ದೇಶದ ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ
Team Udayavani, Jun 13, 2018, 11:53 AM IST
ನವದೆಹಲಿ: ಬೆಂಗಳೂರು ಸೇರಿ ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ಭದ್ರತೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಇದಕ್ಕಾಗಿ 1,100ಕ್ಕೂ ಹೆಚ್ಚು ಸಿಐಎಸ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ಉಗ್ರರು ವಿಧ್ವಂಸಕ ಕೃತ್ಯ ನಡೆಸುವ ಭೀತಿ ಇರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಚೆನ್ನೈ, ಪಾಟ್ನಾ, ತಿರುವನಂತಪುರಂ, ವಿಶಾಖಪಟ್ಟಣ, ಜೈಪುರ, ಗೋವಾ, ಔರಂಗಾಬಾದ್, ಹೈದರಾಬಾದ್, ಮದುರೈ ಸೇರಿದಂತೆ ಹತ್ತು ವಿಮಾನ ನಿಲ್ದಾಣಗಳ ಭದ್ರತೆಗಾಗಿ 1,172 ಹೆಚ್ಚುವರಿ ಸಿಐಎಸ್ಎಫ್ ಸಿಬ್ಬಂದಿಯನ್ನು ಕಳೆದ ಕೆಲ ತಿಂಗಳಲ್ಲಿ ನಿಯೋಜನೆ ಮಾಡಿದೆ. ಇದಲ್ಲದೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಬೆಂಗಳೂರು, ದೆಹಲಿ ಮತ್ತು ಮುಂಬೈಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ.