿ ಲಿಸ್ಟ್‌ ಆದಂತೆ ಮಾರಿ ದುಡ್ಡು ಮಾಡುತ್ತಾ ಬಂದಿದ್ದಾನೆ. ಆತನ ಈ ಗೀಳಿನಿಂದಾಗಿಯೇ ಆತನನ್ನು ನಾವು ಗೆಳೆಯರೆಲ್ಲ ‘ಐಪಿಒ. ರಾವ್‌’ ಎಂದೇ ಕರೆಯುತ್ತೇವೆ. ಹಿಂದೆಲ್ಲಾ ಒಂದು ಒಳ್ಳೆಯ ಹೊಸ ಪಬ್ಲಿಕ್‌ ಆಫರ್‌ ಬಂತು ಎಂದರೆ ಅದಕ್ಕೆ ಅಪ್ಲೈ ಮಾಡಿ ಕಾಯುತ್ತಿದ್ದೆವು. ಅಂತಹ ಒಳ್ಳೆಯ ಷೇರುಗಳು allot ಆಗುವುದು ಅತಿವಿರಳ. ಆದರೆ ಸಿಕ್ಕರಂತೂ ಲಾಟರಿ ಹೊಡೆದಂತೆಯೇ ಸರಿ. ಹತ್ತು ರೂಪಾಯಿಗಳ ಷೇರುಗಳು ಹತ್ತೇ ರೂಪಾಯಿಗೆ ಕೊಂಡುಕೊಳ್ಳಬಹುದಿತ್ತು. ಆವಾಗಿನ ಕಾನೂನಿನ ಪ್ರಕಾರ ಷೇರುಗಳನ್ನು ‘at par rate’ ಅಥವಾ ತತ್ಸಮ ದರದಲ್ಲಿ ಮಾತ್ರವೇ ಇಶ್ಯೂ ಮಾಡಬಹುದಾಗಿತ್ತು; ಈಗಿನಂತೆ ಮಾರ್ಕೆಟ್‌ ಆಧಾರಿತ ಹೆಚ್ಚುವರಿ ದರದಲ್ಲಿ ಚಠಿ at premium ಅಥವಾ ತದ್ಭವ ದರದಲ್ಲಿ ಮಾಡುವಂತಿರಲಿಲ್ಲ. ಹಾಗಾಗಿ ಮೂಲ ಬೆಲೆ 10 ರೂಪಾಯಿಗೆ ಸಿಕ್ಕ ಷೇರು ಲಿಸ್ಟ್‌ ಆದ ದಿನದಂದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಅನುಸರಿಸಿಕೊಂಡು ನೂರಾರು ರೂಪಾಯಿಗಳಿಗೆ ಮಾರಾಟವಾಗಿ ಹೋಗುತ್ತಿತ್ತು. ಇದರಿಂದಾಗಿ ಐ.ಪಿ.ಓದಲ್ಲಿ ತಮ್ಮ ನಸೀಬು ಪರೀಕ್ಷೆ ಮಾಡುವುದು ಹೆಚ್ಚಿನವರಿಗೆ ಒಂದು ಆಕರ್ಷಕವಾದ ಚಟುವಟಿಕೆಯೇ ಆಗಿತ್ತು. 

90ರ‌ ದಶಕದ ಆರ್ಥಿಕ ಉದಾರೀಕರಣ ನೀತಿಯನ್ವಯ ಕಾಪಿಟಲ್‌ ಮಾರ್ಕೆಟ್‌ಗೆ ಉತ್ತೇಜನ ಕೊಡುವ ಕಾರಣಕ್ಕಾಗಿ, ವಿದೇಶದಲ್ಲಿರುವಂತೆ ಇಲ್ಲಿಯೂ ಐಪಿಒಗಳನ್ನು ಸಂದರ್ಭಾನುಸಾರ ಒಂದು ಮಾರ್ಕೆಟ್‌ ನಿರ್ಧರಿತ ಹೆಚ್ಚುವರಿ ಅಥವಾ ಪ್ರೀಮಿಯಂ ದರದಲ್ಲಿ ಇಶ್ಯೂ ಮಾಡುವಂತಹ ಅವಕಾಶವನ್ನು ಕಾನೂನು ಕಲ್ಪಿಸಿಕೊಟ್ಟಿತು. ಇದರಿಂದಾಗಿ ಐಪಿಒ ಅಥವಾ ಪ್ರ„ಮರಿ ಮಾರುಕಟ್ಟೆಯ ರಂಗೇ ಬದಲಾಯಿತು. ಬಳಿಕ ಮಾರ್ಕೆಟ್‌ ಬೆಲೆ ಆಧಾರಿತ ಪ್ರೀಮಿಯಂ ದರದಲ್ಲಿ ಇಶ್ಯೂ ಆಗುವ ಐ.ಪಿ.ಓ ಷೇರುಗಳ ಒಂದು ಹಿಂಡೇ ಬರತೊಡಗಿತು. ಇದರಿಂದಾಗಿ, ಕಂಪೆನಿಗಳಿಗೆ ಈ ರೀತಿಯಲ್ಲಿ ಪ್ರೀಮಿಯಂ ದರದಲ್ಲಿ ಷೇರು ಮಾರಿ ಖಜಾನೆ ತುಂಬಿಸಿಕೊಳ್ಳುವ ಒಂದು ಹೊಸ ದಾರಿ ಕಂಡುಕೊಂಡಂತಾಯಿತು. 10 ರೂ ಷೇರು 500 ರೂಪಾಯಿಗೆ ಮಾರಿಹೋದರೆ 490ರೂ ಕಂಪೆನಿಯ ಖಜಾನೆಯಲ್ಲಿ ಭರ್ತಿಯಾದಂತೆ. ಹೀಗೆ ಕಂಪೆನಿಗಳು ತಮ್ಮ ಹೆಸರನ್ನು, ಭವಿಷ್ಯದ ಬಿಸಿನೆಸ್‌ ಸಾಧ್ಯತೆಗಳನ್ನು ಡಂಗುರ ಹೊಡೆದು ಹಣ ಸಂಗ್ರಹಿಸುವ ಅವಕಾಶ ಸಿಕ್ಕಂತಾಯಿತು. ಉದಾಹರಣೆಗೆ, ರಾಮಾಯಣ ಬ್ರದರ್ಸ್‌ ಎಂದೇ ಹೆಸರುವಾಸಿಯಾದ ರಾಮ ಮತ್ತು ಲಕ್ಷ್ಮಣ ಎಂಬ ಇಬ್ಬರು ಮಹಾ ಉದ್ಯಮಪತಿಗಳು ಸೇರಿ 10ರೂ ಗಳ, 2 ಕೋಟಿ ಷೇರುಗಳನ್ನು ಇಳಿಸಿ ಒಟ್ಟು 20 ಕೋಟಿ ರೂಪಾಯಿಗಳ ಬಂಡವಾಳ ಹೂಡಿ ಒಂದು ಹಪ್ಪಳ -ಸಂಡಿಗೆ ಕಂಪೆನಿಯನ್ನು ಆರಂಭಿಸುತ್ತಾರೆ ಎಂದಿಟ್ಟುಕೊಳ್ಳಿ. ಆರಂಭಿಸಿದ ಕೆಲ ವರ್ಷಗಳಲ್ಲಿ ಅತ್ಯಾಕರ್ಷಕ ಬಿಸಿನೆಸ್‌ ಪ್ಲಾನ್‌, ಬಹು ಆಕರ್ಷಕ ಲಾಭ, Earnings per share ಇತ್ಯಾದಿಗಳನ್ನು ಬಿಂಬಿಸಿ 10 ರೂಗಳ ಹೊಸ 1 ಕೋಟಿ ಷೇರುಗಳನ್ನು 90 ರೂ ಪ್ರೀಮಿಯಂ ಬೆಲೆಗೆ – ಒಟ್ಟು 100 ಕೋಟಿ ರೂಪಾಯಿಗಳ ಐಪಿಒ ಇಶ್ಯೂ ಮಾಡುತ್ತಾರೆ. ಹಾಗಾದಾಗ ಕಂಪೆನಿಯ ಒಟ್ಟು ಬಂಡವಾಳ 20+100 ಕೋಟಿ ಅಂದರೆ 120 ಕೋಟಿ ರೂ ಆಯಿತು ಮತ್ತು ಷೇರುಗಳ ಸಂಖ್ಯೆ 2+1=3 ಕೋಟಿ ಆಯಿತು. ಆಗ ಒಂದು ಶೇರಿನ ಮೌಲ್ಯ 120/3= 40ರೂ ಆಯಿತು. ಅಂದರೆ ಐಪಿಒ ಕೊಂಡ ಸಾರ್ವಜನಿಕರಿಗೆ 100 ರೂ ಗೆ 40ರೂ ಮೌಲ್ಯದ ಷೇರು ಸಿಕ್ಕಂತಾಯಿತು ಮತ್ತು ಈ ಸರಳೀಕೃತ ಉದಾಹರಣೆಯಲ್ಲಿ ಷೇರು ಇಶ್ಯೂ ಮಾಡಿದ ಪ್ರೊಮೋಟರ್ಸ್‌ಗಳಿಗೆ 10 ರೂಪಾಯಿಗೆ 40ರೂ ಮೌಲ್ಯದ ಷೇರು ಸಿಕ್ಕಂತಾಯಿತು. ಹೂಡಿಕೆದಾರರಿಗೆ ಈಗ ಷೇರು ತಾವು ಕೊಟ್ಟರೂ 100ಕ್ಕಿಂತ ಜಾಸ್ತಿಗೆ ಲಿಸ್ಟ್‌ ಆದರೆ ಲಾಭ ಇಲ್ಲದಿದ್ದರೆ ನಷ್ಟ. ಅದರೆ ಸ್ಥಾಪಕರಿಗೆ ಕುಳಿತಲ್ಲಿಯೇ ಶೇರೊಂದರ 10ರ ಮೌಲ್ಯ ಹೂಡಿಕೆದಾರರು ಕೊಟ್ಟ ಪ್ರೀಮಿಯಂ ಬೆಲೆಯಿಂದಾಗಿ ಕನಿಷ್ಟ ರೂ 40 ಅಂತೂ ಆಗುತ್ತದೆ. ಹೀಗೆ ಸ್ಥಾಪಕರು ಐಪಿಒ ದಾರಿಯಿಂದ ಕುಳಿತಲ್ಲಿಯೇ ತಮ್ಮ ಷೇರುಗಳ ಮೌಲ್ಯವರ್ಧನೆ ಮಾಡಿಸಿಕೊಳ್ಳುವ ಹೊಸ ವಿದ್ಯೆ ಭರತವರ್ಷದಲ್ಲಿ ಆರಂಭವಾಯಿತು. ದುಡ್ಡು ಮಾಡುವ ಕಲೆ ಅಫೀಮಿನಂತೆ- ನಶೆ ಹುಟ್ಟಿಸುತ್ತದೆ ಮತ್ತು ಒಮ್ಮೆ ಆರಂಭಗೊಂಡಿತೆಂದರೆ, ಪರಿಷ್ಕರಣೆಗೊಳ್ಳುತ್ತಲೇ ಸಾಗುತ್ತದೆ. ಜಾಸ್ತಿ, ಇನ್ನೂ ಜಾಸ್ತಿ ದುಡ್ಡು ಮಾಡಬೇಕೆಂದರೆ ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಐಪಿಒ ಬಿಡುಗಡೆ ಮಾಡಬೇಕು ಎಂಬ ಆಸೆ ಉದ್ಯೋಗಪತಿಗಳಿಗೆ ಆಗತೊಡಗಿತು. ಯಾಕೆಂದರೆ ಬುಲ್‌ ಫೇಸಿನಲ್ಲಿ ನಾಯಿ ಬಾಲ ಕೂಡಾ ಮೇಲೆಯೇ ಇರುತ್ತದೆ. ಎಲ್ಲಾ ಷೇರುಗಳ ಮಾರ್ಕೆಟ್‌ ಬೆಲೆ earningsಗಿಂತ ಬಹಳ ಹೆಚ್ಚು ಇರುತ್ತವೆ- P/E multiple ಸುಮಾರು 25-100-200 ಪಟ್ಟು. ಅಂತೆಯೇ, ಮಾರುಕಟ್ಟೆ ಗೂಳಿಗಳ ಹಿಡಿತದಲ್ಲಿದ್ದಾಗಲೇ ಎಲ್ಲಾ ಐಪಿಒಗಳೂ ಬರತೊಡಗಿದವು ಹಾಗೂ ಮಾರ್ಕೆಟ್‌ ಅಧೋಮುಖವಾದಾಗಲೆಲ್ಲ ಘೋಷಣೆಯಾದ ಐಪಿಒಗಳೂ ಕ್ಯಾನ್ಸಲ್‌ ಆಗತೊಡಗಿದವು. ಎಲ್ಲರ ಕಣ್ಣು ಅತ್ಯಧಿಕ ಪ್ರೀಮಿಯಂ ಗಿಟ್ಟಿಸುವತ್ತ. ಪ್ರಸ್ತುತ ಕಾಲಘಟ್ಟದಲ್ಲಿ, ಮಾರ್ಕೆಟ್‌ ಏರು ಸ್ಥಿತಿಯಲ್ಲಿದೆ. ಈವರೆಗೆ ಹಲವಾರು ಐಪಿಒಗಳು ಬಂದಿವೆ; ಎಲ್ಲವೂ ಬುಲ್‌ ಫೇಸ್‌ನಲ್ಲಿ, ಅದು ಕೂಡಾ ಅತಿ ಹೆಚ್ಚು ಪ್ರೀಮಿಯಂ ಬೆಲೆಗೆ. ಐಪಿಒ ಪ್ರೀಮಿಯಂ ನಿಗದಿಪಡಿಸುವಲ್ಲಿ ಸೆಬಿಯ ಪಾತ್ರ ಏನೇನೂ ಇರುವುದಿಲ್ಲ.

ಸ್ಥಾಪಕರು ಮೊದಲು ಒಂದು ಬ್ಯಾಂಕನ್ನು ಲೀಡ್‌ ಮಾನೇಜರ್‌ ಆಗಿ ನೇಮಿಸುತ್ತದೆ. ಅವರು ನಡೆಸಿಕೊಡುವ ಈ ಇಶ್ಯೂ ಪ್ರಕ್ರಿಯೆಯಲ್ಲಿ ವಿತ್ತೀಯ ಸಂಸ್ಥೆಗಳು (Qualified Institutional Bidder) ಭಾಗವಹಿಸುತ್ತವೆ. ಈ QIBಗಳ ಬಿಡ್‌ಗಳನ್ನು ಹೊಂದಿಕೊಂಡು ಪ್ರೀಮಿಯಂ ದರ ನಿಶ್ಚಯವಾಗುತ್ತದೆ. ‘Book building route’ ಅಂದರೆ ಇದೇನೇ. ವಿತ್ತೀಯ ಸಂಸ್ಥೆಗಳ ಬಿಡ್‌ನ‌ಲ್ಲಿ ಆಫರ್‌ Oversubscribe ಆಗಿ ಉತ್ತಮ ಪ್ರೀಮಿಯಂ ದರ ಕೂಡಾ ನಿಷ್ಕರ್ಷೆಯಾಗುತ್ತದೆ. ಕೆೆಲವೆಡೆ ಸ್ಥಾಪಕರು ಇವೆಲ್ಲವುಗಳನ್ನು ಹೇಗೋ ನಿಭಾಯಿಸುತ್ತಾರೆ. ಹಾಗೆ ಸಫ‌ಲವಾದ ಸುದ್ದಿ ಹೊರಬೀಳುತ್ತಲೇ ಐಪಿಒ ರಾವ್‌ನಂತಹ ರಿಟೇಲ್‌ ಹೂಡಿಕೆದಾರರು ಕಣ್ಣು ಬಾಯಿ ಬಿಡುತ್ತಾರೆ. ಅದರ ಹಿಂದೆ ಮುಗಿಬೀಳುತ್ತಾರೆ. ದುಡ್ಡು ಹೂಡುತ್ತಾರೆ. ಬಳಿಕ, ಎರಡು ವಾರಗಳಲ್ಲಿ ಷೇರು ಲಿಸ್ಟ್‌ ಆದಾಗ ಅದರ ನಿಜವಾದ ಮಾರ್ಕೆಟ್‌ ಬೆಲೆ ಏನು ಎಂಬ ಅರಿವು ಸಾರ್ವಜನಿಕರಿಗೆ ಆಗುತ್ತದೆ. ಮಾರ್ಕೆಟ್‌ ಆ ವೇಳೆಗೆ ಕೆಳಗೆ ಬಿದ್ದಿದ್ದರೆ ಜಖಂ ಇನ್ನಷ್ಟು ಜಾಸ್ತಿ!! ಇದಲ್ಲದೆ ಪ್ರಮೋಟರುಗಳು ತಮಗೆ ಸಪೋರ್ಟ್‌ ನೀಡಿದ ಖಾಸಗಿ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ಮತ್ತು ಬೇನಾಮಿ ಹೆಸರಿನಲ್ಲಿ ಖರೀದಿಸಿದ ತಮಗೇ ಲಿಸ್ಟ್‌ ಆದಾಗ ಉತ್ತಮ ದರದಲ್ಲಿ ಮಾರಲು ಅನುಕೂಲವಾಗುವಂತೆ ಬೆಲೆಯನ್ನು ಕೆಲ ದಿನಗಳ ಮಟ್ಟಿಗೆ ರಿಗ್‌ ಮಾಡಿಸಿ ಹಿಡಿದಿಡುವುದೂ ಇದೆ. ಇಂತಹ ಸಂದರ್ಭಗಳಲ್ಲೆಲ್ಲಾ ಜಿಂಕೆಯಾಗಲು ಹೊರಟವನು ಕೊನೆಗೆ ಆಗುವುದು ಕುರಿ!

ಸಾವಿರಾರು ಕೋಟಿ ಮೌಲ್ಯದ ಐಪಿಒಗಳ ದಂಡೇ ಬರಲಿರುವ ಈ ಸಮಯದಲ್ಲಿ ಸಾರ್ವಜನಿಕರು ಈ ತತ್ಸಮ ತದ್ಭವಗಳ ವ್ಯಾಕರಣವನ್ನರಿತು ಅವುಗಳ ನೈಜವಾದ ಮೌಲ್ಯವನ್ನರಿತುಕೊಂಡೇ ದುಡ್ಡು ಹೂಡುವುದು ಒಳ್ಳೆಯದು. ಎಲ್ಲಾ ಷೇರುಗಳೂ ಹಾಳಲ್ಲ; ಬೆಳ್ಳಗಿರುವುದೆಲ್ಲವೂ ಹಾಲಲ್ಲ! ಉತ್ತಮ, ನಂಬಿಗಸ್ಥ ಮಾರುಕಟ್ಟೆ ವಿಶ್ಲೇಷಕರ ಪತ್ರಿಕಾ ವರದಿಗಳನ್ನು ಅಭ್ಯಾಸ ಮಾಡಿ ಸ್ವಂತ ವಿಶ್ಲೇಷಣೆಯನ್ನೂ ಮಾಡಿಯೇ ಮುಂದುವರಿದರೆ ಒಳ್ಳೆಯದು. ಕೇವಲ ವಿತ್ತೀಯ ಸಂಸ್ಥೆಗಳ (QIB) ಬೇಡಿಕೆಯನ್ನು, ಅಬ್ಬರದ ಪ್ರಚಾರವನ್ನು ಅಥವಾ oversubscriptionಗಳನ್ನು ನೋಡಿ ಐಪಿಒದಲ್ಲಿ ದುಡ್ಡು ಹೂಡದಿರಿ. ಕೆಲ ಧೂರ್ತ ಪ್ರಮೋಟರುಗಳು ಸಾಧ್ಯವಾದಷ್ಟು ಹೆಚ್ಚಿನ ಪ್ರೀಮಿಯಂ ದರಗಳಲ್ಲಿ ಐಪಿಒ ಷೇರುಗಳನ್ನು ಕೈ ದಾಟಿಸಲು ಕಾಯುತ್ತಾ ಇರುತ್ತಾರೆ.

– ಜಯದೇವ ಪ್ರಸಾದ ಮೊಳೆಯಾರ ; [email protected]

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.