ದುಶ್ಚಟದ ದಾಸ್ಯದಿಂದ ಹೊರ ಬನ್ನಿ
Team Udayavani, Jun 1, 2018, 4:32 PM IST
ಚಿತ್ರದುರ್ಗ: ತಂಬಾಕು ಸೇವನೆ ಕ್ಯಾನ್ಸರ್ಗೆ ದಾರಿ ಮಾಡಿಕೊಡಲಿದೆ. ಆದ್ದರಿಂದ ಈ ದುಶ್ಚಟದಿಂದ ದೂರ ಉಳಿಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಸ್.ಬಿ. ವಸ್ತ್ರಮಠ ಕರೆ ನೀಡಿದರು.
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಇಲ್ಲಿನ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದು ದೇಹದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ದೇಶಕ್ಕೂ ಹಾನಿ ಮಾಡುತ್ತದೆ ಎಂದು ಎಚ್ಚರಿಸಿದರು.
ಗುಟ್ಕಾ, ತುಂಬಾಕು ಸೇರಿದಂತೆ ಮತ್ತಿತರ ಉತ್ಪನ್ನಗಳನ್ನು ಸೇವನೆ ಮಾಡುವುದು ಆಗಿಬಿಟ್ಟಿದೆ. ಇಂತಹ ಮಾದಕ ವಸ್ತುಗಳು ಆರಂಭದಲ್ಲಿ ರುಚಿ ಮತ್ತು ಸಂತೋಷ ನೀಡಿ ನಂತರ ಮಾನವನ ಅಂಗಾಂಗವನ್ನು ಆಕ್ರಮಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾತನಾಡಿ, ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ. ಪ್ರೌಢಾವಸ್ಥೆಯಲ್ಲಿ ಏನಾದರೂ ಮಾಡಬೇಕೆಂಬ ಹಂಬಲ ಯುವಕರಲ್ಲಿದೆ. ಪೋಷಕರ ಮಾರ್ಗದರ್ಶನ ದೊರೆಯದೇ ಇರುವುದರಿಂದ ತಪ್ಪು ದಾರಿ ಹಿಡಿಯುತ್ತಾರೆ. ಮಾದಕ ವಸ್ತುಗಳ ಸೇವನೆ ಮಾಡಿ ದಾಸರಾಗುವುದರ ಮೂಲಕ ಆರೋಗ್ಯ ಹಾಳು ಮಾಡಿಕೊಳ್ಳುವುಲ್ಲದೆ ದೇಶದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.
ಧೂಮಪಾನ, ಮದ್ಯಪಾನದಿಂದಾಗಿ ನರ ಹಾಗೂ ಮೆದುಳಿನ ಮೇಲೆ ಆಕ್ರಮಣ ಉಂಟಾಗಿ ದೇಹದ ಮೇಲಿನ ಹಿಡಿತ ತಪ್ಪುತ್ತದೆ. ಆರೋಗ್ಯ ಸರಿಯಾಗಿದ್ದರೆ ಏನಾದರೂ ಸಾಧನೆ ಮಾಡಬಹುದು, ಆರೋಗ್ಯವಿಲ್ಲದಿದ್ದರೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ಆರ್. ದಿಂಡಲಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಬಿ.ವಿ. ನೀರಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರೇಣುಪ್ರಸಾದ್ ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್, ಉಪಾಧ್ಯಕ್ಷ ಕೆ. ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಿವು ಯಾದವ್, ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಇದ್ದರು.
ಸಿರಿಗೆರೆಯ ಸಮುದಾಯ ಕೇಂದ್ರದ ದಂತ ವೈದ್ಯೆ ಡಾ| ಶೈಲಜಾ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಂಬಾಕು ಅರಿವು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಯುವಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ನಮ್ಮ ದೇಶದ ಒಳಗಡೆ ಕಳ್ಳ ಸಾಕಾಣಿಕೆಯಲ್ಲಿ ಸರಬರಾಜು ಮಾಡುವುದರ ಮೂಲಕ ಯುವಜನತೆಯ ದಾರಿ ತಪ್ಪಿಸಲಾಗುತ್ತಿದೆ. ದೇಶದ ಯುವಕರು ದುಶ್ಚಟಗಳಿಗೆ ಬಲಿಯಾಗಿ ದೇಶದ ಬಲ ಕುಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ಬಗ್ಗೆ ಎಚ್ಚರವಾಗಿರಬೇಕು.
ಎಸ್.ಬಿ. ವಸ್ತ್ರಮಠ, ಜಿಲ್ಲಾ ನ್ಯಾಯಾಧೀಶರು.