ಭುವನೇಶ್ವರಿ ಪ್ರತಿಮೆ ಸ್ಥಾಪಿಸಲು ಸಿಎಂಗೆ ಮನವಿ
Team Udayavani, Aug 8, 2017, 11:55 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆ ಸ್ಥಾಪಿಸುವಂತೆ ಕನ್ನಡ ಗೆಳೆಯರ ಬಳಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಕನ್ನಡ ನಾಡು ಒಂದಾಗಿ 60 ವರ್ಷ ಕಳೆದಿದ್ದು, ಹಲವಾರು ವೀರರು, ವೀರರಮಣಿಯರು, ಶ್ರೇಷ್ಠರ ಪ್ರತಿಮೆಗಳನ್ನು ಎಲ್ಲೆಡೆ ಸ್ಥಾಪಿಸಲಾಗಿದೆ. ಆದರೆ, ತಾಯಿ ಭುವನೇಶ್ವರಿಯ ಪ್ರತಿಮೆ ಎಲ್ಲೂ ಸ್ಥಾಪನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರದ ವಿಧಾನಸೌಧ ಮುಂಭಾಗ, ಕಬ್ಬನ್ ಪಾರ್ಕ್ ಅಥವಾ ಲಾಲ್ಬಾಗ್ನಂತಹ ಪ್ರಮುಖ ಸ್ಥಳವೊಂದರಲ್ಲಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಕೋರಲಾಗಿದೆ.
ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಗೊ.ರು.ಚನ್ನಬಸಪ್ಪ, ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷ ಎಲ್.ಎಸ್.ಶೇಷಗಿರಿರಾವ್, ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಅವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.