ಪತ್ನಿಯನ್ನು ಮಾರಣಾಂತಿಕವಾಗಿ ಕೊಚ್ಚಿ ಪರಾರಿ
Team Udayavani, Feb 2, 2018, 12:36 PM IST
ಕಾರ್ಕಳ: ಪತ್ನಿ ಜತೆಗೆ ಮುನಿಸಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಅಜೆಕಾರು ಸಮೀಪದ ಹೆರ್ಮುಂಡೆಯಲ್ಲಿ ಜ. 27 ರಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹೆರ್ಮುಂಡೆಯ ಪಟ್ರಬೆಟ್ಟು ನಿವಾಸಿ ಸಂತೋಷ್ ಪೂಜಾರಿ (27) ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.
ಹೆರ್ಮುಂಡೆ ಕರ್ಜಿಪಲ್ಕೆಯ ಶ್ರೀಧರ್ ಪೂಜಾರಿ ಮತ್ತು ಸುಗುಣಾ ದಂಪತಿಯ ಪುತ್ರಿ ಅನುಶ್ರೀ (23) ಪತಿಯ ಪೈಶಾಚಿಕ ಕೃತ್ಯಕ್ಕೆ ಒಳಗಾಗಿ ಮಣಿ ಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಸಂತೋಷ್ ವಿರುದ್ಧ ಶ್ರೀಧರ್ ಪೂಜಾರಿ ಅವರು ಅಜೆಕಾರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ
ಡಿಪ್ಲೊಮಾ ಮುಗಿಸಿದ್ದ ಅನುಶ್ರೀ ಸಿವಿಲ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ದ್ದರು. ಮದುವೆಯಾದ ಬಳಿಕವೂ ಕೆಲವು ಸಮಯ ಬೆಂಗಳೂರಿನಲ್ಲಿದ್ದ ಆಕೆ ಅನಂತರ ಪತಿ ಜತೆಗೆ ಮುಂಬಯಿಗೆ ತೆರಳಿದ್ದರು. ಅಲ್ಲಿ ಪತಿ-ಪತ್ನಿಯರ ಮಧ್ಯೆ ಪ್ರತಿದಿನವೂ ಗಲಾಟೆ ನಡೆಯುತ್ತಿತ್ತು. ಹೀಗಾಗಿ ನಾಲ್ಕು ತಿಂಗಳ ಹಿಂದೆ ಅನುಶ್ರೀ ತಾಯಿ ಮುಂಬಯಿಗೆ ತೆರಳಿ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಸ್ವಲ್ಪ ಸಮಯ ಮನೆಯಲ್ಲೇ ಇದ್ದ ಆಕೆ ಎರಡು ತಿಂಗಳ ಹಿಂದೆಯಷ್ಟೇ ಕಾರ್ಕಳ ಗುಂಡ್ಯ ಡ್ಕದ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಹತ್ಯೆಗೆ ಸಂಚು ರೂಪಿಸಿದ್ದ
ಆರೋಪಿ ಸಂತೋಷ್ ಪೂಜಾರಿ ಆಕೆಯ ಕೊಲೆಗೆ ಜ. 27ರಂದು ಸಂಚು ನಡೆಸಿದ್ದ. ಅಂದು ಕೆಲಸ ಮುಗಿಸಿ ಕಾರ್ಕಳದಿಂದ ತೆಳ್ಳಾರ್ ಮೂಲಕ ಹೆರ್ಮುಂಡೆಗೆ ತೆರಳುತ್ತಿದ್ದಾಗ ಸ್ವರ್ಣಾ ನದಿ ದಾಟುತ್ತಿದ್ದಂತೆ ಹಿಂದಿನಿಂದ ಬಂದು ಆಕೆಯನ್ನು ಹಿಡಿದುಕೊಂಡಿದ್ದಾನೆ. ಆಕೆ ಬಿಡಿಸಿಕೊಳ್ಳಲು ಯತ್ನಿಸಿದಾಗ ತಾನು ತಂದಿದ್ದ ಕತ್ತಿಯಿಂದ ಕೈ ಮತ್ತು ಕಾಲಿಗೆ ಯದ್ವಾತದ್ವಾ ಕಡಿದು ಪರಾರಿಯಾಗಿದ್ದಾನೆ. ಮುಂಬಯಿಯಲ್ಲಿ ಹೊಟೇಲ್ ಉದ್ಯೋಗಿಯಾಗಿದ್ದ ಆತ ಯಾವಾಗ ಊರಿಗೆ ಬಂದಿದ್ದ ಎಂಬುದು ತಿಳಿದಿಲ್ಲ.
ಬಿದ್ದಲ್ಲಿಂದಲೇ ಅಣ್ಣನಿಗೆ ಫೋನ್
ಗಂಭೀರ ಗಾಯಗೊಂಡು ಬಿದ್ದಲ್ಲಿಂದಲೇ ಆಕೆ ಅಣ್ಣನಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾಳೆ. ತನ್ನ ತುಂಡಾದ ಕೈ ಬೆರಳುಗಳಿಂದ ಬ್ಯಾಗ್ನಲ್ಲಿದ್ದ ಮೊಬೈಲ್ ತೆಗೆಯಲು ಕೂಡ ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅನುಶ್ರೀ ಅಣ್ಣ ತನ್ನ ಗೆಳೆಯನ ಜತೆಗೆ ಕಾರಿನಲ್ಲಿ ಆಕೆಯನ್ನು ಕಾರ್ಕಳದ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಒಲ್ಲದ ಮನಸ್ಸಿನಲ್ಲೇ ಮದುವೆ
ದೂರದ ಸಂಬಂಧಿಯಾಗಿರುವ ಸಂತೋಷ್ 6 ವರ್ಷಗಳಿಂದ ಅನುಶ್ರೀಯನ್ನು ಪ್ರೀತಿಸುತ್ತಿದ್ದ. ಆದರೆ ಆತನನ್ನು ಮದುವೆಯಾಗಲು ಅನುಶ್ರೀಗೆ ಇಷ್ಟವಿರಲಿಲ್ಲ. ಆಕೆಯನ್ನು ಮದುವೆ ಮಾಡಿಕೊಡುವಂತೆ ಮನೆಯವರಿಗೆ ಬೆದರಿಕೆ ಹಾಕಿದ್ದ ಸಂತೋಷ್ ತನ್ನ ಪ್ರಯತ್ನದಲ್ಲಿ ಸಫಲನಾಗಿದ್ದ. ಬೆದರಿಕೆಗೆ ಮಣಿದ ಮನೆಯವರು ಮಗಳಿಗೆ ಸಮಸ್ಯೆಯಾಗಬಾರದು ಎಂದು ತಂಗಿಯನ್ನು ಮದುವೆಗೆ ಒಪ್ಪಿಸಿ 2017 ಮಾ. 23ರಂದು ವಿವಾಹ ನೆರವೇರಿಸಿದ್ದರು ಎಂದು ಅನುಶ್ರೀ ಅಣ್ಣ ಅರುಣ್ ಕುಮಾರ್ ತಿಳಿಸಿದ್ದಾರೆ.