ವಿಮಾನ ಹಾರಾಟ ರದ್ದು , ವಿಳಂಬ: ಪ್ರಯಾಣಿಕರಿಗೆ ಪರಿಹಾರ ಖಚಿತ
Team Udayavani, May 22, 2018, 3:16 PM IST
ಹೊಸದಿಲ್ಲಿ : ವಿಮಾನ ಹಾರಾಟ ರದ್ದಾದರೆ ಅಥವಾ ವಿಳಂಬಗೊಂಡರೆ ಪ್ರಯಾಣಿಕರಿಗೆ ಆಯಾ ವಿಮಾನ ಸಂಸ್ಥೆಗಳೇ ಪರಿಹಾರ ನೀಡುವ ದಿನ ಸದ್ಯದಲ್ಲೇ ಬರಲಿದೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಹಾಯಕ ವಿಮಾನ ಯಾನ ಸಚಿವ ಜಯಂತ್ ಸಿನ್ಹಾ ಅವರು, ವಿಮಾನ ಯಾನ ಸಂಸ್ಥೆಗಳನ್ನು ತಮ್ಮ ಪ್ರಯಾಣಿಕರಿಗೆ ಕಡ್ಡಾಯವಾಗಿ ಉತ್ತರದಾಯಿಗಳನ್ನಾಗಿ ಮಾಡುವ ಕುರಿತು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ವಿಮಾನ ಹಾರಾಟ ವಿಳಂಬವಾದಲ್ಲಿ ಪ್ರಯಾಣಿಕರಿಗೆ ಆಯಾ ವಿಮಾನಯಾನ ಸಂಸ್ಥೆಗಳು ಹಲವು ರೀತಿಯಲ್ಲಿ ಪರಿಹಾರ ನೀಡಬೇಕಾದುದರ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಸರಕಾರವೀಗ ರೂಪಿಸುತ್ತಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು.
ಅದೇ ರೀತಿ ವಿಮಾನ ಹಾರಾಟ ರದ್ದಾದಲ್ಲಿ ಪ್ರಯಾಣಿಕರಿಗೆ ಆಯಾ ವಿಮಾನಯಾನ ಸಂಸ್ಥೆಗಳು ಸಂಪೂರ್ಣ ಟಿಕೆಟ್ ವೆಚ್ಚ ಮರುಪಾವತಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದವರು ಹೇಳಿದರು.
ಹಾಗಿದ್ದರೂ ಪ್ರತಿಕೂಲ ಹವಾಮಾನದ ಕಾರಣವಾಗಿ ವಿಮಾನ ಹಾರಾಟ ವಿಳಂಬವಾದರೆ ಅಥವಾ ರದ್ದಾದರೆ ಅಂತಹ ಸಂದರ್ಭಗಳಲ್ಲಿ ವಿಮಾನ ಯಾನ ಸಂಸ್ಥೆ ಪರಿಹಾರ ನೀಡಬೇಕಾಗಿ ಬರುವುದಿಲ್ಲ ಎಂದು ಸಿನ್ಹಾ ಸ್ಪಷ್ಟಪಡಿಸಿದರು. ವಿಮಾನಯಾನ ಸಂಸ್ಥೆಗಳೇ ಸಂಪೂರ್ಣವಾಗಿ ಹೊಣೆಗಾರರಾಗುವ ಕಾರಣಗಳಿಗೆ ಮಾತ್ರವೇ ಪ್ರಯಾಣಿಕರಿಗೆ ಪರಿಹಾರ ನೀಡುವುದು ಈ ಪ್ರಸ್ತಾವದ ಮೂಲ ಉದ್ದೇಶವಾಗಿದೆ ಎಂದವರು ಹೇಳಿದರು.
ಪ್ರಕೃತ ರದ್ದಾದ ಹಾರಾಟಕ್ಕೆ ವಿಮಾನ ಸಂಸ್ಥೆಗಳು ಡಿಜಿಸಿಎ ಪ್ರಕಾರ 3,000 ರೂ. ಅಥವಾ ತಲಾ ಟಿಕೆಟ್ಗೆ ಇಂಧನ ಮೇಲ್ ತೆರಿಗೆ ಸೇರಿಸಲಾದ ಮೂಲ ದರ – ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಹಾರವಾಗಿ ನೀಡುವ ಕ್ರಮವಿದೆ.
ಸರಕಾರದ ಈ ಚಿಂತನೆಯ ಹೊರತಾಗಿಯೂ ಅನೇಕ ವಿಮಾನ ಯಾನ ಸಂಸ್ಥೆಗಳು ವಿಮಾನ ಹಾರಾಟ ರದ್ದು ಅಥವಾ ವಿಳಂಬವಾಗುವ ಪ್ರಕರಣಗಳಿಗೆ ಸಂಪೂರ್ಣವಾಗಿ ತಾವೇ ಹೊಣೆಗಾರರಾಗುವುದಿಲ್ಲ; ಆದುದರಿಂದ ಭಾರೀ ದಂಡ ವಿಧಿಸುವ ನಿಯಮವನ್ನು ಪ್ರಯಾಣಿಕರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಎಂದು ವಾದಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ