ಹಳೆ ಪಾಂಜಿ ಭೂತದ ಹೊಸ ಬಿಟ್‌ ಕಾಯಿನ್‌ ಅವತಾರ


Team Udayavani, Apr 9, 2018, 8:05 AM IST

BitCoin-600.jpg

ಒಂದು ಸ್ಕೀಂನಲ್ಲಿ ಉದ್ಯಮದ ಕತೆ ಹೇಳಿ ಅದರ ಹೂಡಿಕೆದಾರನಿಗೆ ಪ್ರತಿಫ‌ಲ ಅಥವಾ ರಿಟರ್ನ್ ಕೊಡುವುದು ಮುಂಬರುವ ಇನ್ನೊಬ್ಬನ ಹೂಡಿಕೆಯಿಂದಲೇ ಹೊರತು ಬೇರೆ ಯಾವುದೇ ಲಾಭದಿಂದಲ್ಲ. ಅತೀ ಹೆಚ್ಚು ಬಡ್ಡಿದರದ ಘೋಷಣೆಯನ್ನು ಮಾಡಿ ಮೂಲಧನ ಸಂಗ್ರಹಿಸುತ್ತಾ ಅದನ್ನೇ ಹಳೆ ಹೂಡಿಕೆದಾರರಿಗೆ ಕೊಡುತ್ತಿರುವುದೇ ಇದರ ಮೂಲ ತಂತ್ರ.

ಆಶೆ ಬಲೆಯನು ಬೀಸಿ ನಿನ್ನ ತನ್ನೆಡೆಗೆಳೆದು
ಘಾಸಿನೀಂಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ ಗುಟ್ಟಿನಲಿ ನಗುವ
ಮೋಸದಾಟವು ದೈವ ಮಂಕುತಿಮ್ಮ||

ಭಾಗ 1: ಹಳೆ ಭೂತ 
1919 ರ ಸಮಯ. ದೂರದ ಅಮೆರಿಕಾದ ಬೋಸ್ಟನ್‌ ಪಟ್ಟಣದಲ್ಲಿ ಚಾರ್ಲ್ಸ್ ಪಾಂಜಿ (1882-1949) ಎಂಬ ಇಟಾಲಿಯನ್‌ ಮೂಲದ ಒಬ್ಬ ಚೋರನಿದ್ದನು. ಅವನು ಅಂತಿಂತಹ ಚೋರನಲ್ಲ. ಅವನೊಬ್ಬ ಸೂಟ್‌ಬೂಟ್‌ ಧರಿಸಿ, ಬಿಸಿನೆಸ್‌ ನಡೆಸಿ ಒಂದು ಅತ್ಯಾಕರ್ಷಕ ‘ಇನ್ವೆಸ್ಟ್‌ಮೆಂಟ್‌ ಸ್ಕೀಂ’ ಮುಖಾಂತರ ಲಕ್ಷಾಂತರ ಜನರ ಕೋಟ್ಯಾಂತರ ಗುಳುಂ ಮಾಡಿದ ಕುಖ್ಯಾತ ಚೋರ – ವಿತ್ತ ಜಗತ್ತಿನ ವೀರಪ್ಪನ್‌!

ಆತ ಮಾಡಿದ್ದಾದರೂ ಏನು?
ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಅಲ್ಲಿ ಇಲ್ಲಿ ಕೆಲಸ ನೋಡುತ್ತಾ ಇರುತ್ತಿದ್ದ ಈ ಪಾಂಜಿಗೆ ಒಂದು ದಿನ ಸ್ಪೈನ್‌ ದೇಶದ ಒಬ್ಬ ಗ್ರಾಹಕನಿಂದ ಒಂದು ಓಲೆ ಬಂತು. ಅದರೊಳಗೆ ಮರು ಉತ್ತರಕ್ಕಾಗಿ ಬೇಕಾದ ಅಂಚೆ ವೆಚ್ಚಕ್ಕಾಗಿ ‘ಅಂತರಾಷ್ಟ್ರೀಯ ರಿಪ್ಲೈ ಕೂಪನ್‌’ (IRC) ಒಂದನ್ನು ಇರಿಸಲಾಗಿತ್ತು. ಪದ್ಧತಿ ಪ್ರಕಾರ ಆ ಕೂಪನನ್ನು ಅಮೇರಿಕಾದ ಪೋಸ್ಟ್‌ ಆಫೀಸಿನಲ್ಲಿ ತೋರಿಸಿ ಸ್ಪೈನ್‌ ದೇಶಕ್ಕೆ ಮರು ಉತ್ತರಕ್ಕೆ ಬೇಕಾದಷ್ಟು ಅಂಚೆ ಚೀಟಿಯನ್ನು ವಿನಿಮಯದಲ್ಲಿ ತೆಗೆದುಕೊಳ್ಳಬಹುದಿತ್ತು. ಅದನ್ನು ಮಾಡುವಾಗ ಆತನು ಗಮನಿಸಿದ ಅಂಶವೆಂದರೆ ಸ್ಪೈನ್‌ನಲ್ಲಿ ಅಂತಹ ಒಂದು ಕೂಪನ್ನಿಗೆ ತಗಲುವ ವೆಚ್ಚ ಅಮೇರಿಕಾದಿಂದ ಮರುಟಪ್ಪಾಲಿಗೆ ತಗಲುವ ಅಂಚೆ ವೆಚ್ಚಕ್ಕಿಂತ ಕಡಿಮೆಯಾಗಿತ್ತು. ಅಂತಹ ‘ಆರ್ಬಿಟ್ರಾಜ್‌’ ಅಥವಾ ಬೆಲೆಯ ವ್ಯತ್ಯಾಸದಲ್ಲಿ ಸುಮಾರು ಶೇ.400ರಷ್ಟು ಲಾಭ ಗಳಿಸಬಹುದಾಗಿತ್ತು. ಪಾಂಜಿಯ ತೀಕ್ಷ್ಣ ಬುದ್ಧಿಗೆ ಇಷ್ಟೇ ಸಾಕಿತ್ತು. ಕೂಡಲೇ ಪಾಂಜಿ ಅದರಲ್ಲಿ ಒಂದು ಬಿಸಿನೆಸ್‌ ಶುರು ಮಾಡೇ ಬಿಟ್ಟ. ಸಾರ್ವಜನಿಕರಿಗೆ ಈ ಲಾಭದ ಕತೆಯನ್ನು ಹೇಳಿ ಅಂತಹ ಕೂಪನ್‌ಗಳಲ್ಲಿ ಹೂಡಿ 90 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಹಣ ಸಂಗ್ರಹ ಶುರು ಮಾಡಿದ. ಜನರು ಅವನ ಸ್ಕೀಂ ವಿವರಣೆಯನ್ನು ಕೇಳಿ ಅತಿಯಾಸೆಯಿಂದ ಮರುಳಾಗಿ ಹಣ ಹೂಡಿಕೆಗೆ ಮುಗಿಬಿದ್ದರು.

ಈ ರಿಪ್ಲೈ ಕೂಪನಿನ ಕತೆ ನೋಡಲು – ಕೇಳಲು ಚಂದ. ಅದರೆ ವಾಸ್ತವವೇ ಬೇರೆ. ವಾಸ್ತವದಲ್ಲಿ ಸಾರ್ವಜನಿಕರು ಹೂಡಿದ ಹಣದಷ್ಟು ಪೋಸ್ಟಲ್‌ ಕೂಪನ್‌ ಇಡೀ ಜಗತ್ತಿನಲ್ಲೇ ರಿಲೀಸ್‌ ಆಗಿರಲಿಲ್ಲ. ಅಲ್ಲದೆ ಪಾಂಜಿ ವಾಸ್ತವದಲ್ಲಿ ಕೂಪನ್ನುಗಳನ್ನು ಆಂತಹ ಸಗಟು ಪ್ರಮಾಣದಲ್ಲಿ ವಿನಿಮಯ ಮಾಡಿಕೊಳ್ಳಲೇ ಇಲ್ಲ. ಅವನು ಮಾಡಿದ್ದೆಂದರೆ, ‘ರಿಪ್ಲೈ ಕೂಪನ್‌’ ಕತೆ ಹೇಳಿ ಹೊಸ ಹೂಡಿಕೆದಾರರ ಹಣದಿಂದ ಹಳೆ ಹೂಡಿಕೆದಾರರಿಗೆ ಬಡ್ಡಿ ಪಾವತಿ ಮಾಡುತ್ತಿದ್ದದ್ದು. ಹಾಗೂ ಸಾಕಷ್ಟು ಪ್ರಮಾಣದಲ್ಲಿ ಮುಗಿಬಿದ್ದು ಬರುತ್ತಿದ್ದ ಹೂಡಿಕೆಗಳನ್ನು ಬಾಚಿ ಬಾಚಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದದ್ದು.

ಶ್ರೀಮಾನ್‌ ಪಾಂಜಿ ಹುಟ್ಟು ಹಾಕಿದ ‘ಪಾಂಜಿ ಸ್ಕೀಮ್’ ಎಂದೇ ಜಗತ್ಪಸಿದ್ಧಿಯಾದ ಇಂತಹ ತಂತ್ರಗಳು ಈ ರೀತಿ ನಡೆಯುತ್ತವೆ:
ಒಂದು ಸ್ಕೀಂನಲ್ಲಿ ಒಂದು ಆಕರ್ಷಕ ಉದ್ಯಮದ ಕತೆ ಹೇಳಿ ಅದರ ಹೂಡಿಕೆದಾರನಿಗೆ ಪ್ರತಿಫ‌ಲ ಅಥವಾ ರಿಟರ್ನ್ ಕೊಡುವುದು ಮುಂಬರುವ ಇನ್ನೊಬ್ಬನ ಹೂಡಿಕೆಯಿಂದಲೇ ಹೊರತು ಬೇರೆ ಯಾವುದೇ ಔದ್ಯಮಿಕ ಲಾಭದಿಂದಲ್ಲ. ಅತೀ ಹೆಚ್ಚು ಬಡ್ಡಿದರ ಅಥವ ಪ್ರತಿಫ‌ಲದ ಘೋಷಣೆಯನ್ನು ಮಾಡಿ ಹೆಚ್ಚೆಚ್ಚು ಮೂಲಧನವನ್ನು ಸಂಗ್ರಹಿಸುತ್ತಾ ಅದೇ ಮೂಲಧನವನ್ನು ಹಳೆ ಹೂಡಿಕೆದಾರರಿಗೆ ಕೊಡುತ್ತಾ ಮುಂದುವರಿಯುವುದೇ ಇದರ ಮೂಲ ತಂತ್ರ. ಹೊಸ ಹೊಸ ಅಮಾಯಕರು ಸ್ಕೀಮಿಗೆ ಸೇರುತ್ತಲೇ ಇರುವವರೆಗೆ ಈ ಸರಣಿ ಮುಂದುವರಿಯುತ್ತದೆ ಹಾಗೂ ಹಳಬರಿಗೆ ಪ್ರತಿಫ‌ಲ ಸಿಗುತ್ತದೆ. ಹೊಸ ಹೂಡಿಕೆದಾರರು ಬೇಕಾದಷ್ಟು ಸಂಖ್ಯೆಯಲ್ಲಿ ಸಿಗದೇ ಹೋದಾಗ ಈ ಸರಣಿ ತುಂಡಾಗಿ ಹಳೆ ಹೂಡಿಕೆದಾರರಿಗೆ ಕೊಡಲು ಹಣ ಇರುವುದಿಲ್ಲ. ಹೂಡಿಕೆದಾರರು ದಿವಾಳಿಯಾಗುತ್ತಾರೆ. ಅದರೆ ಅಗಲೇ ಅದನ್ನು ಅರಂಭಿಸಿದ ಖದೀಮರು ತಮ್ಮ ಜೇಬು ತುಂಬಿಸಿ ಆಗಿರುತ್ತದೆ. ಇನ್ನು ಕೆಲವೊಮ್ಮೆ ಈ ಪಾಂಜಿ ಭೂತಗಳು ಸಂಗ್ರಹಿಸಿದ ನಿಧಿಯನ್ನು ಎತ್ತಿ ಗಂಟುಮೂಟೆ ಕಟ್ಟಿ ರಾತೋರಾತ್ರಿ ಪರಾರಿಯಾಗುತ್ತಾರೆ. ಹೀಗೆ ಎಲ್ಲರ ಹೂಡಿಕೆಯೂ ಒಂದು ದಿನ ತೆಳುಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ.

Now, the moral of the story is… ಯಾವುದೇ ಒಂದು ಹಣಕಾಸಿನ ವ್ಯವಸ್ಥೆಯಲ್ಲಿ ಪ್ರತಿಯೊಂದು ಕಾಲಘಟ್ಟದಲ್ಲೂ ಬಡ್ಡಿದರ ಇಂತಿಷ್ಟು ಎಂದು ಇರುತ್ತದೆ. ಭಾರತದಲ್ಲಿ ರಿಸರ್ವ್‌ ಬ್ಯಾಂಕ್‌ ಇದನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅದರಿಂದ ಅತೀ ಹೆಚ್ಚು ಬಡ್ಡಿದರದ ಆಮಿಷ ತೋರಿಸಿ ದುಡ್ಡು ಸಂಗ್ರಹ ಮಾಡಿದಲ್ಲಿ ಅದನ್ನು ಯಾವುದೇ ನೈಜ ಉದ್ಯಮದಲ್ಲಿ ಹೂಡಿ ಘೋಷಿತ ಪ್ರತಿಫ‌ಲ ನೀಡುವುದು ಸಾಧ್ಯವಿರುವುದಿಲ್ಲ. ಒಂದು ವೇಳೆ ಸಾಧ್ಯವಿದ್ದರೂ, ಪ್ರಚಲಿತ ಬ್ಯಾಂಕು ದರಕ್ಕಿಂತ ಅತಿಹೆಚ್ಚಿನ ದರದಲ್ಲಿ ಅವರು ಡೆಪಾಸಿಟ್‌ ಯಾಕೆ ಪಡೆಯಬೇಕು? ಬ್ಯಾಂಕಿನಿಂದಲೇ ಸಾಲ ಪಡೆಯಬಹುದಲ್ಲವೇ? ಕೇವಲ ಜನರನ್ನು ಮರುಳು ಮಾಡಲು ಯಾವ್ಯಾವುದೋ ವಿಚಿತ್ರ ಉದ್ಯಮಗಳ ಬಗ್ಗೆ ಬುರುಡೆ ಬಿಟ್ಟು ಅದರಲ್ಲಿ ಭಾರೀ ಲಾಭ ಸಿಗುತ್ತಾ ಇದೆ ಎಂದು ಜನರನ್ನು ನಂಬಿಸುತ್ತಾರೆ. ಅದನ್ನೆಲ್ಲಾ ಬಿಟ್ಟು ದುಡ್ಡಿನ ಸರಳ ತತ್ವಗಳನ್ನು ಮನದಟ್ಟು ಮಾಡಿಕೊಂಡಲ್ಲಿ ಈ ಪಾಂಜಿ ಭೂತಗಳಿಂದ ಬಚಾವಾಗಿ ಬದುಕಬಹುದು. ಅತಿಯಾದ ದುಡ್ಡಿನಾಸೆಗೆ ಮರುಳಾಗಿ ಅತೀ ಹೆಚ್ಚಿನ ಬಡ್ಡಿದರಗಳ ಹಿಂದೆ ಹೋದಲ್ಲಿ ಪೋಂಜಿ ಭೂತದ ಪೀಡೆಗೆ ಬಲಿಯಾಗುವುದು ಗ್ಯಾರಂಟಿ. ಹಾಗೆ ಆಗಿ ಹೊಂಡಕ್ಕೆ ಬಿದ್ದ ಮೇಲೆ ಯಾವ ಭೂತಕೋಲವೂ ಉಪಯೋಗಕ್ಕೆ ಬಾರದು. ಎಚ್ಚರವಿರಲಿ!

ಅದಿರಲಿ, ಈ ಸಂದರ್ಭದಲ್ಲಿ ಒಂದು ಮೋಸದ ಪಾಂಜಿ ಸ್ಕೀಮನ್ನು ಗುರುತಿಸುವುದು ಹೇಗೆ ಎಂದು ನೀವುಗಳು ಕೇಳಬಹುದು. ಮೋಸದ ಪಾಂಜಿ ಭೂತದ ಲಕ್ಷಣಗಳು ಈ ಕೆಳಗಿನಂತೆ:
1. ಅತಿಯಾದ ಪ್ರತಿಫ‌ಲ

ನಿಮ್ಮ ಹೂಡಿಕೆಯ ಮೇಲೆ ನಿಮಗೆ ಬಾಯಲ್ಲಿ ನೀರೂರುವಷ್ಟು ಪ್ರತಿಫ‌ಲದ ಗಾಳ ಹಾಕಲಾಗುತ್ತದೆ. ಎಷ್ಟರಮಟ್ಟಿಗೆ ಅಂದರೆ ಅದನ್ನು ಕಂಡೊಡನೆ ನಿಮ್ಮ ಮೆದುಳು ದೀರ್ಘ‌ ರಜೆಗೆ ಹೋಗುತ್ತದೆ. ನೀವು ಯೋಚಿಸುವುದಿಲ್ಲ. ನಿಮ್ಮೊಳಗೆ ಹುದುಗಿರುವ ಲೋಭ ಎಂಬ ರಾಕ್ಷಸ ಅದನ್ನು ಕೂಡಲೇ ಕಚಕ್‌ ಎಂದು ಕಚ್ಚಿಕೊಳ್ಳುತ್ತಾನೆ. ನಿಮ್ಮ ಪ್ರತಿಫ‌ಲ ಅಲ್ಲದೆ ನಿಮಗೆ ಈ ಸ್ಕೀಮನ್ನು ಮಾರುವ ವ್ಯಕ್ತಿಗೆ ಕೈಕಾಲು ತುಂಬಾ ಕಮಿಶನ್‌ ಅಲ್ಲದೆ ಮೂರು ಮೂರು ತಲೆಮಾರುಗಳವರೆಗೆ ಆತನ ಬಾಸುಗಳಿಗೆ ಕೂಡಾ ಸಕಲ ಸವಲತ್ತುಗಳು. ಇವನ್ನೆಲ್ಲಾ ಕೂಡಿದರೆ ಅದೇ ಸುಮಾರು ನಿಮ್ಮ ದುಡ್ಡಿನ ಶೇ.50 ಬರಬಹುದು. ಅತಿ ರೋಚಕವಾಗಿ ಲೋಭ ಹುಟ್ಟಿಸುವಷ್ಟು ಲಾಭವೇ ಈ ಸ್ಕೀಮಿನ ಮುಖ್ಯ ಭೂಮಿಕೆ. 

2. ಸೊಗಸಾದ ಕತೆ
ಇಷ್ಟು ಪ್ರತಿಫ‌ಲ ಕೊಡುವ ಉದ್ದಿಮೆಯಾದರೂ ಅದೆಂತದ್ದು? ಎಲ್ಲಿಂದ ಬರುತ್ತದೆ ಇಷ್ಟು ದುಡ್ಡು ಅಂತ ಕೇಳಿದರೆ ಯಾವತ್ತೂ ಒಂದು ಸೊಗಸಾದ ಕತೆ ಕೇಳಲು ಸಿದ್ಧರಾಗಿ. ಜಗತ್ತಿನಲ್ಲಿ ನೀವು ಕಂಡು ಕೇಳರಿಯದ ಒಂದು ಉದ್ದಿಮೆಯ ವರ್ಣರಂಜಿತ ಕತೆಯಿಂದ ನಿಮ್ಮನ್ನು ಪುಳಕಿತಗೊಳಿಸುತ್ತಾರೆ. ಪ್ರಶ್ನಾವಳಿ ತುಂಬುವುದು, ಚಿನ್ನವನ್ನು 24 ರಿಂದ 22 ಕ್ಯಾರೆಟ್ಟಿಗೆ ಪರಿವರ್ತಿಸುವುದು, ಓಸ್ಟ್ರಿಚ್‌ ಸಾಕುವುದು, ದೂರದ ಸಿಂಗಾಪುರದಲ್ಲಿ ವಿದೇಶಿ ವಿನಿಮಯದ ದೊಡ್ಡ ವ್ಯಾಪಾರ, ಇತ್ಯಾದಿ ಸಾಮಾನ್ಯವಾಗಿ ನೀವು ಕೇಳಿರದ ಒಂದು ಭಾರಿ ಘನಂದಾರಿ ಉದ್ದಿಮೆಯ ವರ್ಣನೆ ನಿಮ್ಮ ಮುಂದೆ ಅನಾವರಣಗೊಳ್ಳುತ್ತದೆ. ವಿಚಿತ್ರವೆಂದರೆ ಇಷ್ಟು ದೊಡ್ಡ ಮೊತ್ತದ ಲಾಭ ತಂದುಕೊಡುವ ಆ ಉದ್ದಿಮೆಗಳಲ್ಲಿ ಟಾಟಾ, ಬಿರ್ಲಾ, ಅಂಬಾನಿಯಾದಿಗಳು ಇರುವುದಿಲ್ಲ. ಯಾವುದೇ ಪ್ರಸಿದ್ಧ ಬಿಸಿನೆಸ್‌ ಹೌಸ್‌ ಗಳಿಗೆ ಗೊತ್ತಿಲ್ಲದ ಈ ವಿದ್ಯೆ ಇವುಗಳಿಗೆ ಕರಗತವಾಗಿರುತ್ತದೆ!

3. ನಾವು ಡಿಫ‌ರೆಂಟ್
ಇದು ಇನ್ನೊಂದು ಅಂಕ. ಕತೆಯ ಈ ಭಾಗಕ್ಕೆ ಬಂದಾಗಂತೂ ನೀವು ಕ್ಲೀನ್‌ ಬೌಲ್ಡ್ ಆಗಿರುತ್ತೀರಿ. ಪರ್ಸ್‌ ಬಿಚ್ಚಿ ಎಲ್ಲಿ ಸೈನ್‌ ಹಾಕಬೇಕು ಹೇಳಿ ಎನ್ನುತ್ತಾ ಪೆನ್‌ ಕೈಗೆತ್ತಿಕೊಳ್ಳುತ್ತೀರಿ. ನಾಟಕದ ಈ ಅಂಕದ ಹೆಸರು ‘ವಿ ಆರ್‌ ಡಿಫ‌ರೆಂಟ್’! ಇಲ್ಲಿ ಡಿಫ‌ರೆಂಟ್‌ ಹೇಗೆಂದರೆ ಇವರ ಕಂಪೆನಿಯ ಬಗ್ಗೆ ಜಾಹೀರಾತು ನಿಮಗೆ ಯಾವುದೇ ಪೇಪರ್‌/ಟಿವಿಯಲ್ಲಿ ಸಿಗಲಾರದು. ಇವರ ಮಾರಾಟ ತಂತ್ರ ಬರೇ ಬಾಯಿಂದ ಬಾಯಿಗೆ ಮಾತ್ರ. ಒಬ್ಬರು ಹತ್ತು ಮಂದಿಗೆ ಆ ಹತ್ತು ಮಂದಿ ಸಾವಿರ ಮಂದಿಗೆ ಮಾರಿ ಬಿಸಿನೆಸ್‌ ಮಾಡುವ ಮಾಡೆಲ್‌ ಇವರದ್ದಾಗಿರುತ್ತದೆ. ಇದರಲ್ಲೇ ಲಾಭ ಇದೆ ಅನ್ನುತ್ತಾರೆ. ವಿವರಗಳನ್ನು ಬರೆಯುತ್ತಾ ಹೋದರೆ ಇದೇ ಒಂದು ಪುಸ್ತಕವಾದೀತು. ಸದ್ಯಕ್ಕೆ ಇಷ್ಟು ಸಾಕು. ಈ ವಾಸನೆಯ ಜಾಡು ಹಿಡಿಯುವ ಕಲೆಯನ್ನು ಸ್ಥೂಲವಾಗಿ ಕಲಿತರೆ ಸಾಕು.

ಭಾಗ 2:
ಹೊಸ ಅವತಾರ

ನಾನು ಪಾಂಜಿಯ ಬಗ್ಗೆ ಇಷ್ಟೆಲ್ಲಾ ಕೊರೆಯುವ ಉದ್ದೇಶ ಏನೆಂದರೆ ಆ ಭೂತ ಇತ್ತೀಚೆಗೆ ಬಿಟ್‌ ಕಾಯಿನ್‌ ಕರೆನ್ಸಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾರುಕಟ್ಟೆಗೆ ಇಳಿದದ್ದು. ಬಿಟ್‌ ಕಾಯಿನ್‌ ಒಂದು ಡಿಜಿಟಲ್‌ ಕರೆನ್ಸಿ. ಅದರ ಬಗ್ಗೆ ಸಾಕಷ್ಟು ವಿವರವಾಗಿ ಈಗಾಗಲೇ ಕಾಕುವಿನಲ್ಲಿ ಚರ್ಚೆ ಆಗಿದೆ. ಬಿಟ್‌ ಕಾಯಿನ್‌ ನಲ್ಲಿ ಹೂಡಿಕೆ ಅಪಾಯಕಾರಿ, ಅದರ ಬೆಲೆ ವಿಪರೀತವಾಗಿ ಏರಿಳಿಯುತ್ತದೆ. ಒಂದು ಕಾಲದಲ್ಲಿ ಒಟ್ಟಾರೆ ಶೇ.2500 ಲಾಭ ಕೊಟ್ಟ ಬಿಟ್‌ ಕಾಯಿನ್‌ ತನ್ನ ಎತ್ತರದಿಂದ ಇದೀಗ ಸುಮಾರು ಶೇ.65ರಷ್ಟು ಕುಸಿದಿದೆ. ಅದನ್ನು ಹುಟ್ಟು ಹಾಕಿದ್ದು ಯಾರು ಹಾಗೂ ಅದನ್ನು ನಿಯಂತ್ರಿಸುತ್ತಿರುವುದು ಯಾರು ಎಂಬುದು ಕೂಡಾ ಯಾರಿಗೂ ಗೊತ್ತಿಲ್ಲ. ಅಷ್ಟೇ ಅಲ್ಲದೆ, ಅದರಲ್ಲಿ ಕಾಳಧನ ಹಾಗೂ ಕಾನೂನುಬಾಹಿರ ದುಡ್ಡು ಸಂಚಯವಾಗುವುದು ನಮ್ಮ ಸರಕಾರಕ್ಕೆ ತಲೆನೋವು ಕೊಟ್ಟಿದೆ. ಬಿಟ್‌ ಕಾಯಿನ್‌ ವ್ಯವಹಾರಕ್ಕೆ ಬ್ಯಾಂಕ್‌ ಖಾತೆಗಳನ್ನು ಬಳಸುವುದನ್ನು ತಡೆಹಿಡಿಯಲು ಆರ್‌.ಬಿ.ಐ. ಈಗಾಗಲೇ ಕ್ರಮ ಕೈಗೊಂಡಿದೆ. ಒಟ್ಟಾರೆ, ಹೂಡಿಕೆದಾರ ಕಂಗಾಲಾಗಿದ್ದಾನೆ. ಇದು ಸಮಸ್ಯೆಯ ಒಂದು ಮಜಲು.

ಎರಡನೆಯ ಮಜಲು ಏನೆಂದರೆ ಇದೀಗ ಬಿಟ್‌ ಕಾಯಿನ್‌ ಹೆಸರನ್ನು ಪಾಂಜಿ ಭೂತಗಳು ಬಳಸಿಕೊಂಡೂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು. ಒಂದು ಪಾಂಜಿ ವಂಚನೆ ಯೋಜನೆಯನ್ನು ನಡೆಸಿಕೊಂಡು ದುಡ್ಡು ಬಾಚಲು ಒಂದು ಅತ್ಯಾಕರ್ಷಕ ಯೋಜನೆಯ ಕತೆ ಬೇಕಷ್ಟೆ? ಈ ಸಾಲಿಗೆ ಇದೀಗ ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಹೊಸ ಕತೆ ಆರಂಭವಾಗಿದೆ ಎಂದು ಕಂಡುಬರುತ್ತದೆ. ಇದಕ್ಕೆ ಕಾರಣ ಮೊನ್ನೆಯ ಗುರುವಾರ ದೆಹಲಿಯಲ್ಲಿ ಬಂಧನಕ್ಕೊಳಗಾದ ಅಮಿತ್‌ ಭಾರಧ್ವಾಜ…! ಆತ ಸುಮಾರು 8000 ಜನರಿಗೆ ಸುಮಾರು ರೂ. 2000 ಕೋಟಿಯಷ್ಟು ಮೊತ್ತದ ಮೋಸ ಮಾಡಿದ್ದಾನೆ ಎನ್ನಲಾಗಿದೆ. 

ಅಮಿತ್‌ ಭಾರಧ್ವಾಜ್‌ 2014 ರಲ್ಲೇ ಭಾರತದ ಪ್ರಪ್ರಥಮ Online ಬಿಟ್‌ಕಾಯಿನ್‌ ಮಾರುಕಟ್ಟೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದವನು. ಅಲ್ಲದೆ ಆತ ‘ಗೈನ್‌ ಬಿಟ್‌ ಕಾಯಿನ್‌’ ಹಾಗೂ ‘ಜಿಬಿ ಮೈನರ್ಸ್‌’ ಎಂಬ ಎರಡು ಕಾಯಿನ್‌ ಮೈನಿಂಗ್‌ ಕಂಪೆನಿಗಳನ್ನು ಹುಟ್ಟುಹಾಕಿದವನು. ಬಿಟ್‌ ಕಾಯಿನಿನಲ್ಲಿ ಹೂಡಿಕೆ ಮಾಡುವ ಆಮಿಷ ಒಡ್ಡಿ ಜನರಿಂದ ಹಣ ಪಡೆದು ರಿಟರ್ನ್ ಕೊಡಲಾರದೆ ದೇಶ ಬಿಟ್ಟು ಓಡಿ ಹೋದವನು ಬ್ಯಾಂಕಾಕ್‌ನಲ್ಲಿ ಕಾಣಿಸಿಕೊಂಡಿದ್ದ. ಇದೀಗ ದೆಹಲಿಯಲ್ಲಿ ಬಂಧನಕ್ಕೊಳಗಾದ ಅಮಿತ್‌ ಭಾರದ್ವಾಜ್‌ ಬಿಟ್‌ ಕಾಯಿನ್‌ ಹೆಸರಿನಲ್ಲಿ ಪಾಂಜಿ ಯೋಜನೆಯನ್ನು ನಡೆಸಿದ ಆಪಾದನೆಯನ್ನು ಎದುರಿಸುತ್ತಿದ್ದಾನೆ. ಯಾವುದಕ್ಕೂ ಯಾವುದೇ ಅತ್ಯಾಕರ್ಷಕ ಯೋಜನೆಯ ಬಗ್ಗೆ ಎಚ್ಚರದಲ್ಲಿರಿ. ಅದರೊಳಗೊಂದು ಪಾಂಜಿ ಭೂತ ಹುದುಗಿರಬಹುದು!

— ಜಯದೇವ ಪ್ರಸಾದ ಮೊಳೆಯಾರ ; [email protected]

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.