ಎಡಿಶನಲ್‌ ಶೀಟ್‌ ಮತ್ತಿತರ ಸಂಗತಿಗಳು: ಪರೀಕ್ಷಾ ಸಮಯ


Team Udayavani, Apr 1, 2018, 7:30 AM IST

10.jpg

ನಾಡಿನಾದ್ಯಂತ ಲಕ್ಷಾಂತರ ಮಕ್ಕಳು ಪ್ರತಿವರ್ಷವೂ ಪರೀಕ್ಷೆ ಬರೆಯುವಾಗ ಕೇವಲ ಎಂಟತ್ತು ದಿನಗಳಲ್ಲಿ ಇವರೆಲ್ಲರ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯವೆಂದೂ, ಪರೀಕ್ಷಕರಿಗೆ ಉಳಿದಿರುವ ಒಂದೇ ಒಂದು ಹೆದ್ದಾರಿಯೆಂದರೆ, ಪುಟ ಒಂದಕ್ಕೆ ಇಷ್ಟು ಎನ್ನುವ ಲೆಕ್ಕಾಚಾರದಲ್ಲಿ ಅಂಕಗಳನ್ನು ಬೇಗ ಬೇಗ ಹಾಕುತ್ತ ಹೋಗುವರೆಂದೂ, ಮೊದಲ ಒಂದೆರಡು ಪುಟಗಳಲ್ಲಿದ್ದ ಉತ್ತರಗಳನ್ನು ಮಾತ್ರ ವಿವರವಾಗಿ ಗಮನಿಸಿ ಅಂಕಗಳನ್ನು ನೀಡುವರೆಂದೂ, ನಂತರ ಅಡಿಷನಲ್‌ ಶೀಟು ಸಂಖ್ಯೆಗಳನ್ನು ಲೆಕ್ಕ ಹಾಕಿ ಅಂಕಗಳನ್ನು ಕೊಡುವರೆಂದೂ… 

    ಒಂದು ಸಲ ನನಗೆ ತಾಯಿ ಸರಸ್ವತಿಯ ಮೂಲಕವೇ ಶುಕ್ರದೆಸೆ ಅನುಗ್ರಹಿಸಲ್ಪಟ್ಟಿತು. ಸುಮಾರು ಆರು ತಿಂಗಳ ಕಾಲಾವಧಿಯೊಳಗೆ ನನ್ನ ನಾಲ್ಕು ಪುಸ್ತಕಗಳು ಪುರಪುರನೆ ಪ್ರಕಟವಾಗಿಬಿಟ್ಟವು. ಇದಕ್ಕೆ ನನ್ನ ಪ್ರತಿಭೆಯಾಗಲಿ, ಕೃತಿಯೊಳಗಿನ So Called ಅಂತಃಸಣ್ತೀವಾಗಲಿ ಕಾರಣವಲ್ಲ. ಬೇರೆ ಬೇರೆ ಪ್ರಕಾಶಕರ ಹತ್ತಿರ ತ್ರೇತಾಯುಗದಿಂದಲೂ ಅವರ ಮರ್ಜಿಗಳಿಗೆ ಕಾಯುತ್ತ ಬಸವಳಿದಿದ್ದ ಕೃತಿರತ್ನಗಳ ಮೇಲೆ ಒಂದೇ ಸಲ ಒಂದೇ ದಿಕ್ಕಿನಲ್ಲಿ ಕೃಪಾಕಟಾಕ್ಷ ಬಿತ್ತು. ಸರಿ, ಪುಸ್ತಕ ಪ್ರಕಟವಾದ ಮೇಲೆ ಅವುಗಳನ್ನು ಹಂಚಿ, ಮಿತ್ರರ, ಸ್ಪರ್ಧಿಗಳ, ಹಿತಶತ್ರುಗಳ, ಸಂಸ್ಕೃತಿವರೇಣ್ಯರ ಅಭಿಪ್ರಾಯಗಳನ್ನು ಪಡೆಯಬೇಕಲ್ಲ. ಹೀಗೆ ಹತ್ತು ಹಲವಾರು ಜನರಿಗೆ ಹಂಚಿದ ಮೇಲೆ ನನ್ನ ಬರವಣಿಗೆಗೂ, ನನ್ನೊಳಗಿನ ಮನೋವೈಕಲ್ಯಕ್ಕೂ ಸಂಬಂಧವನ್ನು ತಾಳೆ ಹಾಕಿದ ಮನಶಾÏಸ್ತ್ರ ವಿಶಾರದ ಹಿತಶತ್ರುಗಳೊಬ್ಬರು, “ಏಕೆ ಹೀಗೆ ಬರೆಯುತ್ತಲೇ, ಪ್ರಕಟಿಸುತ್ತಲೇ ಹೋಗುತ್ತೀರಿ? ಇದನ್ನೆಲ್ಲ ಯಾರು ಓದುವರು? ಓದುಗರಿಗಾದರೂ ನಿಮ್ಮ ಒಂದು ಪುಸ್ತಕ ಓದಿದ ಮೇಲೆ ನಿಮ್ಮದೇ ಇನ್ನೊಂದು ಪುಸ್ತಕ ಓದುವುದಕ್ಕೆ ಮುನ್ನ ಬಿಡುವು, ವ್ಯವಧಾನ ಬೇಡವೆ? ಹೀಗೆ ಸತತವಾಗಿ ಪ್ರಕಟಿಸುತ್ತ ಹೋಗುವ ನಿಮ್ಮ ಉದ್ದೇಶವಾದರೂ ಏನು? ಹೇಗಾದರೂ ಸರಿ, ಪ್ರಶಸ್ತಿ-ಪುರಸ್ಕಾರ ಯಾವುದಾದರೂ ಒಂದು ಪುಸ್ತಕಕ್ಕೆ ಹೊಡೆದೇಬಿಡಲಿ ಎಂಬು ದು(ದೂ)ರಾಲೋಚನೆಯೇ?’ ಮಿತ್ರನ ಮುಖವಾಡದ ಹಿತಶತ್ರುವು ಸಲಹಾರೂಪದ ಹೀಯಾಳಿಸುವಿಕೆಯನ್ನು ಮುಂದುವರಿಸುತ್ತಲೇ ಹೋದರು.

    ಆದರೂ ನನಗೆ ಆ ಆಪ್ತರ ಮಾತು ಸರಿಯಿರಬಹುದೆನಿಸಿತು. ಆದರೆ, ಹೀಗೆಲ್ಲ ಸತತವಾಗಿ ಬರೆಯುತ್ತ-ಪ್ರಕಟಿಸುತ್ತ ಹೋಗಲು ನನಗೆ ಬಾಲ್ಯದಲ್ಲಿ ದಕ್ಕಿದ ಎಡಿಷನಲ್‌ ಶೀಟ್‌ ಮಹಾತ್ಮೆಯ ಪ್ರಭಾವವೇ ಮುಖ್ಯ ಸೃಜನಶೀಲ ಪ್ರೇರಣೆ ಎಂಬುದು ನನ್ನಂತರಂಗಕ್ಕೆ ಗೊತ್ತು. ಈಗ ಇದನ್ನು ಬರೆದು ಬಹಿರಂಗಗೊಳಿಸಿದರೆ ಮುಂದಿನ ದಿನಗಳಲ್ಲಿ ಓದುಗರ-ಮಿತ್ರರ ಆಪಾದನೆಗಳನ್ನು ತಪ್ಪಿಸಿಕೊಳ್ಳಬಹುದು ಎಂಬ ಯೋಚನೆ ಬಂತು; ಬರೆಯುವವರಿಗೆ ಇನ್ನೊಂದು ಬರವಣಿಗೆಯೇ ಔಷಧಿ ಎಂಬ ಮಾತಿನಂತೆ.

    ಬಾಲ್ಯದಲ್ಲಿ ನಾವಿದ್ದ ವಾತಾವರಣದಲ್ಲಿ ಮೆಟ್ರಿಕ್‌ ಪರೀಕ್ಷೆ ಪಾಸು ಮಾಡುವುದೇ ಆಕ್ಸ್‌ಫ‌ರ್ಡ್‌-ಕೇಂಬ್ರಿಡ್ಜ್ ಮಟ್ಟದ ಸಾಧನೆಯಾಗಿತ್ತು. ನಮ್ಮ ಸುತ್ತಮುತ್ತ ಇದ್ದ ಬಂಧು-ಮಿತ್ರರೆಲ್ಲ ಕಂತು-ಕಂತುಗಳಲ್ಲಿ ಈ ವರ್ಷ ಕನ್ನಡ, ಇನ್ನೆರಡು ವರ್ಷದ ನಂತರ ಲೆಕ್ಕ, ಮುಂದಿನ ವರ್ಷ ಸಮಾಜಶಾಸ್ತ್ರ, ಅದಾದ ಮೇಲೆ ವಿಜ್ಞಾನ, ಕೊನೆಗೆ ಎಷ್ಟೋ ವರ್ಷಗಳ ನಂತರ ಇಂಗ್ಲಿಶ್‌ ಎಂದು ಹಂತ ಹಂತವಾಗಿ ಪಾಸು ಮಾಡುತ್ತಿದ್ದರು. ಇಲ್ಲ ಪಾಸು ಮಾಡಿಸಿಕೊಳ್ಳುತ್ತಿದ್ದರು. ರಾಜಧಾನಿ ಬೆಂಗಳೂರಿನಲ್ಲಿದ್ದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಕ್ಕೆ ಹೋಗಿ ಪರೀಕ್ಷಕರನ್ನು ಪತ್ತೆ ಮಾಡಿ, ಹಣ, ದವಸಧಾನ್ಯ ಕೊಟ್ಟು ಹೇಗಾದರೂ ಸರಿಯೇ ಪಾಸು ಮಾಡಿಸಿಕೊಂಡು ಬರುತ್ತಿದ್ದ ಪುಢಾರಿಗಳ, ಮಧ್ಯವರ್ತಿಗಳ ಒಂದು ದಂಡೇ ನಮ್ಮ ಹೋಬಳಿಯಲ್ಲಿತ್ತು. ಇವರುಗಳ ಉದ್ದಕ್ಕೂ ಹಣ, ಒಡವೆ-ವಸ್ತುಗಳನ್ನು ಸುರಿದು, ಪಾಸು ಆಗದೆ ಕೈ ಕೈ ಸುಟ್ಟುಕೊಂಡ ವರು ಕೂಡ ದೊಡ್ಡ ಸಂಖ್ಯೆಯಲ್ಲಿ ಇದ್ದರು. ಈ ಪುಢಾರಿಗಳ ದಂಡಿಗೆ ಎಲ್ಲ ಪರೀಕ್ಷೆಗಳಲ್ಲೂ, ಎಲ್ಲರನ್ನೂ ಪಾಸು ಮಾಡಿಸಲು ಸಾಧ್ಯವಾಗದೇ ಹೋಗದರೂ, ಪಕ್ಷಾ ಯಶಸ್ಸಿಗೆ ಬೇಕಾದ ಸೂತ್ರ-ಬುದ್ಧಿವಾದಗಳನ್ನು ಗುಪ್ತವಾಗಿ ಅವರಿಗೆ ಬೇಕಾದ ನೆಂಟರಿಷ್ಟರ ಮಕ್ಕಳಿಗೆ ಹಂಚುತ್ತಿದ್ದರು. ಆವಾಗ ನಾನು ಮತ್ತು ನನ್ನ ಸಹಪಾಠಿಗಳು ಇನ್ನೂ ಆರನೆಯ-ಏಳನೆಯ ಕ್ಲಾಸಿನಲ್ಲಿ ಓದುತ್ತಿದ್ದು, ಮೆಟ್ರಿಕ್‌ ಪರೀಕ್ಷೆ ಬರೆಯುತ್ತಿದ್ದವರು ಮತ್ತು ಈ ಪುಢಾರಿಗಳ ಸುತ್ತವೇ ಯಾವಾಗಲೂ ಗಿರಕಿ ಹೊಡೆಯುತ್ತ, ಅವರ ಓದುವಿಕೆ, ಸಿದ್ಧತೆ, ಕಾರ್ಯತಂತ್ರಗಳನ್ನು ಕೂಲಂಕಷವಾಗಿ ಗಮನಿಸುತ್ತ ಶಿಷ್ಯವೃತ್ತಿ ನಡೆಸುತ್ತಿದ್ದೆವು.

ಶಿವಕುಮಾರ್‌ ಎಂಬ ನಮ್ಮ ಕ್ರಿಕೆಟ್‌ ತಂಡದ ನಾಯಕ ಸುಮಾರು ನಾಲ್ಕೈದು ಸಲ ಈಗಾಗಲೇ ಪರೀಕ್ಷೆ ಬರೆದಿದ್ದ. ಈತ ನಮ್ಮ ಕ್ರಿಕೆಟ್‌ ತಂಡಕ್ಕೂ ಮಾತ್ರ ನಾಯಕನಾಗಿರದೆ, ಸಿನೆಮಾ ಕಥೆಗಳನ್ನು ಚರ್ಚಿಸುವ ತಂಡಕ್ಕೂ, ಅಕ್ಕಪಕ್ಕದೂರುಗಳಲ್ಲಿ ನಡೆಯುವ ಜಾತ್ರೆಗಳಿಗೆ ಪ್ರವಾಸ ಹೋಗುವ ತಂಡಕ್ಕೂ ನಾಯಕತ್ವ ವಹಿಸುತ್ತಿದ್ದ. ಶಿವಕುಮಾರನ ನಾಯಕತ್ವವನ್ನು ನಾವೆಲ್ಲ ಒಪ್ಪಿಕೊಳ್ಳಲು ಕಾರಣ, ಆತ ಪ್ಲಾಂಟರ್‌ ಮಗನಾಗಿದ್ದದ್ದು. ನಮ್ಮೆಲ್ಲ ಚಟುವಟಿಕೆಗಳಿಗೂ ಬೇಕಾದ ಪುಡಿಗಾಸನ್ನು ಒದಗಿಸಬಲ್ಲ ಸಾಮರ್ಥ್ಯವನ್ನೂ , ಸಂಪನ್ಮೂಲವನ್ನೂ ಹೊಂದಿದ್ದುದು.

    ಈ ನಮ್ಮ ಶ್ರೀಮಂತ ನಾಯಕ ಶಿವಕುಮಾರನಿಗೆ ಗುಪ್ತವಾಗಿ ದೊರಕಿದ್ದ ಒಂದು ಬುದ್ಧಿಮಾತಿನ ಪ್ರಕಾರ, ಅವನು ಪರೀಕ್ಷೆಯಲ್ಲಿ ಮತ್ತೆ ಮತ್ತೆ ಫೇಲಾಗಲು ಕಾರಣ ಉತ್ತರಪತ್ರಿಕೆಗಳಲ್ಲಿ ಸಾಕಷ್ಟು ಅಡಿಷನಲ್‌ ಶೀಟ್‌ ಬಳಸದೇ ಇರುವುದು. ನಾಡಿನಾದ್ಯಂತ ಲಕ್ಷಾಂತರ ಮಕ್ಕಳು ಪ್ರತಿವರ್ಷವೂ ಪರೀಕ್ಷೆ ಬರೆಯುವಾಗ ಕೇವಲ ಎಂಟು-ಹತ್ತು ದಿನಗಳಲ್ಲಿ ಇವರೆಲ್ಲರ ಉತ್ತರ ಪತ್ರಿಕೆಗಳನ್ನೂ ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯ. ಪರೀಕ್ಷಕರಿಗೆ ಉಳಿದಿರುವ ಒಂದೇ ಒಂದು ಹೆ¨ªಾರಿಯೆಂದರೆ, ಪುಟ ಒಂದಕ್ಕೆ ಇಷ್ಟು ಎನ್ನುವ ಲೆಕ್ಕಾಚಾರದಲ್ಲಿ ಅಂಕಗಳನ್ನು ಬೇಗ ಬೇಗ ಹಾಕುತ್ತ ಹೋಗುವುದು. ಮೊದಲ ಒಂದೆರಡು ಪುಟಗಳಲ್ಲಿದ್ದ ಉತ್ತರಗಳನ್ನು ಮಾತ್ರ ವಿವರವಾಗಿ ಗಮನಿಸಿ ಅಂಕಗಳನ್ನು ನೀಡುವರೆಂದು, ನಂತರದ ಪುಟಶ್ರೀಗಳಿಗೆ ಅಡಿಷನಲ್‌ ಶೀಟು ಸಂಖ್ಯೆಗಳನ್ನು ಲೆಕ್ಕ ಹಾಕಿ ಅಂಕಗಳನ್ನು ನೀಡಲಾಗುವುದು ಎಂದು ಶಿವಕುಮಾರನಿಗೆ ತಿಳಿಸಲಾಗಿತ್ತು. ಕುಮಾರನು ನಮ್ಮ ತಂಡದ ನಾಯಕನಾಗಿದ್ದರಿಂದ ಅವನ ಪರೀಕ್ಷೆಯ ಫ‌ಲಿತಾಂಶ ನಮ್ಮೆಲ್ಲರ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಹಾಗಾಗಿ, ಅಡಿಷನಲ್‌ ಶೀಟು ತಂತ್ರಗಾರಿಕೆ ಕುರಿತು ಪ್ರತಿ ಸಂಜೆಯ ಮೀಟಿಂಗಿನಲ್ಲೂ ದೀರ್ಘ‌ವಾಗಿ, ವಿವರವಾಗಿ ಚರ್ಚೆಯಾಗುತ್ತಿತ್ತು. ಕನ್ನಡದಲ್ಲಿ ಉತ್ತರಗಳನ್ನು ಬರೆಯುವಾಗ ಬೇಗ ಬೇಗ ಬರೆಯಬಹುದು. ಒಂದರ ನಂತರ ಇನ್ನೊಂದು ಅಡಿಷನಲ್‌ ಶೀಟುಗಳನ್ನು ಪಟಪಟನೆ ಬಳಸಬಹುದು. ದರಿದ್ರ ಇಂಗ್ಲಿಶ್‌ ಪೇಪರ್‌ಗೆ ಬೇಕಾದ ಅಡಿಷನಲ್‌ ಶೀಟ್‌ ತುಂಬುವುದು ಹೇಗೆ? ಇಂಗ್ಲಿಶ್‌ ಅಕ್ಷರಗಳನ್ನು ದಪ್ಪ ದಪ್ಪವಾಗಿ ಬರೆದರೆ ಒಳ್ಳೆಯ ಉಪಾಯವಾಗುತ್ತದಲ್ಲವೆ? ಸಲಹೆಯೇನೋ ಜಾಣತನದ್ದು. ಒಬ್ಬ ವಿದ್ಯಾರ್ಥಿ ಕನ್ನಡದಲ್ಲಿ ಬರೆಯುವಾಗ ಸಣ್ಣಕ್ಕಿ ಅಕ್ಷರಗಳನ್ನು, ಇಂಗ್ಲಿಶ್‌ ಬರೆದಾಗ ದಪ್ಪಕ್ಷರಗಳನ್ನು ಬರೆದರೆ ಕಳ್ಳತನವು ಮಾಲು ಸಮೇತ ಸಿಕ್ಕಿಹಾಕಿಕೊಂಡ ಹಾಗೆಯೇ ತಾನೆ? ತಕರಾರೇ ಬೇಡ, ಎರಡು ಭಾಷೆಯಲ್ಲೂ ಅಕ್ಷರಗಳನ್ನು ಒಂದೇ ಗಾತ್ರದಲ್ಲಿ ಬರೆಯುವುದೆಂದು ತೀರ್ಮಾನವಾಯಿತು. ಯಾವ ಯಾವ ಸಬೆjಕ್ಟಿಗೆ ಎಷ್ಟೆಷ್ಟು ಅಡಿಷನಲ್‌ ಶೀಟು ಬಳಸಬೇಕೆಂದು ತುಂಬ ಹೊತ್ತು ಚರ್ಚಿಸಿ, ಅಳೆದು-ಸುರಿದು ಒಂದು ನಿರ್ಧಾರಕ್ಕೆ ಬಂದು ನಮ್ಮ ತಂಡವು ಯಥೋಚಿತವಾದ ಶಿಫಾರಸುಗಳನ್ನು ನೀಡುತ್ತಿತ್ತು. ಶಿವಕುಮಾರನಂತಹ ಇನ್ನೂ ಅನೇಕ ಕುಮಾರ್‌ಗಳು ನಮ್ಮೊಡನೆ ತುಂಬಾ ಇದ್ದುದರಿಂದ ಪರೀûಾ ಹಾಲ್‌ನಲ್ಲಿ ಅಡಿಷನಲ್‌ ಶೀಟುಗಳನ್ನು ಪಡೆಯಲು ಒಂದು ರೀತಿಯ ಸ್ಪರ್ಧೆಯೇ ಇರುತ್ತಿತ್ತು. ಮತ್ತೆ ವಿಚಾರ ಸಂಕಿರಣದಲ್ಲಿ ಚರ್ಚೆ. ಉಳಿದವರು ಪಡೆ ಯುವ ಅಡಿಷನಲ್‌ ಶೀಟ್‌ಗಳಿಗಿಂತ ಇನ್ನೂ ಒಂದು ನಾಲ್ಕು ಅಡಿಷನಲ್‌ ಶೀಟ್‌ಗಳನ್ನು ಬಳಸಿ ಉತ್ತರೋತ್ತರಗಳನ್ನು ಬರೆಯುವುದು ಎಲ್ಲ ದೃಷ್ಟಿಯಿಂದಲೂ ಸೂಕ್ತವೆಂದು ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

    ಫ‌ಲಿತಾಂಶಗಳು ಪ್ರಕಟವಾದಾಗ ಯದ್ವಾತದ್ವಾ ಇರುತ್ತಿದ್ದವು. ಅಡಿಷನಲ್‌ ಶೀಟುಗಳನ್ನು ಬಳಸುತ್ತಿದ್ದುದರಿಂದ ಎಲ್ಲರಿಗೂ ಹೆಚ್ಚೆಚ್ಚು ಅಂಕಗಳು ಬರುತ್ತಿದ್ದುದು ನಿಜವಾದರೂ ಎಲ್ಲರಿಗೂ ಒಂದೇ ರೀತಿಯ ಅಂಕಗಳು ಬರುತ್ತಿರಲಿಲ್ಲ. ಅದೃಷ್ಟವಂತರು ಅಡಿಷನಲ್‌ ಶೀಟ್‌ ಮಹಾತ್ಮೆಯಿಂದಾಗಿ “ಜುಮ್‌ ‘ ಎಂದು ಪಾಸಾಗಿಯೇ ಬಿಟ್ಟರು. ಇನ್ನೂ ಕೆಲವರಿಗೆ ಹತ್ತು-ಹನ್ನೊಂದು ಅಡಿಷನಲ್‌ ಶೀಟ್‌ ಉಪಯೋಗಿಸಲ್ಪಟ್ಟಿದ್ದರೂ ನಾಲ್ಕು ಅಡಿಷನಲ್‌ ಶೀಟುಗಳಿಗಾಗುವಷ್ಟು ಅಂಕಗಳು ಮಾತ್ರ ಬರುತ್ತಿತ್ತು. ಇನ್ನೂ ಕೆಲವರು ಪ್ರತಿ ಪ್ರಯತ್ನದಲ್ಲಿ ಬಳಸುವ ಅಡಿಷನಲ್‌ ಶೀಟ್‌ಗಳು ನಿರಂತರವಾಗಿ ಹೆಚ್ಚಾಗುತ್ತಿತ್ತೇ ಹೊರತು ಅಂಕಗಳು ಮಾತ್ರ ಜಪ್ಪಯ್ಯ ಎಂದರೂ ಹೆಚ್ಚಾಗುತ್ತಿರಲಿಲ್ಲ. ನಮ್ಮ ತಂಡದ ನಾಯಕ ಶಿವಕುಮಾರನು ಕೂಡ ಈ ದುರದೃಷ್ಟದ ಪೈಕಿಯವನೇ ಆಗಿ ನಮ್ಮೆಲ್ಲರ ತಲೆಕೆಟ್ಟುಹೋಯಿತು. ಮೆಟ್ರಿಕ್‌ ಪರೀಕ್ಷೆಯ ನಿಗೂಢತೆ ಇನ್ನೂ ಹೆಚ್ಚಾಯಿತು.

    ನನ್ನ ಹೈಸ್ಕೂಲಿನ ಇಡೀ ವರ್ಷಗಳನ್ನು ನಾನು ಅಡಿಷನಲ್‌ ಶೀಟ್‌ ಮಹಾತ್ಮೆಯನ್ನು ಜಪಿಸುತ್ತ¤ ಧ್ಯಾನಶೀಲತೆಯಲ್ಲೇ ಕಳೆದೆನು. ಯಾರು ಯಾರು ಎಷ್ಟು ಅಡಿಷನಲ್‌ ಶೀಟ್‌ಗಳನ್ನು ಉಪಯೋಗಿಸಿದರು, ಯಾರ ಅಕ್ಷರ ದುಂಡಗೆ, ಯಾರ ಅಕ್ಷರ ದಪ್ಪಗೆ, ಇನ್ನು ಎರಡು-ಮೂರು ವರ್ಷದ ನಂತರ ಬಂದೇ ಬರುವ ಪರೀಕ್ಷೆಯಲ್ಲಿ ನನ್ನ ಕುಂಡಲಿಯ ಯೋಗಕ್ಕೆ ಸೂಕ್ತವಾಗುವ ಹಾಗೆ ಎಷ್ಟೆಷ್ಟು ಅಡಿಷನಲ್‌ ಶೀಟ್‌ಗಳನ್ನು ಯಾವ ಯಾವ ಸಬ್ಜೆಕ್ಟ್ಗಳಲ್ಲಿ ಬಳಸಬೇಕು ಎಂಬ ಲೆಕ್ಕಾಚಾರವನ್ನು ಹಗಲು ರಾತ್ರಿಯೂ ಮಾಡುತ್ತಿದ್ದೆ. ರಾತ್ರಿಯಲ್ಲೂ ಬೀಳುತ್ತಿದ್ದ ಕನಸುಗಳಲ್ಲಿ ಕೂಡ ಅಡಿಷನಲ್‌ ಶೀಟ್‌ಗಳ ಬಂಡಲು ಬಂಡಲುಗಳೇ ಎದುರಾಗುತ್ತ, ನಿರಂತರವಾಗಿ ಕೈಬೀಸಿ ಕರೆಯುತ್ತ ಆಹ್ವಾನಿಸುತ್ತಿದ್ದವು.

    ಈ ಮಧ್ಯೆ ನಮ್ಮೂರಲ್ಲಿ ಕಾಂಪೌಂಡರ್‌ ಆಗಿ ಕೆಲಸ ಮಾಡುತ್ತಿದ್ದ ಶಿವರಾಮಯ್ಯನಿಗೆ ಮೈಸೂರಿಗೆ ವರ್ಗವಾದಾಗ ಆತನ ಎರಡು ಅವಳಿ-ಜವಳಿ ಹೆಣ್ಣು ಮಕ್ಕಳುಗಳಾದ ಯಮುನಾ, ಜಮುನಾ ಇಬ್ಬರೂ ಹತ್ತನೇ ತರಗತಿಯಲ್ಲೇ ಓದುತ್ತಿದ್ದರು. ಮತ್ತೆ ಅವರು ಶ್ಯಾನುಭೋಗರ ಮಗಳ ಮದುವೆಗೆ ಬಂದಿದ್ದಾಗ ಆ ಮಕ್ಕಳೊಡನೆ ಸಮಾಲೋಚನೆ ನಡೆಸಲಾಗಿ ಮೈಸೂರಿನ ವಿದ್ಯಾರಣ್ಯಪುರಂ, ಒಂಟಿಕೊಪ್ಪಲು ಇಂತಹ ಶ್ರೇಷ್ಠವಾದ ಬಡಾವಣೆಗಳಲ್ಲೂ ಸ್ಕೂಲ್‌ ಮಕ್ಕಳೆಲ್ಲ ಅದೆಷ್ಟೊ ಯುಗಗಳಿಂದ ಅಡಿಷನಲ್‌ ಶೀಟ್‌ಗಳನ್ನು ಬಳಸಿಯೇ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆಂದು, ಸಂವತ್ಸರದಿಂದ ಸಂವತ್ಸರಕ್ಕೆ ಅವರು ಬಳಸುತ್ತಿರುವ ಅಡಿಷನಲ್‌ ಶೀಟ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆಯೆಂದು, ಹಾಗೆಯೇ ರ್‍ಯಾಂಕ್‌ಗಳು, ಫ‌ಸ್ಟ್‌ ಕ್ಲಾಸ್‌ಗಳು ಕೂಡ ಮಕ್ಕಳ ಉಡಿಗೂ-ಮುಡಿಗೂ ಬಂದು ಬೀಳುತ್ತಿವೆಯೆಂದು ನಮಗೆಲ್ಲ ಈಚಿನ ರಹಸ್ಯಗಳನ್ನು, ಮಾಹಿತಿಗಳನ್ನು ಹೇಳಿಕೊಟ್ಟರು. ಶಿವಕುಮಾರನು, ಆತನ ಗೋತ್ರದವರು ಅಡಿಷನಲ್‌ ಶೀಟ್‌ಗಳನ್ನು ಹೆಚ್ಚು ಹೆಚ್ಚಾಗಿ ಬಳಸುತ್ತ¤ ಒಂದರ ನಂತರ ಇನ್ನೊಂದು ಸಬ್ಜೆಕ್ಟ್‌ನಲ್ಲಿ ಪಾಸಾಗುತ್ತಿದ್ದರು.

    ನಾನು ನಿಜವಾಗಲೂ ಭಯ ಬಿದ್ದದ್ದು ಅವನು ಗಣಿತದ ಪರೀಕ್ಷೆ ಬರೆಯುವಾಗ ಉಪಯೋಗಿಸಿದೆನೆಂದು ಹೇಳಿದ ಅಡಿಷನಲ್‌ ಶೀಟ್‌ ಸಂಖ್ಯೆಗಳಿಂದ. ಗಣಿತದಂತಹ ವಿಷಯಕ್ಕೆ ಬಂದಾಗ ಒಟ್ಟು ಆತನಿಗೆ ಇಪ್ಪತ್ತೆರಡು ಶೀಟ್‌ಗಳು ಬೇಕಾಯಿತಂತೆ. ಅಷ್ಟೊಂದು ಪುಟಗಳ ತುಂಬಾ ಅದ್ಯಾವ ಸೂತ್ರ, ಸಮೀಕರಣಗಳನ್ನು ಬರೆದನೆಂಬುದು ನನಗೆ ಈವತ್ತಿಗೂ ರಹಸ್ಯವೇ! ಈಗ ನಾಲ್ಕಾರು ದಶಕಗಳ ನಂತರ ಅದೊಂದು ಸಾಧಾರಣ ಸಂಗತಿಯೆಂಬಂತೆ ನಾನು ನಿರಾಸಕ್ತ ಧ್ವನಿಯಲ್ಲಿ ಬರೆಯುತ್ತಿರುವಂತೆ ಕಂಡರೂ, ಆವಾಗ ಮಾತ್ರ ನಮಗೆಲ್ಲ ದಿಗ್ಭ್ರಮೆಯಾಗಿ ದಿಕ್ಕು ತೋಚದೆ ವರ್ಷಕಾಲ ಪರಿತಪಿಸಿದ್ದೆವು. ಮತ್ತು ನಮ್ಮ ಪರೀಕ್ಷಾ ತಯಾರಿ ಕೂಡ ಧೃತಿಗೆಟ್ಟಿತ್ತು. ನಮಗೆ ಇನ್ನೂ ಆಶ್ಚರ್ಯಗಳು ಕಾದಿದ್ದವು. ಶಿವಕುಮಾರ್‌ ನಿರೀಕ್ಷಿಸಿದ್ದು ಮೂವತ್ತೇ ಮೂವತ್ತು ಅಂಕಗಳು. ಪರೀಕ್ಷೆಯ ನಂತರ ಆತನು ನಮ್ಮೂರ ಜೋಯಿಸರ ಹತ್ತಿರ ಕಣಿ ಕೇಳಿದಾಗ ಅವರು ಕೂಡ ಹೇಳಿದ್ದು ಮೂವತ್ತನಾಲ್ಕು ಅಂಕಗಳ ಸುತ್ತ-ಮುತ್ತ ಬರುತ್ತದೆಂದು. ಆದರೂ ಅವನಿಗೆ ನಿಜವಾಗಿ ಬಂದ ಅಂಕಗಳು ನಲವತ್ತೆಂಟು. ಆತನಿಗೂ, ನಮಗೂ, ನಮ್ಮ ಶಿಕ್ಷಕರಿಗೂ ಆಘಾತ. ಆದರೆ, ಇದರಿಂದಾಗಿ ನಮಗೆ ಅಡಿಷನಲ್‌ ಶೀಟ್‌ಗಳ ಮಹಾತ್ಮೆಯ ಬಗ್ಗೆ ನಂಬಿಕೆ ಹೆಚ್ಚಾದದ್ದು ನಿಜ.

    ಶಿವಕುಮಾರನ ವಿಷಯವಿರಲಿ, ನನ್ನ ಸ್ವಂತ ವಿಷಯದಲ್ಲೂ ಹೀಗೇ ಆಯಿತು. ಆದರೆ, ಅಂಕಗಳು ಮಾತ್ರ ವಿರುದ್ಧ ದಿಕ್ಕಿನಲ್ಲಿದ್ದವು. ಗಣಿತದ ವಿಷಯಕ್ಕೆ ಬಂದಾಗ ಅಡಿಷನಲ್‌ ಶಿಟ್‌ಗಳನ್ನು ಅದಷ್ಟೊಂದು ಉಪಯೋಗಿಸಿ ಲಗತ್ತಿಸಿದ್ದರೂ ಕನಿಷ್ಠ ಅಂಕಗಳು ಮಾತ್ರ ಬಂದವು. 

ಭೌತಶಾಸ್ತ್ರ, ರಸಾಯನಶಾಸ್ತ್ರ ಇಂತಹ ವಿಷಯಗಳಲ್ಲಿ ಉತ್ತರ ಬರೆಯುವಾಗ ಬೇಕುಬೇಕೆಂದೇ ಚಿತ್ರಗಳನ್ನು ಬಿಡಿಸಿ, ಬಿಡಿಸಿ ದೊಡ್ಡದಾಗಿ ದೊಡ್ಡದಾಗಿ ಬರೆಯುತ್ತಿದ್ದೆ. ಪುಟಗಳು ಸುಮ್ಮನೆ ಭರ್ತಿಯಾಗುತ್ತಿದ್ದವು. ಆದರೂ ರಸಾಯನಶಾಸ್ತ್ರದಲ್ಲಿ ನನಗೆ “ತಗೋ ನನ್ನ ರಾಜ’ ಅನ್ನುವಂತೆ ತೀರಾ ಫ‌ಸ್ಟ್‌ ಕ್ಲಾಸ್‌ ಅಂಕಗಳು ಬಂದಾಗ ಅದು ಹೇಗೆ ಎಂದು ಅಡಿಷನಲ್‌ ಶೀಟ್‌ಗಳ ಸಂಖ್ಯೆಗಳನ್ನು ಎಲ್ಲ ನೆಲೆಗಳಿಂದಲೂ ಗುಣಾಕಾರ, ಭಾಗಾಕಾರ ಹಾಕಿದ್ದರೂ ಈವತ್ತಿಗೂ ನನಗೆ ಹೊಳೆಯುತ್ತಿಲ್ಲ. ಒಂದಂತೂ ಖಚಿತವಾಯಿತು. ಹೆಚ್ಚು ಅಂಕಗಳು ಬರಬೇಕಾದರೆ ಹೆಚ್ಚು ಅಡಿಷನಲ್‌ ಶೀಟ್‌ಗಳನ್ನು ಬಳಸಬೇಕು ಎಂಬುದು ಸಾಮಾನ್ಯ ಸೂತ್ರವಾಗಿ ಎಲ್ಲ ಕಾಲದಲ್ಲೂ ನಿಜ. ಆದರೆ ನಮಗೆ ಕೊನೆಗೆ ಬರುವ ಅಂಕಗಳಿಗೂ, ಅಡಿಷನಲ್‌ ಶೀಟ್‌ ಸಂಖ್ಯೆಗಳಿಗೂ ಯಾವಾಗಲೂ ತರ್ಕಬದ್ಧವಾದ ಪ್ರಮಾಣಾನುಸಾರ ಸಂಬಂಧವಿರುತ್ತದೆ ಎಂದು ನಂಬಲು ಹೋಗಬಾರದು.

ಆದರೆ, ನನಗೆ ಅಡಿಷನಲ್‌ ಶೀಟ್‌ ಮಹಾತ್ಮೆ ನಿಜವಾಗಿಯೂ ಅರ್ಥವಾದದ್ದು ಉನ್ನತ ಸರ್ಕಾರಿ ಅಧಿಕಾರಿಯಾದ ಮೇಲೆ, ಬರಹಗಾರನಾದ ಮೇಲೆ. ತನಿಖೆಯ ವರದಿಯಿರಲಿ, ಸಂಶೋಧನೆಯ ವರದಿಯಿರಲಿ, ಅಧ್ಯಯನ ಆಯೋಗದ ಪ್ರಬಂಧವಿರಲಿ, ಇನ್ನೊಬ್ಬರ ಮೇಲೆ ದೂರಿರಲಿ ಪುಟಗಳ ಸಂಖ್ಯೆ ಹೆಚ್ಚಿದಷ್ಟೂ ವರದಿಯ ಘನತೆ ಮತ್ತು ಮಹತ್ವ ಹೆಚ್ಚುತ್ತಿತ್ತು. ವರದಿಯ ಭಾಗ ಕಮ್ಮಿಯಿ¨ªಾಗ ಅನುಬಂಧ, ಉಲ್ಲೇಖ, ಅಡಿ ಟಿಪ್ಪಣಿಗಳನ್ನು ಸೇರಿಸುತ್ತಾ, ಹೆಚ್ಚಿನ ಸಂಖ್ಯೆಯ ಅಡಿಷನಲ್‌ ಶೀಟ್‌ಗಳನ್ನು ಬಳಸುತ್ತಿ¨ªೆ. ನನಗೆ ಸಂದ ಕೆಲವು ಭಡ್ತಿಗಳಿಗೆ ಇಂತಹ ವರದಿಗಳು ಕೂಡ ಕಾರಣವಾಗಿವೆ. ಈ ವರದಿಗಳನ್ನು ಯಾರಾದರೂ ಓದುತ್ತಾರೆ, ಅಥವಾ ಅದರಲ್ಲಿ ಅಡಕವಾಗಿರುವ ಶಿಫಾರಸುಗಳನ್ನು ಮಾನ್ಯ ಮಾಡುತ್ತಾರೆ ಎಂದೇನಲ್ಲ. ಉತ್ತರ ಪತ್ರಿಕೆಗಳನ್ನು ಗಮನಿಸುವಾಗ, ಅಡಿಷನಲ್‌ ಶೀಟ್‌ಗಳಲ್ಲಿ ಬರೆದಿರುವ ಉತ್ತರವನ್ನು ಓದದೆಯೂ ಅಂಕಗಳನ್ನು ನೀಡುವುದಿಲ್ಲವೆ? ಹಾಗೆ ಬೃಹತ್‌ ಗಾತ್ರದ ವರದಿಗಳನ್ನು ಓದದೆಯೂ ಕೂಡ ನಿಮ್ಮನ್ನು ಗೌರವಿಸುತ್ತಾರೆ, ಭಡ್ತಿ ಕೊಡುತ್ತಾರೆ.

ಸೃಜನಶೀಲ ಕಾದಂಬರಿಗಳನ್ನು ರಚಿಸುವಾಗ ನೂರೈವತ್ತು, ಇನ್ನೂರು-ಮುನ್ನೂರು ಪುಟಗಳಿಗಾಗುವಷ್ಟಾದರೂ ಅಡಿಷನಲ್‌ ಶೀಟ್‌ಗಳನ್ನು ಬಳಸಿ ಬರೆಯಿರಿ ಎಂದು ವಿಮರ್ಶಕರೂ, ಪ್ರಕಾಶಕರೂ ಸಲಹೆಗಳನ್ನು ಕೊಡುತ್ತಲೇ ಇದ್ದಾರೆ. ಇಂತಹ ಸಂದರ್ಭಗಳಲ್ಲಿ ನನಗೆ ನಮ್ಮ ಬಾಲ್ಯ ಕಾಲದ ಹೀರೋ ಶಿವಕುಮಾರನ ನೆನಪಾಗುತ್ತದೆ. ಮನಸ್ಸಿನ ಮೂಲಮೂಲೆಯಲ್ಲೂ ಕೃತಜ್ಞತೆ ಮೂಡುತ್ತದೆ.

ಶಿವಕುಮಾರನ ಇತಿಹಾಸ ಅಲ್ಲಿಗೇ ಮುಗಿಯಿತೆಂದು ಯಾರೂ ತಪ್ಪು ತಿಳಿಯಬೇಡಿ. ಮುಂದೆ ಆತ ಚೆನ್ನಾಗಿಯೇ ಓದಿದ. ಮನಶಾÏಸ್ತ್ರ , ಸಾಹಿತ್ಯದಂತಹ ವಿಷಯಗಳಲ್ಲೂ ಸ್ನಾತಕೋತ್ತರ ಪದವಿ, ಎಂ.ಫಿಲ್‌, ಡಾಕ್ಟರೇಟುಗಳನ್ನು ಕೂಡ ಪಡೆದ. ಸಂಶೋಧಕನಾದ, ಬರಹಗಾರನಾದ. ಆಗಾಗ್ಗೆ ನನಗೆ ಸಿಗುತ್ತಲೂ ಇರುತ್ತಾನೆ. ಇನ್ನೂ ಅವನಿಗೆ ಅಡಿಷನಲ್‌ ಶೀಟ್‌ ಮಹಾತ್ಮೆಯ ಬಗ್ಗೆ ಗಾಢವಾದ ನಂಬಿಕೆಯಿದೆ. ನಿಜ ಹೇಳಬೇಕೆಂದರೆ, ಆತ ಈ ಸಂಸ್ಕೃತಿಯ ಗಂಭೀರ-ಸಾಂಸ್ಕೃತಿಕ ಆಯಾಮಗಳನ್ನು ಸ್ವತಃ ಮನಗಂಡು ಇತರರಿಗೂ ಮನಗಾಣಿಸುತ್ತಿದ್ದಾನೆ. ಅವನ ಪ್ರಕಾರ ನಮ್ಮ ಸಂಸ್ಕೃತಿಯಲ್ಲಿ ಹೆಚ್ಚು ಅಡಿಷನಲ್‌ ಶೀಟ್‌ಗಳನ್ನು ಉಪಯೋಗಿಸಿದವರೆಂದರೆ ವ್ಯಾಸ ಮಹರ್ಷಿಗಳೇ. ಆದಿ ಕವಿ ವಾಲ್ಮೀಕಿಯನ್ನು ಸೋಲಿಸಲು, ಇಲ್ಲ ಆತನಿಗೆ ಸಮಾನವಾಗಿ ನಿಲ್ಲಲು, ವ್ಯಾಸರಿಗಿದ್ದ ಒಂದೇ ಒಂದು ಮಾರ್ಗವೆಂದರೆ, ಹೆಚ್ಚು ಹೆಚ್ಚು ಅಡಿಷನಲ್‌ ಶೀಟ್‌ಗಳನ್ನು ಬಳಸಿ ಉಪಕಥೆಗಳು, ಉಪಾಖ್ಯಾನಗಳು, ವಾಗ್ವಾದ-ಸಂವಾದ-ಚರ್ಚೆ, ಉಪದೇಶಗಳನ್ನೆಲ್ಲ ತುಂಬುತ್ತ ಹೋದದ್ದು. ಅಡಿಷನಲ್‌ ಶೀಟ್‌ಗಳನ್ನು ಬಳಸಿಯೇ ಬಳಸಿದ್ದು. ವಾಲ್ಮೀಕಿಯ ಆರು ಖಂಡಗಳೆಲ್ಲಿ, ವ್ಯಾಸರ ಹದಿನೆಂಟು ಪರ್ವ ಮತ್ತು ಅದೂ ಸಾಲದು ಅಂತ ಇನ್ನೂ ಸೇರಿಸಿದ ಭಾಗವತವೆಲ್ಲಿ?

ವ್ಯಾಸರ ಹೆಸರಲ್ಲಿ ಕೊಡುವ ಶ್ರೀವ್ಯಾಸ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡುವಾಗ ನೀವು ಬಳಸಿರುವ ಅಡಿಷನಲ್‌ ಶೀಟ್‌ ಸಂಖ್ಯೆಗಳನ್ನು ಕೂಡ ಪರಿಗಣಿಸುತ್ತಾರೆ. ಒಂದೇ ಷರತ್ತೆಂದರೆ, ನಿಮ್ಮ ಕೃತಿ ಮಹಾಭಾರತವನ್ನು ಕುರಿತೇ ಆಗಿರಬೇಕು. ಅಂದರೆ ಈಗಾಗಲೇ ಅಡಿಷನಲ್‌ ಶೀಟ್‌ಗಳನ್ನು ಮೈತುಂಬ, ಊರ-ತುಂಬ ಉಪಯೋಗಿಸಿ ಬರೆದಿರುವ ಮಹಾಕಾವ್ಯವನ್ನು ಕುರಿತು ಬರೆಯುವಾಗ, ಗ್ರಂಥಪೂರ್ತಿ ಅಡಿ ಟಿಪ್ಪಣಿಗಳು, ಉಲ್ಲೇಖಗಳು, ಸಾಮತಿಗಳು ಎಲ್ಲವೂ ತುಂಬಿತುಳುಕಿ, ಅನುಬಂಧದ ಮೇಲೆ ಅ ನುಬಂಧವು ಬೆಳೆಯುತ್ತ ಹೆಮ್ಮರವಾಗಿ ಅಡಿಷನಲ್‌ ಶೀಟ್‌ಗಳ ಭಾರದಿಂದ ವ್ಯಾಖ್ಯಾನ ಸಿರಿಯು ಜಗ್ಗಿ ಹೋಗಿಬಿಡಬೇಕು. ಅಂದ ಹಾಗೆ ಶಿವಕುಮಾರನಿಗೆ ಈಗಾಗಲೇ ಎರಡು ಸಲ ಶ್ರೀವ್ಯಾಸ ಪ್ರಶಸ್ತಿ ಬಂದಿದೆ.

ಕೆ. ಸತ್ಯನಾರಾಯಣ

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.