ಬಹುತ್ವ ಭಾರತದ ಆತ್ಮ : RSS ಕಾರ್ಯಕ್ರಮದಲ್ಲಿ ಪ್ರಣವ್‌ ಪ್ರತಿಪಾದನೆ


Team Udayavani, Jun 8, 2018, 6:50 AM IST

rss-pranab-7-6.jpg

ನಾಗ್ಪುರ: ಭಾರತದ ಆತ್ಮ ನೆಲೆಸಿರುವುದೇ ಬಹುತ್ವದಲ್ಲಿ ಎಂದು ವಿಶ್ಲೇಷಿಸಿರುವ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ದ್ವೇಷ ಮತ್ತು ಅಸಹನೆಯಿಂದ ಭಾರತದ ರಾಷ್ಟ್ರೀಯತೆ ನಾಶವಾಗಬಹುದು ಎಂಬ ಸೂಚ್ಯ ಎಚ್ಚರಿಕೆ ನೀಡಿದರು. ಇಲ್ಲಿನ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಗುರುವಾರ 3ನೇ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾಡಿದ ಅವರ ಭಾಷಣ ಇಡೀ ದೇಶದ ಕುತೂಹಲಕ್ಕೆ ಕಾರಣವಾಯಿತು.

“ದೇಶಪ್ರೇಮ, ರಾಷ್ಟ್ರೀಯತೆ ಮತ್ತು ಬಹುತ್ವದ ಕುರಿತು ತಮ್ಮ ಅಭಿಪ್ರಾಯ ವಿವರಿಸಿದ ಅವರು, ಆಧುನಿಕ ಭಾರತದ ತಮ್ಮ ಪರಿಕಲ್ಪನೆಯನ್ನು ಹರವಿಟ್ಟರು. ಭಾರತದ ಬಹುತ್ವವನ್ನು ಸಂಭ್ರಮಿಸಬೇಕು’ ಎಂದು ಹೇಳಿದರಲ್ಲದೆ, ರಾಷ್ಟ್ರೀಯತೆ ಎಲ್ಲವನ್ನೂ ಒಳಗೊಳ್ಳಬೇಕು. ವಿಶ್ವವೇ ಕುಟುಂಬ ಎಂಬ ಪರಿಕಲ್ಪನೆಯಂತೆ ರಾಷ್ಟ್ರೀಯತೆಯಲ್ಲಿ ವಿಶ್ವಾತ್ಮಕ ಮನೋಭಾವ ಅಡಕವಾಗಿರಬೇಕು. ರಾಷ್ಟ್ರೀಯತೆ ಒಂದು ಭಾಷೆ ಒಂದು ಧರ್ಮಕ್ಕೆ ಸೀಮಿತವಾಗಬಾರದು ಎಂದು ಹೇಳಿದರು.

ಆರಂಭದಲ್ಲಿ ಭಾರತ ಮುಕ್ತ ಸಮಾಜ ಹೊಂದಿತ್ತು. ಸಿಲ್ಕ್ ರೂಟ್‌ ಸಹಿತ ಎಲ್ಲ ಪ್ರಮುಖ ದಾರಿಗಳ ಮೂಲಕ 
ದೇಶಕ್ಕೆ ಸಂಪರ್ಕವಿತ್ತು. ವ್ಯಾಪಾರಿಗಳು ಮತ್ತು ಹಲವಾರು ಮಂದಿ ವಿದೇಶಿ ದಾಳಿಕೋರರು ಇಲ್ಲಿಗೆ ಆಗಮಿಸಿದ್ದರು. ಶತಮಾನಗಳ ಹಿಂದೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು, ವಿವಿಧ ರೀತಿಯ ಆಡಳಿತ ವ್ಯವಸ್ಥೆ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದ್ದ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಮಾಜಿ ರಾಷ್ಟ್ರಪತಿ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಹಿಂಸೆಗೆ ವಿದಾಯ ಹೇಳಿ ಎಲ್ಲರನ್ನೂ ಒಳಗೊಳ್ಳುವಂಥ ವ್ಯವಸ್ಥೆಯತ್ತ ಹೊರಳಿಕೊಳ್ಳಬೇಕಾಗಿದೆ. ಎಲ್ಲ ರೀತಿಯ ಹಿಂಸೆ ಮತ್ತು ಭೀತಿಯ ವಾತಾವರಣದಿಂದ ನಮ್ಮ ಸಾರ್ವಜನಿಕ ವ್ಯವಸ್ಥೆಯನ್ನು ದೂರ ಇರಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ಮಾಡಿದರು.

ದ್ವೇಷದ ಮನೋಭಾವನೆ ರಾಷ್ಟ್ರೀಯತೆಯ ನಾಶಕ್ಕೆ ಕಾರಣವಾಗುತ್ತದೆ. ಅಸಹಿಷ್ಣುತೆ ನಮ್ಮ ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತದೆ. ಹಲವು ರಾಜವಂಶಗಳು, ಪ್ರಭಾವಶಾಲಿಯಾಗಿದ್ದ ರಾಜಕುಟುಂಬಗಳು ಭಾರತದ ಉತ್ತರ ಮತ್ತು ದಕ್ಷಿಣ ಭಾಗವನ್ನು ಆಳಿದ್ದವು. ನಮ್ಮ ದೇಶದ ರಾಷ್ಟ್ರೀಯ ಏಕತೆ ವಿಚಾರ ಹಲವು ರೀತಿಯ ಸಮೀಕರಣ ಮತ್ತು ಸಮ್ಮಿಲನದ ಬಳಿಕ ರೂಪುಗೊಂಡಿದೆ. ಹಲವು ರೀತಿಯ ಸಂಸ್ಕೃತಿಗಳು ಮತ್ತು ನಂಬಿಕೆ ನಮ್ಮ ವ್ಯವಸ್ಥೆಯ ವಿಶೇಷವೇ ಆಗಿದೆ. ರಾಷ್ಟ್ರೀಯತೆಯ ಬಗ್ಗೆ ದೇಶದ ಮೊತ್ತ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಬರೆದ “ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ ಉಲ್ಲೇಖವಾಗಿರುವ ಅಂಶವನ್ನು ಮಾಜಿ ರಾಷ್ಟ್ರಪತಿ ಉಲ್ಲೇಖೀಸಿದರು. ‘ಹಿಂದೂ, ಮುಸ್ಲಿಂ, ಸಿಕ್ಖ್ ಮತ್ತು ಭಾರತದ ಇತರ ಯಾವುದೇ ಗುಂಪಿಗೆ ಸೇರ್ಪಡೆಗೊಂಡವನು ತಾನು ಎಂಬ ಭಾವನೆಯಿಂದ ಹೊರಗೆ ಬಂದಾಗ ಮಾತ್ರ ರಾಷ್ಟ್ರೀಯತೆ ಎಂಬ ವಿಚಾರ ನಮ್ಮೆಲ್ಲರಲ್ಲಿ ಮೈಗೂಡುತ್ತದೆ’ ಎಂದು ಬರೆದಿದ್ದರು ಎಂದು ಪ್ರಸ್ತಾವಿಸಿದರು.

ಉತ್ತಮ ವಿವಿಗಳು: 1,800 ವರ್ಷಗಳ ಕಾಲ ತಕ್ಷಶಿಲಾ, ನಲಂದಾ ಸೇರಿದಂತೆ ವಿಶ್ವಮಾನ್ಯ ವಿವಿಗಳು ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಮತ್ತು ಸಂಶೋಧಕರನ್ನು ಆಹ್ವಾನಿಸುತ್ತಿದ್ದವು. ನಮ್ಮ ದೇಶದ ರಾಷ್ಟ್ರೀಯತೆ ಎಂಬ ವಿಚಾರ ಏಕತೆಯಿಂದ ಉಂಟಾಗಿದೆ. ಶತಮಾನಗಳಿಂದಲೂ ಕೂಡ ವಸುಧೈವ ಕುಟುಂಬಕಂ ಎಂಬ ತತ್ವದಲ್ಲಿ ನಂಬಿಕೆಯನ್ನು ಇರಿಸಿಕೊಂಡು ಬಂದಿದ್ದೇವೆ.

600 ವರ್ಷ ಮುಸ್ಲಿಂ ಆಡಳಿತ: ದೇಶದ ಇತಿಹಾಸದತ್ತ ಗಮನ ಹರಿಸಿದ ಮುಖರ್ಜಿ, ಕ್ರಿಸ್ತಪೂರ್ವ ಆರನೇ ಶತಮಾನದಿಂದ 600 ವರ್ಷಗಳ ಕಾಲ ಮುಸ್ಲಿಂ ಅರಸರ ಆಳ್ವಿಕೆ ದೇಶದಲ್ಲಿತ್ತು. ಬಳಿಕ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತದ ನೇತೃತ್ವ ವಹಿಸಿಕೊಂಡಿತು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ದೇಶದ ಆಡಳಿತ ರಾಣಿಯ ನೇತೃತ್ವಕ್ಕೆ ಸಿಕ್ಕಿತು. ಗಮನದಲ್ಲಿರಿಸಿಕೊಳ್ಳಬೇಕಾದ ಅಂಶವೇನೆಂದರೆ ಹಲವಾರು ಮಂದಿ ಆಡಳಿತಗಾರರು ಆಡಳಿತ ನಡೆಸಿದರೂ 5 ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ನಮ್ಮ ನಾಗರಿಕತೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು ಎಂದರು.

ಹಲವು ಧರ್ಮಗಳು: ತ್ರಿಪುರಾದಿಂದ ದ್ವಾರಕೆಯವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಹಲವಾರು ಧರ್ಮಗಳಿವೆ ಎಂದು ಹೇಳುವುದೇ ರೋಮಾಂಚನ. ಲೆಕ್ಕವಿಲ್ಲದಷ್ಟು ಧರ್ಮಗಳು, ಜಾತಿಗಳು ಒಂದೇ ಸಂವಿಧಾನದ ಅಡಿಯಲ್ಲಿವೆ ಎಂದು ಹೇಳಿಕೊಳ್ಳುವುದೇ ಹೆಗ್ಗಳಿಕೆ. 122 ಭಾಷೆಗಳು, 1,600 ನುಡಿಕಟ್ಟು, 7 ಪ್ರಮುಖ ಧರ್ಮಗಳು, ಮೂರು ಪ್ರಮುಖ ಜನಾಂಗಗಳು ಒಂದೇ ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿಯೇ ಭಾರತೀಯ ಎಂದು ಕರೆಯಿಸಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ವಿವಿಧ ಅಭಿಪ್ರಾಯಗಳು ಇರುತ್ತವೆ. ಅದನ್ನು ನಿರಾಕರಿಸಲಾಗದು ಎಂದಿದ್ದಾರೆ.

ಅರ್ಥ ವ್ಯವಸ್ಥೆ ಬೆಳೆಯುತ್ತಿದೆ: ದೇಶದ ಅರ್ಥ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಜಗತ್ತಿನ ಸಂತೋಷದ ರ್‍ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿಲ್ಲ ಎಂದರು. ಅದನ್ನು ಪುಷ್ಟೀಕರಿಸಲು ಜನರ ಸಂತೋಷವು ರಾಜನ ಸಂತೋಷದಲ್ಲಿ ಒಳಗೊಂಡಿದೆ’ ಎಂಬ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಗೊಂಡ ಶ್ಲೋಕವನ್ನು ಪ್ರಸ್ತಾವಿಸಿದರು. ಒಂದು ದೇಶದಲ್ಲಿ ಜನರೇ ಎಲ್ಲಾ ಚಟುವಟಿಕೆಗಳ ಕೇಂದ್ರವಾಗಿರುತ್ತಾರೆ. ಅವರನ್ನು ವಿಭಜಿಸಲು ಯಾವುದೇ ಕ್ರಮ ಕೈಗೊಳ್ಳಬಾರದು. ದೇಶದ ಮುಖ್ಯ ಗುರಿ ಜನರನ್ನು ಒಟ್ಟು ಸೇರಿಸಿಕೊಳ್ಳುವುದು ಮತ್ತು ಬಡತನ, ತಾರತಮ್ಯ, ಕಾಯಿಲೆಗಳ ವಿರುದ್ಧ ಹೋರಾಟ ನಡೆಸುವುದಾಗಿರಬೇಕು ಎಂದು ಪ್ರಣವ್‌ ಮುರ್ಖಜಿ ಹೇಳಿದರು. ಜೈಹಿಂದ್‌, ವಂದೇ ಮಾತರಂ ಎನ್ನುವ ಮೂಲಕ ಭಾಷಣ ಕೊನೆಗೊಳಿಸಿದರು.

ಭಾರತ ಮಾತೆಯ ಶ್ರೇಷ್ಠ ಪುತ್ರ: ಐದು ದಶಕಗಳ ರಾಜಕೀಯ ಜೀವನದಲ್ಲಿ ಆರೆಸ್ಸೆಸ್‌ ನಿಲುವಿಗೆ ವ್ಯತಿರಿಕ್ತವಾದ ಧೋರಣೆ ಹೊಂದಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಆರ್‌ಎಸ್‌ಎಸ್‌ನ ಸಂಸ್ಥಾಪಕ ಮತ್ತು ಮೊದಲ ಸರಸಂಘ ಚಾಲಕ ಡಾ| ಕೇಶವ ಬಲಿರಾಮ್‌ ಹೆಡಗೇವಾರ್‌ ಅವರನ್ನು ‘ಭಾರತ ಮಾತೆಯ ಶ್ರೇಷ್ಠ ಪುತ್ರ’ ಎಂದು ವ್ಯಾಖ್ಯಾನಿಸಿದರು.

ಹೆಡಗೇವಾರ್‌ ಜನಿಸಿದ ನಿವಾಸಕ್ಕೆ ಭೇಟಿ ನೀಡಿದ ಮುಖರ್ಜಿ, ‘ಭಾರತ ಮಾತೆಯ ಶ್ರೇಷ್ಠ ಸುಪುತ್ರನಿಗೆ ಗೌರವ ಮತ್ತು ಅಂತಿಮ ನಮನ ಸಲ್ಲಿಸಲು ನಾನು ಇಲ್ಲಿಗೆ ಇವತ್ತು ಆಗಮಿಸಿದ್ದೇನೆ’ ಎಂದು ಸಂದರ್ಶಕರ ಪುಸ್ತಕದಲ್ಲಿ ಬರೆದರು. ಆರೆಸೆಸ್‌ನ ಹಾಲಿ ಸರಸಂಘ ಸಂಚಾಲಕ ಮೋಹನ್‌ ಭಾಗವತ್‌ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಪ್ರಣವ್‌ರ ಪೂರ್ವ ನಿಗದಿತ ಕಾರ್ಯಕ್ರಮ ಪಟ್ಟಿಯಲ್ಲಿ ಈ ಭೇಟಿ ಸೇರ್ಪಡೆಯಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಮುಖರ್ಜಿ ಜತೆಗೆ ನೇತಾಜಿ ಕುಟುಂಬ ಸದಸ್ಯರೂ ಇದ್ದರು. ಅಗಲ ಕಿರಿದಾದ ದಾರಿಯಲ್ಲಿ ಪ್ರಣವ್‌ ಮುಖರ್ಜಿ ನಡೆದುಕೊಂಡು ಹೋದರು. ಪಾದರಕ್ಷೆಗಳನ್ನು ಕಳಚಿ ಹೆಡಗೇವಾರ್‌ ಅವರ ನಿವಾಸವನ್ನು ಮುಖರ್ಜಿ  ಪ್ರವೇಶಿಸಿದರು.

ಪ್ರಣವ್‌ ಉತ್ತಮ ಭಾಷಣವನ್ನೇ ಮಾಡಿದ್ದಾರೆ. ದೇಶ ಮೊದಲು ಎಂಬ ಸಂದೇಶ ನೀಡಿದ್ದಾರೆ. ಜನರ ಅಭ್ಯುದಯವೇ ಪ್ರಜಾಪ್ರಭುತ್ವದ ಆದ್ಯತೆ. ಅದು ಭಾರತದ ರಾಷ್ಟ್ರೀಯತೆ ಎನ್ನುವುದನ್ನು ಅವರು ವಿವರಿಸಿದ್ದಾರೆ.
– ರಾಮ್‌ ಮಾಧವ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಕಾಂಗ್ರೆಸ್‌ನಿಂದ ಮೂರು ಬಾರಿ ಸಂಘಟನೆ ನಿಷೇಧಕ್ಕೆ ಒಳಗಾಗಿತ್ತು ಎಂಬ ಅಂಶವನ್ನು ಪ್ರಣವ್‌ ನೆನಪಿಸಿಕೊಡಬಹುದಿತ್ತು. ಗಾಂಧಿಯನ್ನು ಹತ್ಯೆ ಮಾಡಿದ್ದಕ್ಕೆ ಸರ್ದಾರ್‌ ಪಟೇಲರ ಅವಧಿಯಲ್ಲಿ ಮೊದಲ ಬಾರಿಗೆ ಅದು ನಿಷೇಧಕ್ಕೆ ಒಳಗಾಗಿತ್ತು. ಗಾಂಧೀಜಿ ಹತ್ಯೆಗೆ ಆರ್‌ಎಸ್‌ಎಸ್‌  ಸಿಹಿ ಹಂಚಿತ್ತು. 
– ಸೀತಾರಾಮ್‌ ಯೆಚೂರಿ, ಸಿಪಿಎಂ  ನಾಯಕ

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

Odisha; ಒಂದೇ ವಿಧಾನಸಭಾ ಕ್ಷೇತ್ರಕ್ಕೆ 3 ಪಕ್ಷಗಳಿಂದ ಒಂದೇ ಕುಟುಂಬದ ಅಭ್ಯರ್ಥಿಗಳು!

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.