ಹಾಕಿ ನಾಯಕ ಮನ್ಪ್ರೀತ್ ತಲೆದಂಡ
Team Udayavani, Apr 29, 2018, 6:45 AM IST
ಬೆಂಗಳೂರು: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಗಿದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡ ತೀವ್ರ ವೈಫಲ್ಯ ಎದುರಿಸಿದ ಹಿನ್ನೆಲೆಯಲ್ಲಿ ನಾಯಕ ಮನ್ ಪ್ರೀತ್ ಸಿಂಗ್ ತಲೆದಂಡವಾಗಿದೆ. ಅವರ ಬದಲಿಗೆ ಖ್ಯಾತ ಗೋಲ್ಕೀಪರ್, ಅನುಭವಿ ಪಿ.ಆರ್.ಶ್ರೀಜೇಶ್ರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಇದೇ ವೇಳೆ ತಂಡದ ತರಬೇತುದಾರ ಮರಿನ್ ಶೋರ್ಡ್, ಉನ್ನತ ಪ್ರದರ್ಶನ ನಿರ್ದೇಶಕ ಡೇವಿಡ್ ಜಾನ್ ಅವರೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.
ಮರಿನ್ ಅವರಿಗೆ ಬೃಹತ್ ಕೂಟಗಳಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿಲ್ಲ, ಅವರ ಆಯ್ಕೆ ಪದಟಛಿತಿ,ಯೋಚನಾ ಕ್ರಮಗಳು ಸರಿಯಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಶನಿವಾರ,ಭಾನುವಾರದಷ್ಟೊತ್ತಿಗೆ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಮರಿನ್ ಬದಲಿಗೆ ಭಾರತ ಮಹಿಳಾ ತಂಡದ ಕೋಚ್ ಹರೇಂದ್ರ ಸಿಂಗ್ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿದೆ. ಕಳೆದ 3, 4 ವರ್ಷಗಳಲ್ಲಿ ಭಾರತ 3 ತರಬೇತುದಾರರನ್ನು ಬದಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕಾಮನ್ವೆಲ್ತ್ನಂತಹ ಬೃಹತ್ ಕೂಟಗಳು ಎದುರಿದ್ದಾಗ ಮರಿನ್ ಅವರು ತಂಡವನ್ನು ಪೂರ್ಣ ಪ್ರಮಾಣದಲ್ಲಿ ಸಿದಟಛಿಗೊಳಿಸಲಿಲ್ಲ. ಅಜ್ಲಾನ್ ಶಾಗೆ ಅಪೂರ್ಣ ತಂಡ ಕಳುಹಿಸಿದರು. ಕಾಮನ್ವೆಲ್ತ್ನಲ್ಲಿ ಅನುಭವಿಗಳನ್ನು ಆಯ್ಕೆ ಮಾಡುವುದು ಬಿಟ್ಟು,ಯುವಕರಿಗೆ ಆದ್ಯತೆ ನೀಡಿದರು ಎಂದು ತಂಡದ ಹಿರಿಯ ಆಟಗಾರರೊಬ್ಬರು ಆಪಾದಿಸಿದ್ದಾರೆ.