ನೇಪಾಲ ಜಲವಿದ್ಯುತ್ ಕಚೇರಿಯಲ್ಲಿ ಸ್ಫೋಟ
Team Udayavani, Apr 30, 2018, 9:10 AM IST
ಕಠ್ಮಂಡು: ಭಾರತದ ನೆರವಿನಿಂದ ಪೂರ್ವ ನೇಪಾಲದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 900 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಘಟಕದ ಕಚೇರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಮೇ11ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಶಿಲಾನ್ಯಾಸ ಮಾಡಬೇಕಿತ್ತು. ಈ ಕಾರ್ಯಕ್ರಮದ ಯೋಜನೆಗಳು ನಡೆಯುತ್ತಿದ್ದ ವೇಳೆಯೇ ಜಲವಿದ್ಯುತ್ ಘಟಕದ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ.
ತುಂಮ್ಲಿಂಗ್ಟರ್ನ ಖಂದ್ಬಾರಿ-9ರಲ್ಲಿಯ ಅರುಣ್-3 ಜಲವಿದ್ಯುತ್ ಘಟಕದ ಕಚೇರಿಯಿರುವ ಕಾಂಪೌಂಡ್ ಗೋಡೆ ಬಾಂಬ್ ಸ್ಫೋಟದಿಂದ ಹಾನಿಗೀಡಾಗಿದೆ ಎಂದು ಮುಖ್ಯ ಜಿಲ್ಲಾಧಿಕಾರಿ ಹೇಳಿದ್ದಾರೆ. ಅದೃಷ್ಟವಶಾತ್ ಈ ಸ್ಫೋಟದಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ಜತೆಗೆ, ಸ್ಫೋಟದ ಹೊಣೆಯನ್ನು ಈವರೆಗೂ ಯಾರೂ ಹೊತ್ತುಕೊಂಡಿಲ್ಲ.