ಕರಾವಳಿಯ ಮೂರು ಜಿಲ್ಲೆಗಳ ಬೇಡಿಕೆ, ಸಿಆರ್ಝಡ್ ಕರಡು ನಕ್ಷೆ ಪ್ರಕಟ
Team Udayavani, Oct 12, 2017, 7:05 AM IST
ಮಹಾನಗರ: ಕರಾವಳಿಯ ಮೂರು ಜಿಲ್ಲೆಗಳ ಸುದೀರ್ಘ ಕಾಲದ ಬೇಡಿಕೆಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಅಧಿಸೂಚನೆ-2011’ರ ಅನುಷ್ಠಾನ ಸಂಬಂಧ ಈಗ ಹೊಸ ಕರಡು ನಕ್ಷೆ ಸಿದ್ಧಗೊಂಡಿದೆ.
ಸಿಆರ್ಝಡ್ ವ್ಯಾಪ್ತಿಯ ನಿವಾಸಿಗಳಿಂದ ಅಹವಾಲು ಸ್ವೀಕಾರಕ್ಕೆ ಕರ್ನಾಟಕ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಹೊಸ ನಕ್ಷೆ ಪ್ರಕಾರ ಸಿಆರ್ಝಡ್ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹಾಗೂ ಆವಶ್ಯಕತೆಗೆ ಅನುಗುಣವಾಗಿ ನಿಯಮದಲ್ಲಿ ಬದಲಾವಣೆ ಮಾಡಲು ಅವಕಾಶವಿದ್ದು, ನಿರ್ಬಂಧಗಳಲ್ಲಿ ಕೊಂಚ ಸಡಿಲಿಕೆಯಾಗುವ ಸಾಧ್ಯತೆಯಿದೆ.
ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವು 2014 ಮಾ. 14ರಂದು ಚೆನ್ನೈನ ನ್ಯಾಷನಲ್ ಸೆಂಟರ್ ಫಾರ್ ಸಸ್ಟೇನೆಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್ನ್ನು (ಎನ್ಸಿಎಸ್ಸಿಎಂ) ಭರತ ರೇಖೆ (ಹೈ ಟೈಡ್ ಲೈನ್)ಹಾಗೂ ಇಳಿತ ರೇಖೆ (ಲೋ ಟೈಡ್ ಲೈನ್)ಗಳನ್ನು ಗುರುತಿಸುವುದಕ್ಕೆ ಅಧಿಕೃತ ಸಂಸ್ಥೆಯನ್ನಾಗಿ ಆಯ್ಕೆ ಮಾಡಿತ್ತು.
ನದಿಗಳ ವ್ಯಾಪ್ತಿ ವಿಸ್ತರಣೆ
ಕರಾವಳಿ ಭಾಗದಲ್ಲಿ ಸಮುದ್ರ ಸೇರುವ ನದಿಗಳಲ್ಲಿ ಒಂದು ಲೀಟರ್ ನೀರಿನಲ್ಲಿ 5 ಗ್ರಾಂ ವರೆಗೆ ಉಪ್ಪಿನಂಶ ಇರುವ ಪ್ರದೇಶದ (ಅಧಿಸೂಚನೆಯಲ್ಲಿ ಇದನ್ನು 5 ಪಿಪಿಟಿ ಎನ್ನುತ್ತಾರೆ ) ಸಿಆರ್ಝಡ್ 4 ವ್ಯಾಪ್ತಿಗೆ ಸೇರುತ್ತದೆ. ಉದಾಹರಣೆಗೆ ನೇತ್ರಾವತಿ ನದಿಯಲ್ಲಿ ಅರ್ಕುಳದವರೆಗೆ, ಫಲ್ಗುಣಿ ನದಿಯಲ್ಲಿ ತಿರುವೈಲು- ಉಳಾಯಿಬೆಟ್ಟು ಗಡಿವರೆಗೆ, ನಂದಿನಿ ನದಿಯಲ್ಲಿ ಚೇಳಾçರು ಹಾಗೂ ಶಾಂಭವಿ ನದಿಯಲ್ಲಿ ಕರ್ನಿರೆವರೆಗೆ ಸಿಆರ್ಝಡ್ ವ್ಯಾಪ್ತಿ ಇರುತ್ತದೆ. ಇದನ್ನು ಹೊಸ ಮ್ಯಾಪ್ನಲ್ಲಿ ಇನ್ನಷ್ಟು ವಿಸ್ತರಿಸಲಾಗಿದೆ. ನೇತ್ರಾವತಿಯಲ್ಲಿ ತುಂಬೆ ಡ್ಯಾಂವರೆಗೆ, ಫಲ್ಗುಣಿ ನದಿಯಲ್ಲಿ ಅದ್ಯಪಾಡಿ ಡ್ಯಾಂ, ನಂದಿನಿ ಹಾಗೂ ಶಾಂಭವಿಯಲ್ಲಿ ನದಿಯಲ್ಲಿ ಯಥಾಸ್ಥಿತಿಯ ಬಗ್ಗೆ ಕರಡು ನಕ್ಷೆಯಲ್ಲಿ ಉಲ್ಲೇಖೀಸಲಾಗಿದೆ.
– ದಿನೇಶ್ ಇರಾ