“ಸಾಂಸ್ಕೃತಿಕ ನೀತಿ’ಗೆ ಸಂಪುಟ ಒಪ್ಪಿಗೆ: ಬರಗೂರು ಸ್ವಾಗತ
Team Udayavani, Aug 10, 2017, 6:50 AM IST
ಬೆಂಗಳೂರು: “ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜತೆ ಜತೆಯಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಇತಿ-ಮಿತಿಗಳ ನಡುವೆಯೂ “ಸಾಂಸ್ಕೃತಿಕ ನೀತಿ’ ಜಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಸಾಂಸ್ಕೃತಿಕ ನೀತಿ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಸಾಂಸ್ಕೃತಿಕ ನೀತಿಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸಮಿತಿಯು ನೀಡಿದ್ದ 44 ಶಿಫಾರಸುಗಳ ಪೈಕಿ 39 ಶಿಫಾರಸುಗಳನ್ನು ಸರ್ಕಾರ ಒಪ್ಪಿರುವುದು ಸ್ವಾಗತಾರ್ಹ. ಅದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ. “ಸಮಿತಿ ನೀಡಿದ್ದ ಶಿಫಾರಸುಗಳ ಪೈಕಿ ಕೆಲವನ್ನು ಕೈ ಬಿಡಲಾಗಿದೆ.
ಅಕಾಡೆಮಿ- ಪ್ರಾಧಿಕಾರಿಗಳಿಗೆ ಅಧ್ಯಕ್ಷ , ಸದಸ್ಯರನ್ನು ನೇಮಕ ಮಾಡುವಾಗ ಶೋಧನಾ ಸಮಿತಿ ಮಾದರಿಯಲ್ಲಿ ಆಯಾ ಕ್ಷೇತ್ರದ ತಜ್ಞರ ಸಮಿತಿ ರಚಿಸಬಹುದಿತ್ತು. ಹಾಗೆಂದ ಮಾತ್ರಕ್ಕೆ ಸಾಹಿತಿ-ತಜ್ಞರು ಆಯ್ಕೆ ಮಾಡುವುದೆಲ್ಲವೂ ಸರಿ ಇರುತ್ತದೆ ಎಂಬುದೂ ನನ್ನ ವಾದವಲ್ಲ. ಆದರೆ, ಸಮಿತಿ ರಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರ ತನ್ನಲ್ಲೇ ಇಟ್ಟುಕೊಳ್ಳಬಹುದಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.