ಇಸ್ರೋ ಮಾಜಿ ಅಧ್ಯಕ್ಷ ನಾಯರ್ಗೆ ಕೋರ್ಟ್ ಸಮನ್ಸ್
Team Udayavani, Sep 17, 2017, 7:40 AM IST
ನವದೆಹಲಿ: ಆ್ಯಂಟ್ರಿಕ್ಸ್-ದೇವಾಸ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರನ್ನು ಆರೋಪಿ ಎಂದು ಪರಿಗಣಿಸಿರುವ ದೆಹಲಿ ವಿಶೇಷ ನ್ಯಾಯಾಲಯವು ಶನಿವಾರ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಇನ್ಸಾಟ್ ಸರಣಿಯ ಉಪಗ್ರಹಕ್ಕಾಗಿ ಎಸ್ ಬ್ಯಾಂಡ್ ತರಂಗಾಂತರ ಹಂಚಿಕೆ ವೇಳೆ ಖಾಸಗಿ ಕಂಪನಿಯಾದ ದೇವಾಸ್ ಮಲ್ಟಿಮೀಡಿಯಾಗೆ ಡೀಲ್ ಕುದುರಿಸಿಕೊಡುವ ಮೂಲಕ ಬೊಕ್ಕಸಕ್ಕೆ 578 ಕೋಟಿ ರೂ. ನಷ್ಟ ಉಂಟುಮಾಡಿರುವ ಆರೋಪವನ್ನು ನಾಯರ್ ಸೇರಿದಂತೆ ಇಸ್ರೋದ ಹಲವು ಅಧಿಕಾರಿಗಳ ಮೇಲೆ ಹೊರಿಸಲಾಗಿದೆ. ಈ ಕುರಿತು ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣಿಸಿ, ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಇಸ್ರೋದ ಅಂದಿನ ನಿರ್ದೇಶಕ ಭಾಸ್ಕರ ನಾರಾಯಣ ರಾವ್, ಆಂಟ್ರಿಕ್ಸ್ನ ಅಂದಿನ ಕಾರ್ಯಕಾರಿ ನಿರ್ದೇಶಕ ಕೆ.ಆರ್.ಶ್ರೀಧರ ಮೂರ್ತಿ, ಮಾಜಿ ಹೆಚ್ಚುವರಿ ಕಾರ್ಯದರ್ಶಿ ವೀಣಾ ಎಸ್. ರಾವ್ಗೂ ಸಮನ್ಸ್ ಜಾರಿ ಮಾಡಲಾಗಿದ್ದು, ಡಿ.23ರಂದು ಹಾಜರಾಗುವಂತೆ ಸೂಚಿಸಲಾಗಿದೆ.