ಶಿವಣ್ಣ ರುಸ್ತುಂಗಾಗಿ ವಿಲನ್ ಹುಡುಕಾಟ
Team Udayavani, Apr 18, 2018, 10:59 AM IST
ಶಿವರಾಜಕುಮಾರ್ ಅವರ “ರುಸ್ತುಂ’ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಫೋಟೋಶೂಟ್ ನಡೆದಿರುವುದು ನಿಮಗೆ ಗೊತ್ತೇ ಇದೆ. ಚಿತ್ರದ ಮುಹೂರ್ತ ಏಪ್ರಿಲ್ 24ರಂದು ನಡೆಯಲಿದೆ. ಶಿವರಾಜಕುಮಾರ್ ಜೊತೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಮಯೂರಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ನ ಖ್ಯಾತ ನಟರೊಬ್ಬರನ್ನು ಕರೆತರುವ ಆಲೋಚನೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.
ಸಂಜಯ್ ದತ್, ಅನಿಲ್ ಕಪೂರ್, ಸುನೀಲ್ ಶೆಟ್ಟಿ ಹಾಗೂ ಮನೋಜ್ ಬಾಜ್ಪೇಯಿ ಅವರಲ್ಲಿ ಒಬ್ಬರನ್ನು “ರುಸ್ತುಂ’ಗೆ ಕರೆತರುವ ಯೋಚನೆ ಇದೆ ಎಂದಿತ್ತು ಚಿತ್ರತಂಡ. ಆದರೆ, ಯಾರು ಮಾಡುತ್ತಾರೆಂಬುದು ಇನ್ನೂ ಅಂತಿಮವಾಗಿಲ್ಲ. ಚಿತ್ರತಂಡ ಈಗ ಕೇವಲ ಬಾಲಿವುಡ್ ಅಷ್ಟೇ ಅಲ್ಲದೇ, ತಮಿಳು, ತೆಲುಗಿನ ಖ್ಯಾತ ನಟರುಗಳ ಬಗ್ಗೆಯೂ ಗಮನಹರಿಸಿದ್ದು, ಸದ್ಯದಲ್ಲೇ ಅಂತಿಮವಾಗಲಿದೆಯಂತೆ.
“ಚಿತ್ರದಲ್ಲಿ ಶಿವಣ್ಣ ಎದುರು ನಿಲ್ಲುವ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಅದಕ್ಕಾಗಿ ನಟರ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಹಿಂದಿ, ತೆಲುಗು ಹಾಗೂ ತಮಿಳಿನ ಕೆಲವು ಪ್ರಮುಖ ನಟರ ಜೊತೆ ಮಾತುಕತೆಯಾಗಿದೆ. ಅವರು ಈಗಾಗಲೇ ಬೇರೆ ಸಿನಿಮಾಗಳಲ್ಲಿ ತೊಡಗಿರುವುದರಿಂದ ಡೇಟ್ಸ್ ಹೊಂದಿಕೆಯಾಗುತ್ತಿಲ್ಲ. ಸದ್ಯದಲ್ಲೇ ಒಬ್ಬರು ಅಂತಿಮವಾಗಲಿದ್ದಾರೆ’ ಎನ್ನುವುದು ನಿರ್ದೇಶಕ ರವಿವರ್ಮ ಅವರ ಮಾತು.
ಅಂದಹಾಗೆ, ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರ “ರುಸ್ತುಂ’. “ಈ ಚಿತ್ರದಲ್ಲಿ ಶಿವಣ್ಣ ಪಾತ್ರ ತುಂಬಾ ಭಿನ್ನವಾಗಿದೆ. ಹೊಸ ಶೈಲಿಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು. ಚಿತ್ರದಲ್ಲಿ ತೆಲುಗು ನಟ ಶತ್ರು ಕೂಡಾ ವಿಲನ್ ಆಗಿ ನಟಿಸುತ್ತಿದ್ದಾರೆ. ಇನ್ನು, ಏಪ್ರಿಲ್ 24ರಂದು ಚಿತ್ರ ಸೆಟ್ಟೇರಲಿದ್ದು, ಮೇ 10 ರಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ. ಬೆಂಗಳೂರು, ಬಿಹಾರ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣವಾಗಲಿದೆ.
“ರುಸ್ತುಂ’ ಚಿತ್ರವನ್ನು ಜಯಣ್ಣ ಕಂಬೈನ್ಸ್ನಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದು, ಈ ಸಂಸ್ಥೆಗೆ ಶಿವರಾಜಕುಮಾರ್ ಮಾಡುತ್ತಿರುವ ಮೂರನೆಯ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಜಯಣ್ಣ ಫಿಲಮ್ಸ್ನ “ಬಂಗಾರ – ಸನ್ ಆಫ್ ಬಂಗಾರದ ಮನುಷ್ಯ’ ಹಾಗೂ “ಮಫ್ತಿ’ ಚಿತ್ರಗಳಲ್ಲಿ ಶಿವರಾಜಕುಮಾರ್ ನಟಿಸಿದ್ದರು. ಈಗ ಇದೇ ಸಂಸ್ಥೆಯ “ರುಸ್ತುಂ ಚಿತ್ರದಲ್ಲೂ ಶಿವರಾಜಕುಮಾರ್ ನಟಿಸಲಿದ್ದಾರೆ.