ಮೆಲುಕು : ಜರ್ನಿ ಒಂಥರಾ ಚೆನ್ನಾಗಿದೆ


Team Udayavani, Jun 9, 2018, 12:30 AM IST

vv-10.jpg

ನನ್ನ ‘ತರಲೆ’, “ವ್ಯಂಗ್ಯ’ ಯಾರಿಗೆ ಅರ್ಥವಾಗುತ್ತದೋ ಅವರು ನನ್ನನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಯಾರಿಗೆ ಇವ್ಯಾವುದೂ ಅರ್ಥವಾಗುವುದಿಲ್ಲವೋ ಅವರು ಗೊಣಗಾಡುತ್ತಾರೆ. ಒಮ್ಮೊಮ್ಮೆ ತುಂಬಾ ಸೀರಿಯಸ್‌ ಆದದ್ದು ಏನನ್ನೋ ಬರೆದು ಗೊಣಗಾಡುವವರನ್ನು ಕಸಿವಿಸಿಗೊಳಿಸುವುದೂ ಹಾಗೂ ತುಂಬಾ ತರಲೆ ಪದ್ಯಗಳನ್ನು ಬರೆದು ಸೀರಿಯಸ್‌ ವ್ಯಕ್ತಿಗಳನ್ನು ರೊಚ್ಚಿಗೆಬ್ಬಿಸುವುದು ನನಗೇ ಗೊತ್ತಿಲ್ಲದೆ ನಡೆಯುತ್ತಿರುತ್ತದೆ….

ನಿರ್ದೇಶನದಲ್ಲಿ, ಬರವಣಿಗೆಯಲ್ಲಿ ನನಗೆ ಯೋಗ “ಪಾಗ’ ಇದೆ ಅಂತಾರೆ. ಆದರೆ ನಾನು ಇದಾವುದನ್ನೂ ಗಿಟ್ಟಿಸಿಕೊಳ್ಳಬೇಕು ಅಂದುಕೊಂಡು ಬಂದವನಲ್ಲ. ಇವತ್ತು ನಾನು ನಿರ್ದೇಶಕ, ಚಿತ್ರ ಸಾಹಿತಿ, ನಿರ್ಮಾಪಕ ಇತ್ಯಾದಿಗಳು ಸೇರಿ ಮಲ್ಟಿಪಲ್‌ ಫ್ರಾಕ್ಚರ್‌ ಆಗಿ ಆರೋಗ್ಯದಿಂದಿರುವವನು ಎನ್ನಬಹುದು. ಇವತ್ತು ನನ್ನನ್ನು ಬರಹಗಾರ ಅಂತಾರೆ. ಆದರೆ ಅಂದು ನಾನು ಶಾಲೆಗೆ ಹೋಗುವುದೇ ನನ್ನ ಮಟ್ಟಿಗೆ ದೊಡ್ಡ ಸಾಹಸವಾಗಿತ್ತು. ಮನೆಯಿಂದ ಹೊರಟರೆ ದಾರಿಯಲ್ಲಿ ಸಿಗುವವರನ್ನೆಲ್ಲಾ ಮಾತಾಡಿಸಿ, ಕೀಟಲೆಗಳನ್ನು ಮಾಡಿ ಶಾಲೆ ತಲುಪುವಷ್ಟರ ಹೊತ್ತಿಗೆ ಪ್ರೇಯರ್‌ ಮುಗಿದಿರುತ್ತಿತ್ತು.  ನನ್ನನ್ನು ಬೇಗ ಶಾಲೆ ತಲುಪಿಸಲು ಅಣ್ಣ ಅಕ್ಕಂದಿರೆಲ್ಲಾ ಸರ್ಕಸ್‌ ಮಾಡುತ್ತಿದ್ದರು. ನಮ್ಮ ತಂದೆ ತಿಳುವಳ್ಳಿಯ ರಾಮಚಂದ್ರ ಭಟ್‌ ಅಂತ. ಅದೇ ಊರಿನ ಬಸ್‌ಸ್ಟ್ಯಾಂಡ್‌ ಬಳಿ ಒಂದು ಹೊಟೇಲ್‌ ನಡೆಸುತ್ತಿದ್ದರು. ನಮ್ಮದು ಏಳು ಮಕ್ಕಳಿದ್ದ ದೊಡ್ಡ ಕುಟುಂಬ, ನಾನೇ ಕೊನೆಯವನು. ಎಲ್ಲರಿಗೂ ನನ್ನ ಮೇಲೆ ಮುದ್ದು. ಅಣ್ಣ-ಅಕ್ಕಂದಿರೆಲ್ಲಾ ಪಾಳಿ ಮೇಲೆ ನನ್ನನ್ನು ಎತ್ತಿಕೊಂಡು ಓಡಾಡುತ್ತಿದ್ದರು.. ಒಂದು ಮತ್ತು ಎರಡನೇ ಕ್ಲಾಸಿನ ಟೀಚರನ್ನು ನಾವು “ಅಕ್ಕೋರು’ ಎನ್ನುತ್ತಿದ್ದೆವು. ಅವರು ಬಂದು “ರಾಜನನ್ನು ಶಾಲೆಗೆ ಕಳುಹಿಸಬೇಡಿ. ಮೈಂಟೇನ್‌ ಮಾಡಲು ಆಗೋದಿಲ್ಲ’ ಎಂದು ಅಳುತ್ತಿದ್ದರು. ನನ್ನ ಅಮ್ಮ ಗೋಳು ಕೇಳುತ್ತಾ ಕೇಳುತ್ತಾ “ಅವನನ್ನು ನಾವು ಮನೆಯಲ್ಲೂ ಇಟ್ಟು ಕೊಳ್ಳಲು ಆಗುವುದಿಲ್ಲ’ ಎಂದು ಟೀಚರ್‌ ಜೊತೆ ಅಳಲು ಶುರು ಮಾಡುತ್ತಿದ್ದರು.

ನಮ್ಮಪ್ಪ ಬಹಳ ಶಿಸ್ತಿನ ಮನುಷ್ಯ, ಮುಂದಾಳು, ವೇದಾಂತಿ ಹಾಗೂ ನನ್ನನ್ನು ಹಿಡಿದು ಬಾರಿಸುವುದರಲ್ಲಿ ಪರಿಣಿತರು. ಹೆಚ್ಚು ತರಲೆ ಮಾಡಿದಾಗ ಮನೆಯ ಹಿಂದಿನ ಮರಕ್ಕೆ ಕಟ್ಟಿ ಹಾಕುತ್ತಿದ್ದರು ಮತ್ತು ಹಾದಿ ಬೀದಿಯಲ್ಲಿ ಹೋಗಿ  ಬರುವವರಿಗೆಲ್ಲಾ, “ನನ್ನ ಮಗನಿಗೆ ನಾಲ್ಕು ಬಾರಿಸಿ’ ಎನ್ನುತ್ತಿದ್ದರು. ದಾರಿಹೋಕರು “ಅವನೇನೂ ತಪ್ಪು ಮಾಡಿಲ್ಲವಲ್ಲಾ?’ ಎಂದ‌ರೆ “ಇವತ್ತಿಲ್ಲಾ ನಾಳೆ ಮಾಡೇ ಮಾಡ್ತಾನೆ. ಯಾವುದಕ್ಕೂ ಇವತ್ತೇ ಬಾರಿಸಿ’ ಎನ್ನುತ್ತಿದ್ದರು. ಒಟ್ಟು ಹೆಂಗೋ ಚೆನ್ನಾಗಿ ಓದುತ್ತಿದ್ದೆ. ಆದರೂ ಕ್ಲಾಸ್‌ ರೂಂ ಅಂದರೆ ಅಲರ್ಜಿ. ನನ್ನಲ್ಲಿ  ವಯಸ್ಸಿಗೆ ಮೀರಿದ್ದು ಏನೋ ಇದೆ ಎನಿಸುತ್ತಿತ್ತು, ಆದರೆ ಇರಲಿಲ್ಲ. 

ಇದೆಲ್ಲದರ ನಡುವೆ ನಮ್ಮ ಕುಟುಂಬದಲ್ಲೊಂದು ಅವಘಡ ನಡೆಯಿತು. ನನ್ನ ತಂದೆ, ಒಬ್ಬ ಅಕ್ಕ ಮತ್ತು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹೆಣ್ಣುಮಗಳು ದೋಣಿ ದುರಂತದಲ್ಲಿ ಮೃತಪಟ್ಟರು. ನನ್ನ ಜೀವನದ ರೋಲ್‌ ಮಾಡೆಲ್‌ ಅಪ್ಪ ತೀರಿಕೊಂಡಾಗ ನಾನು ಏಳನೇ ಕ್ಲಾಸ್‌. ಆದಾದ ಮೇಲೆ ದೊಡ್ಡಣ್ಣ ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನೆಲ್ಲಾ ಬೆಳೆಸಿದರು. ಬಸ್ಟ್ಯಾಂಡ್‌ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಇರುತ್ತಿ¨ªೆ. ಮನೆಯಲ್ಲಿ ನಾನು ಡಿಪ್ಲೊಮೋ ಮಾಡಬೇಕು ಎನ್ನುವುದು ಎಲ್ಲರ ಆಸೆ. ಆದರೆ ನಾನು ಕಾಮರ್ಸ್‌ ತೆಗೆದುಕೊಂಡಿದ್ದವನು, ಪದವಿಯಲ್ಲಿ ಆರ್ಟ್ಸ್ ತೆಗೆದು ಕೊಂಡೆ, ಆಮೇಲೆ ಎಂ.ಎ ಮಾಡುತ್ತೇನೆ ಎಂದು ಧಾರವಾಡಕ್ಕೆ ಹೋದೆ. ಆದರೆ ಇಂಟರ್‌ ಯೂನಿವರ್ಸಿಟಿ ಕೋಟಾದಲ್ಲಿ ನನಗೆ ಮೈಸೂರು ವಿವಿಯಲ್ಲಿ ಕನ್ನಡ ಎಂ.ಎಗೆ ಸೀಟು ಸಿಕ್ಕಿತು. ಮೈಸೂರಿನಲ್ಲಿ ಮತ್ತದೇ ಸಮಸ್ಯೆ ನನಗೆ. ನಾಲ್ಕು ಗೋಡೆಯ ಮಧ್ಯೆ ಕೂರಲು ಅಲರ್ಜಿ. ನನ್ನ ಜಿಲ್ಲೆಯಲ್ಲಿದ್ದ ಅಲ್ಪಪ್ರಾಣ ಮಹಾಪ್ರಾಣಗಳೆಲ್ಲಾ ಲೆಕ್ಚರರ್ಸುಗಳ ಬಾಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದುದನ್ನು ನೋಡಿ ನನ್ನಿಂದ ಸಹಿಸಲಾಗುತ್ತಿರಲಿಲ್ಲ. ಕೇವಲ ನಾಲ್ಕು ತಿಂಗಳಿಗೆ ಎಂ.ಎ ಕನ್ನಡಕ್ಕೆ ಎಳ್ಳು ನೀರು ಬಿಟ್ಟು, ಎಲ್‌.ಎಲ್‌.ಬಿ ಸೇರಿಕೊಂಡೆ. ಅದನ್ನೂ ನಾಲ್ಕೈದು ತಿಂಗಳಿಗೆ ಬಿಟ್ಟುಬಿಟ್ಟೆ. 

ಸಾಹಿತ್ಯದ ಬಗ್ಗೆ ಒಂದಷ್ಟು ಚೆನ್ನಾಗಿಯೇ ಗೊತ್ತಿತ್ತು. ಆಗ ನನಗೆ ವಯಸ್ಸು 22, ಇನ್ನೂರು ವಯೋಸಹಜ ಕನೂಶನ್ನುಗಳಿದ್ದವು. ಹೇಳ್ಳೋರು ಕೇಳ್ಳೋರು ಯಾರೂ ಇರಲಿಲ್ಲ, ಇದ್ದರೂ ಅವರ ಮಾತು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ.. ಈ ಹುಂಬತನದಲ್ಲೇ ಜೀವನ ನಡೆಯುತ್ತಿದ್ದಾಗ ಮೈಸೂರಿನಲ್ಲಿದ್ದ ನನ್ನ ಗೆಳೆಯನೊಬ್ಬ ಸುಮಾರು ವರ್ಲ್ಡ್ ಕ್ಲಾಸಿಕ್‌ ಸಿನಿಮಾಗಳನ್ನು ತೋರಿಸಿದ. ಪ್ರಾಯಶಃ ಅಲ್ಲಿಂದ ಸಿನಿಮಾಗಳೆಡೆಗೆ ನನ್ನ ಆಸಕ್ತಿ, ಕುತೂಹಲ ಇತ್ಯಾದಿ ಮೂಡಿದವು ಎನ್ನಬಹುದು. ಇದರ ಪರಿಣಾಮ ಸಿನಿಮಾಟೋಗ್ರಾಫ‌ರ್‌ ಆಗಬೇಕು ಅಂತಲೂ, ಆ ಕೆಲಸ ತುಂಬಾ ಕುತೂಹಲಕಾರಿ ಎಂತಲೂ ಅನ್ನಿಸುತ್ತಿತ್ತು. ಡೈರೆಕ್ಟರ್‌ಗಿಂತಲೂ ಕ್ಯಾಮೆರಾಮನ್‌ ಹೆಚ್ಚು ಬುದ್ಧಿವಂತ ಎಂದೆಲ್ಲಾ ನನ್ನದೇ ಏನೇನೋ ಕಲ್ಪನೆಗಳಿದ್ದವು. ಆಗ ನನಗೆ ಮೈಸೂರಿನಲ್ಲಿ ಉಪೇಂದ್ರ ಸಿಕ್ಕಿದ್ರು, ಅವರತ್ರ ಕೆಲಸ ಕೇಳಿಕೊಂಡು ಬೆಂಗಳೂರಿಗೆ ಬಂದುಬಿಟ್ಟೆ.  ಸಾಹಿತ್ಯದ ಬಗ್ಗೆ ಯಾರಾದರೂ ಮಾತಾಡಿದರೆ ಅವರ ಬಳಿ ಗಂಟೆಗಟ್ಟಲೆ ಮಾತಾಡುತ್ತಿದ್ದೆ. ಇದನ್ನು ಕೇಳಿಸಿಕೊಂಡವರು, ‘ಇಷ್ಟೆಲ್ಲಾ ಓದಿದ ಮೇಲೆ ನೀನು ನಿರ್ದೇಶಕನಾಗು. ಸಿನಿಮಾಟೋಗ್ರಾಫ‌ರ್‌ ಯಾಕೆ ಆಗುತ್ತಿಯಾ?’ ಎಂದು ಕೇಳುತ್ತಿದ್ದರು. ಅಷ್ಟೆಲ್ಲಾ ಓದಿದ್ದೇನಾ? ಎಂದು ಗೊಂದಲವಾಗುತ್ತಿತ್ತು. ಮೊದಲಿಗೆ ಕೆಲಸ ಅಂತ ಕೆಲಸ ಸಿಕ್ಕಿದ್ದು ಸುನೀಲ್‌ ಕುಮಾರ್‌ ದೇಸಾಯಿವರ ಜತೆ ಸಹಾಯಕ ನಿರ್ದೇಶಕನಾಗಿ. ಆಮೇಲೆ ಗಿರೀಶ್‌ಕಾಸರವಳ್ಳಿಯವರ ಬಳಿ ಸೇರಿದೆ. ನಾನು ಎಲ್ಲಿ ಕೆಲಸ ಕೇಳಿದರೂ ಅಲ್ಲಿ ಕೆಲಸ ಸಿಗುತ್ತಿತ್ತು. ಅದೇಕೆಂದು ನನಗೆ ಇದುವರೆಗೂ ಗೊತ್ತಿಲ್ಲ. ನಂತರ ರವಿಚಂದ್ರನ್‌, ಬಿ.ಸುರೇಶ್‌, ಪ್ರಕಾಶ್‌ ಬೆಳವಾಡಿ ಅವರ ಹತ್ತಿರ ಮತ್ತು ಕೆಲವಾರು ಕಾರ್ಪೊರೇಟ… ಕಂಪನಿಗಳ ಜತೆ ಜಾಹೀರಾತು- ಡಾಕ್ಯೂಮೆಂಟರಿಗಳು, ದೂರದರ್ಶನದ ಕೆಲ ಧಾರಾವಾಹಿಗಳಲ್ಲಿ ವಾರಕ್ಕೆ ಒಂದೆರಡು ದಿನ ಕೆಲಸ ಮಾಡಿಕೊಂಡು ಇರುತ್ತಿದ್ದೆ. ಮಧ್ಯೆ ಮಧ್ಯೆ ಸೇಲ್ಸ್‌ ರೆಪ್ರಸೆಂಟೇಟಿವ್‌, ಗಿಫ್ಟ್ ಆರ್ಟಿಕಲ್‌ ಮಾರಾಟ ಇತ್ಯಾದಿ ಉಪವೃತ್ತಿಗಳೂ ಇದ್ದದ್ದುಂಟು. ಅವುಗಳನ್ನೆಲ್ಲಾ “ಕಷ್ಟಕಾರ್ಪಣ್ಯಗಳು’ ಎನ್ನುವುದು ನನಗೆ ಸುತಾರಾಂ ಇಷ್ಟವಾಗುವುದಿಲ್ಲ. ಯಾರಾದರೂ “ನಾನು ಚಿಕ್ಕವನಿದ್ದಾಗ ತಿನ್ನಲು ಅನ್ನ ಇರಲಿಲ್ಲ. ಉಡಲು ಬಟ್ಟೆ ಇರಲಿಲ್ಲ. ಅಪ್ಪ ಸರಿ ಇರಲಿಲ್ಲ..’ ಇತ್ಯಾದಿ ವರ್ಣನೆ ಮಾಡಿದರೆ, ನನಗೆ ಆ ತರಹದ ಯಾವುದೇ ಗೂದೆ ರೋಗಗಳು ಸಂಭವಿಸಿಲ್ಲ. 

ಓಂಕಾರ್‌ ಸ್ಟುಡಿಯೋಸ್‌ನ ಮಾಲೀಕರು ದೂರದರ್ಶನಕ್ಕೆ ಒಂದು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದರು. ಒಂದು ದಿನ ಎಪಿಸೋಡ್‌ ಡೈರೆಕ್ಟರ್‌ ಬರದ ಕಾರಣ, ಆ ಹುಡುಗನ ಕೈಯಲ್ಲಿ ಮಾಡಿಸಿಬಿಡಿ ಅಂದರು. ಇದು ನನಗೆ ಅರಗಿಸಿಕೊಳ್ಳದ ವಿಷಯವಾಗಿತ್ತು. ಆ ಎಪಿಸೋಡ್ನಲ್ಲಿ  ವೈಶಾಲಿ ಕಾಸರವಳ್ಳಿ ನಟಿಸುತ್ತಿದ್ದರು, ನನಗೆ ತೋಚಿದಂಗೆ ಮಾಡಿ ಮುಗಿಸಿದೆ. ಅದು ನನ್ನ ಮೊದಲ ನಿರ್ದೇಶನ. ಈ ಮಧ್ಯೆ ಬಿ.ಸುರೇಶ್‌ “ಚಕ್ರ’ ಸೀರಿಯಲ್‌ ಕೊಡಿಸಿದ್ರು. ಸಾಧನೆ ಸೀರಿಯಲ್ಗೆ ಕೆಲಸ ಮಾಡಿದೆ. ತಿರುವು ಅಂತ ಸಿಕ್ಕಿದ್ದೇ ಇಲ್ಲಿ.  ಎಲ್ಲೋ ಜೋಗಪ್ಪ ನಿನ್ನ ಅರಮನೆ ಅನ್ನೋ ಸೀರಿಯಲ್ಗೆ ಕರಿಸುಬ್ಬು ನಟಿಸಲು ಬಂದಿದ್ದರು. ಅವರ ಮೇಲೆ ನಾನು ಆವತ್ತು ಕೂಗಾಡಿದ್ದೆ. ಈ ರೀತಿ ಎಗರಾಡಿದ್ದೇ, ಅವರಿಗೆ ಇಷ್ಟವಾಗಿ ನನಗೆ ಸಿನಿಮಾ ಮಾಡುವ ಆಫ‌ರ್‌ ನೀಡಿದರು. ಆಗ ಆಗಿದ್ದೇ “ಮಣಿ’ ಚಿತ್ರ. 

ಮಣಿ ಸಿನಿಮಾದ ಎಡಿಟಿಂಗ್‌ ನಡೆಯುತ್ತಿತ್ತು, ಆಗ ರಾಜೇಶ್‌ ರಾಮನಾಥ್‌ ಸಿನಿಮಾವನ್ನು ಸುದೀಪ್‌ಗೆ ತೋರಿಸಿದರು. ಅವರು ತಕ್ಷಣವೇ “ರಂಗ ಎಸ್‌ಎಸ್‌ಎಲ್ಸಿ’ ಸಿನಿಮಾ ನೀಡಿದರು. ಮಣಿ ವಿಮರ್ಶಕರನ್ನು ಸೆಳೆದು, ಕಮರ್ಷಿಯಲ್‌ ಆಗಿ ಫೇಲ್‌ ಆಯಿತು. ರಂಗ ತಕ್ಕ ಮಟ್ಟಿಗೆ ಓಡಿತಾದರೂ ಕ್ರಿಟಿಕಲಿ ಏನೂ ಆಗಲಿಲ್ಲ. ಅಷ್ಟು ದೊಡ್ಡ ನಟ, ಒಳ್ಳೆ ಸೆಟಪ್‌ ಇದ್ದರೂ ಚಿತ್ರವನ್ನು ಗೆಲ್ಲಿಸಲಾಗಲಿಲ್ಲ ಎಂಬ ಆಪಾದನೆಯ ಜೊತೆ ನಾನು ಕಾರ್ಪೊರೇಟೆ ವಾಪಾಸ್‌ ಹೋದೆ. ಕನ್ನಡ ಮತ್ತು ಹಿಂದಿ ಡಬ್ಬಿಂಗ್‌ ಆರ್ಟಿಸ್ಟ್‌ ಆಗಿಯೂ ಸಹ ನಾನು ಕೆಲಸ ಮಾಡಿದ್ದೇನೆ.  “ಕಭೀ ಕಭೀ ಮೇರೇ ದಿಲ್‌ ಮೇ’ ಎಂಬ ಅಮಿತಾಭ್‌ ಬಚ್ಚನ್‌ ಧ್ವನಿಯನ್ನು ಬಾಲ್ಯದಿಂದ ಅನುಕರಿಸಿದ್ದು ಪ್ರಾಯಶಃ ನನ್ನ ಕಂಠದಾನ ಕಿತಾಪತಿಗಳಿಗೆ ಸಹಕಾರಿಯಾಯಿತು.    

ಸಿಹಿಕಹಿ ಚಂದ್ರು ಅವರ ಜತೆ ಧಾರಾವಾಹಿಯೊಂದಕ್ಕೆ ಕೆಲಸ ಮಾಡುವಾಗ ಗಣೇಶ್‌, ಸೂರಿ, ದುನಿಯಾ ವಿಜಯ…, ಪ್ರೀತಂ ಗುಬ್ಬಿ, ಶ್ರೀನಗರ ಕಿಟ್ಟಿ, ತುಷಾರ್‌ ರಂಗನಾಥ್‌, ವಿಕಾಸ್‌, ನಾಗಶೇಖರ್‌ ಹಾಗೂ ಅಸಂಖ್ಯಾತ ಸ್ನೇಹಿತರು ಸಿಕ್ಕಿದ್ದರು. ನಾವೆಲ್ಲಾ “ಗೂಡು’ ಎಂಬ ಬಸವನಗುಡಿಯ ನನ್ನ ಬಾಡಿಗೆ ಮನೆಯಲ್ಲಿ ಸೇರುತ್ತಿಲ್ಲೆವು. ಆಗ ನಮ್ಮನ್ನು ನೋಡಿಕೊಳ್ಳುತ್ತಿದ್ದುದು ಪ್ರಕಾಶ್‌ ಭಟ್‌ ಎಂಬ ನಮ್ಮ ಅಣ್ಣ.  ಅವನು ಈಗಿಲ್ಲ. ಆ ಟೈಮ್ನಲ್ಲಿ ಗಣೇಶನಿಗೆ ಒಂದು ಕಥೆಯ ತರಹ ಕೇಳುವಂತಹದ್ದೇನನ್ನೋ ಹೇಳಿದ್ದೆ. ನಂಗೆ ಆಗಲೂ ಈಗಲೂ ನೆಟ್ಟಗೆ ಬಾಯಲ್ಲಿ ಕಥೆ ಹೇಳಲು ಬರುವುದಿಲ್ಲ.

ಅಷ್ಟೊತ್ತಿಗಾಗಲೇ ಗಣೇಶ “ಚೆಲ್ಲಾಟ’ ಸಿನಿಮಾ ಮಾಡಿದ್ದ. ಹೀಗೆ ಒಂದು ದಿನ ರಾಜರಾಜೇಶ್ವರಿ ನಗರದಲ್ಲಿ ಯಾವುದೋ ಶೂಟಿಂಗ್‌ ಮಾಡುತ್ತಿದ್ದೆ.  ಅಲ್ಲಿಗೆ ನನ್ನನ್ನು ಹುಡುಕಿಕೊಂಡು ಬಂದ ಗಣೇಶ, ನಮ್ಮ ಊರಿನಲ್ಲಿ ಒಬ್ಬರು ಪೊ›ಡ್ನೂಸರ್‌ ಇದ್ದಾರೆ. ಅವರಿಗೆ ಕತೆ ಹೇಳಿ. ನಾನು ಹೇಳಿದರೆ ಸಿನಿಮಾ ಮಾಡುತ್ತಾರೆ ಅಂದ. ನಾನು, ಬೇಡ, ಈಗಾಗಲೇ ಎರಡು ಸಿನಿಮಾ ಮಾಡಿ ದಬ್ಟಾಕ್ಕಿಕೊಂಡಿದ್ದೇನೆ ಎಂದೆ. ಆದರೂ ಬಿಡಲಿಲ್ಲ ಗಣೇಶ. ಅವನ ಪ್ರೀತಿಗೆ ಸಾರ್ವಕಾಲಿಕ ಶರಣು. ಮಾರನೇ ದಿನ ನಾನು ಪ್ರೀತಂ ಮತ್ತು ಗಣೇಶ ಈ.ಕೃಷ್ಣಪ್ಪನವರ ಭೇಟಿಗೆ ಹೋದೆವು. ಅವತ್ತು ಕೃಷ್ಣಪ್ಪನವರು ಎಣ್ಣೆ ಸ್ನಾನ ಮಾಡುತ್ತಿದ್ದರು. ಎಣ್ಣೆ ಮೆತ್ತಿದ ಒಂದು ಕಣ್ಣು ತೆಗೆದು ನಮ್ಮತ್ತ ನೋಡಿ, “ಹೋಗಿ ಮಾಡ್ಕಳ್ರಪ್ಪಾ’ ಎಂದು ಹೇಳಿ ಕಳುಹಿಸಿದರು. ನನಗೆ ಆಶ್ಚರ್ಯ. ಅಷ್ಟು ಸುಲಭಕ್ಕೆ ಎಣ್ಣೆ ಸ್ನಾನದ ಟೈಮಿನಲ್ಲಿ, ಸಿನಿಮಾ ಮಾಡಿ  ಎಂದರೆ ಹೇಗೆ ಮಾಡುವುದು?! ಅದರಲ್ಲೂ ನನ್ನ ಮೊದಲ ಎರಡೂ ಸಿನಿಮಾಗಳು ಮಾರುಕಟ್ಟೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದವು. ನಾನು ತೀರಾ ಯೋಚಿಸದೇ, ನನ್ನ “ಘನ ಇತಿಹಾಸ’ವನ್ನು ಈ.ಕೃಷ್ಣಪ್ಪನವರಿಗೆ ಹೇಳಿಬಿಟ್ಟೆ. ಕ್ಷಣಕಾಲ ನನ್ನನ್ನು, ಗಣೇಶನನ್ನು ದಿಟ್ಟಿಸಿದ ಕೃಷ್ಣಪ್ಪ, “ನಿಜಾ ಹೇಳಿದಿಯ, ಹೋಗು ಒಳ್ಳೆಯದಾಗ್ತದೆ’ ಎಂದರು. ಹಾಗೇ, ಆರಂಭವಾಗಿದ್ದೇ ಮುಂಗಾರು ಮಳೆ’.  ಅಲ್ಲಿಯವರೆಗೂ ನನ್ನ ಸಿನಿಮಾಗಳಿಗೆ ಸೂರಿ ಡೈಲಾಗ್‌ ಬರೆದಿದ್ದ. ಮುಂಗಾರು ಮಳೆಯಲ್ಲಿ ನಾನು ಮೊದಲ ಬಾರಿಗೆ ಡೈಲಾಗ್ಗಳನ್ನು ಬರೆದೆ. ಪ್ರೇಮದ ಬಗ್ಗೆ ಒಂಚೂರು ಉಲ್ಟಾ-ಸೀದಾ ಎನಿಸುವ ಬರವಣಿಗೆ ಇರಬೇಕು, ಮುಖ್ಯವಾಗಿ ಯುವಕರನ್ನು ಸಿನಿಮಾ ತಟ್ಟಬೇಕು ಎನ್ನವುದು ನನ್ನಲ್ಲಿತ್ತು. ಈ ನಿಟ್ಟಿನಲ್ಲಿ ಮಾಡಿದ ಎಲ್ಲಾ ಕೆಲಸಗಳು ಊಹಿಸಲಸಾಧ್ಯವಾಗದಷ್ಟು ದೊಡ್ಡ ಮಟ್ಟದಲ್ಲಿ ವರ್ಕ್‌ ಆಗುತ್ತೆ ಎನ್ನುವುದು ನನ್ನನ್ನು ಸೇರಿಸಿ ಯಾರಿಗೂ ಗೊತ್ತಿರಲಿಲ್ಲ. ಮೊದಲ ಎರಡು ವಾರ ಸಿನಿಮಾ ಗೆಲ್ಲುವ ಯಾವುದೇ ಲಕ್ಷಣ ಇರಲಿಲ್ಲವೆನ್ನಿ. ಉತ್ತರ ಕರ್ನಾಟಕದಿಂದ ಪ್ರಿಂಟುಗಳೆಲ್ಲಾ ವಾಪಸ್ಸು ಬಂದವು. ಸಣ್ಣಪುಟ್ಟ ಟಿವಿ ಕಾರ್ಯಕ್ರಮಗಳಲ್ಲಿ ತಂಡದ ಜೊತೆ ಪ್ರಚಾರಕ್ಕೆ ಯತ್ನಿಸುತ್ತಿದ್ದೆ. ಅದೇನಾಯಿತೋ ಇದುವರೆಗೂ ಗೊತ್ತಿಲ್ಲ, ಜನ ಚಿತ್ರಮಂದಿರದ ಕಡೆಗೆ ಬರತೊಡಗಿದರು. ಉತ್ತರ ಕರ್ನಾಟಕದಲ್ಲಿ ಒಂದು ತಿಂಗಳ ನಂತರ ರೀ-ರಿಲೀಸ್‌ ಮಾಡಿದೆವು. ನಾಲ್ಕನೇ ವಾರ ಒಂದೆರಡು ರಜೆಗಳಿತ್ತು. ಆಗ ಸಿನಿಮಾ ಎದ್ದು ನಿಲು¤. ಆಮೇಲೆ ನಡೆದಿದ್ದೆಲ್ಲಾ ಇತಿಹಾಸ.. ನಾನು “ಮನಸಾರೆ’ ಮಾಡುತ್ತಿದ್ದಾಗ, ಅದೇ ನಿರ್ಮಾಪಕರಿಗೆ ಸೂರಿ ಜಂಗ್ಲಿಮಾಡುತ್ತಿದ್ದ. ಆಗ ಅವನು ನನ್ನನ್ನು ಹಾಡು ಬರೆಯುವಂತೆ ಮಾಡಿದ. ಹಾಗೆಯೇ ಜಯಂತ ಕಾಯ್ಕಿಣಿಯವರ ಸಹವಾಸದಿಂದ ನನ್ನ ಬರವಣಿಗೆಗೆ ಚಿಂತನೆಗೆ ವಿಪರೀತ ಒಳ್ಳೆಯ ದಿಕ್ಕುಗಳು ಸಿಕ್ಕವು. ಅವರಿಬ್ಬರಿಗೆ ನಾನು ಋಣಿ. ಇವೆಲ್ಲದರ ಜತೆಜತೆಯಲ್ಲಿ ಮದುವೆಯಾಯಿತು, ಹೆಂಡತಿಯ ಹೆಸರು ರೇಣುಕ. ಇಬ್ಬರು ಹೆಣ್ಣು ಮಕ್ಕಳಾದರು, ಪೂರ್ವಿ ಮತ್ತು ಪಂಚಮಿ. ಯೋಗರಾಜ ಮೂವೀಸ್‌ ಹುಟ್ಟಿತು. 

ಏನೇ ಇರಲಿ, ನಾನು ನಿರ್ದೇಶಕನಾಗಬೇಕು ಎಂದುಕೊಂಡು ನಿರ್ದೇಶಕನಾದವನಲ್ಲ, ಏನೇನೋ ಆಗಬೇಕು ಎಂದು ನಿರ್ದೇಶಕನಾಗಿದ್ದೇನೆ. ಆದರೂ ಈ ಜರ್ನಿ ಒಂಥರಾ ಚೆನ್ನಾಗಿದೆ. ಪೂರ್ಣಪ್ರಮಾಣದ ಕವಿ ಅಲ್ಲವಾದ್ದರಿಂದ ನಾನು ಎರಡೂ ಬಣಗಳಲ್ಲಿ ಇಡ್ಲಿ ತಿನ್ನುತ್ತಾ ಆರಾಮಾಗಿದ್ದೇನೆ.

— ಯೋಗರಾಜ್‌ ಭಟ್‌

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.