ಯುಪಿ, ಮಹಾರಾಷ್ಟ್ರದ ಹಲವೆಡೆ ಇವಿಎಂ ಯಂತ್ರ ದೋಷ, ವ್ಯಾಪಕ ಆಕ್ರೋಶ
Team Udayavani, May 28, 2018, 2:58 PM IST
ನವದೆಹಲಿ:ಹತ್ತು ರಾಜ್ಯಗಳಲ್ಲಿ ಗುರುವಾರ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಾಗೂ ನಾಲ್ಕು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇವಿಎಂ ದೋಷದಿಂದಾಗಿ ಮತದಾನ ಸ್ಥಗಿತವಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ರಾಜಕೀಯವಾಗಿ ಬಹಳ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಉತ್ತರಪ್ರದೇಶದ ಕೈರಾನಾ, ಭಂದಾರಾ-ಗೋಂಡಿಯಾ ಲೋಕಸಭಾ, ಮಹಾರಾಷ್ಟ್ರದ ಪಾಲ್ಘಾರ್ ಹಾಗೂ ನಾಗಾಲ್ಯಾಂಡ್ ನ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಉತ್ತರಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದ ಆರ್ ಎಲ್ ಡಿ ಅಭ್ಯರ್ಥಿ ತಬ್ಸಮ್ ಹಸ್ಸನ್ ಅವರು ಸುಮಾರು 150 ಇವಿಎಂ ದೋಷಪೂರಿತವಾಗಿರುವುದಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಭಂದಾರಾ ಗೋಂಡಿಯಾ ಕ್ಷೇತ್ರದಲ್ಲಿ ಸುಮಾರು 35 ಬೂತ್ ಗಳಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಏತನ್ಮಧ್ಯೆ ವಿಪರೀತವಾದ ಬೇಸಿಗೆಯಿಂದಾಗಿ ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದಿರುವುದಾಗಿ ಚುನಾವಣಾ ಆಯೋಗ ಸಮಜಾಯಿಷಿ ನೀಡಿದೆ.