ಮೇಳಗಳ ಮಾಲೆಗೆ ಈಗ ಕಾಡು ಹಣ್ಣು


Team Udayavani, Jun 16, 2018, 6:00 AM IST

z-20.jpg

ಕಾಡು ನುಣುಪಾಗುತ್ತಿರುವ ಕಾಲಘಟ್ಟದಲ್ಲಿ ಮೇಳಗಳ ಮೂಲಕ ಹಲಸು, ಮಾವು, ಕಾಡು ಹಣ್ಣು.. ಮೊದಲಾದ ಫ‌ಲ ಗಳನ್ನು ರಕ್ಷಿಸುವತ್ತ ವಾಲುತ್ತಿದ್ದೇವಲ್ಲ… ಅದೇ ಸಮಾಧಾನ. ಇದರ ಹಿಂದೆ ಹಸಿರು ಮನಸ್ಸುಗಳು ರೂಪುಗೊಳ್ಳುತ್ತಿರು ವುದು ಭರವಸೆ ಮೂಡಿಸುತ್ತಿವೆ. 

ಹಲಸು ಮೇಳ, ಮಾವು ಮೇಳ, ತರಕಾರಿ ಮೇಳ, ಸಿರಿಧಾನ್ಯಗಳ ಮೇಳ, ಅಕ್ಕಿ ಮೇಳ… ಇವೆಲ್ಲಾ ಮೇಳಗಳ ಮಾಲೆಗಳು. ಸಸ್ಯಾ ಭಿವೃದ್ಧಿಯಿಂದ ಮೌಲ್ಯವರ್ಧನೆ ತನಕ, ಔಷಧೀಯ ಗುಣಗಳಿಂದ ತೊಡಗಿ ಅವುಗಳ ಪೌಷ್ಠಿಕ ಸಾಮರ್ಥ್ಯದ ಬಳಕೆ ತನಕದ ವಿಚಾರಗಳ ಪೋಸ್ಟ್‌ಮಾರ್ಟಂ. ಉತ್ಪನ್ನವೊಂದರ ಗರಿಷ್ಟ ಪ್ರಸಿದ್ಧೀ ಕರಣಕ್ಕೆ ಮೇಳಗಳು ಪೂರಕ ಮಾಧ್ಯಮ. ಕನ್ನಡ ನಾಡಿನಾದ್ಯಂತ ಹಲವಾರು ಮೇಳಗಳು ನಿಜಾಸಕ್ತರನ್ನು ಸೆಳೆದು ಒಟ್ಟು ಮಾಡಿವೆ. ಫ‌ಲ ಮೋಹವನ್ನು ಹುಟ್ಟಿಸಿದೆ. ಎಲ್ಲೂ ಸಿಗದ ಮಾಹಿತಿಗಳು ಲಭ್ಯವಾಗಿ ಚರ್ಚೆಗೆ, ಮಂಥನಕ್ಕೆ ಗ್ರಾಸವಾಗುತ್ತಿವೆ.

ಹತ್ತರೊಟ್ಟಿಗೆ ಹನ್ನೊಂದಾಗುವ ಮೇಳಗಳೂ ಇಲ್ಲದಿಲ್ಲ. ಮಾರ್ಚ್‌ ಕೊನೆಯೊಳಗೆ ದಿಢೀರ್‌ ಆಯೋಜನೆಗೊಳ್ಳುತ್ತವೆ. ಇಲ್ಲಿ ಜನರ ಉಪಸ್ಥಿತಿ ಮಹತ್ವವಲ್ಲ. ಕಾಟಾಚಾರದ ಹೂರಣಗಳು. ಅಲ್ಲಿಂದಿಲ್ಲಿಂದ ಎಂದು ನೂರೋ ನೂರೈವತ್ತೋ ಮಂದಿ ಸೇರಿರುತ್ತಾರೆ. ಭೋಜನ ದೊಂದಿಗೆ ಕಲಾಪಗಳೂ ಮುಕ್ತಾಯ ಗೊಳ್ಳುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಮರುದಿವಸದ ಪತ್ರಿಕಾ ವರದಿ ಮುಖ್ಯ ವಾಗುತ್ತದೆ. ಆದರೆ ಖಾಸಗಿಯಾಗಿ ಅರ್ಥಪೂರ್ಣ ಮೇಳಗಳು ನಾಡಿನಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅವೆಂದೂ ಸುದ್ದಿ ಮಾಡುವುದಿಲ್ಲ, ಸದ್ದಾಗುವುದಿಲ್ಲ. ಸದ್ದು ಮಾಡುವ ಮೋಹ ಆಯೋಜಕರಿಗೆ ಇರುವುದಿಲ್ಲ.  ಮೇಳಗಳ ಮಾಲೆಗೆ ಈಗ ಕಾಡುಹಣ್ಣುಗಳು ಸೇರ್ಪಡೆ. ಶಿರಸಿಯ ಅರಣ್ಯ ಕಾಲೇಜಿನ ಸಾರಥ್ಯ. ಇಲ್ಲಿನ ಹಸಿರು ಮನಸ್ಸಿನ ಪ್ರಾಧ್ಯಾ ಪಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರ ಆಸ್ಥೆ ಯಿಂದಾಗಿ ಮರೆಯಾಗುತ್ತಿರುವ ಕಾಡುಹಣ್ಣುಗಳಿಗೆ ಮರು ಜೀವ ನೀಡುವ ಕೆಲಸ ನಡೆದಿದೆ. ಕಾಲೇಜಿನೊಂದಿಗೆ ಶಿರಸಿಯ ಯೂತ್‌ ಪಾರ್‌ ಸೇವಾ ಸಂಸ್ಥೆಯು ಹೆಗಲೆಣೆ ನೀಡಿದೆ. ಜೂನ್‌ ಒಂದರಂದು ಶಿರಸಿಯಲ್ಲಿ ಮೇಳ ಸಂಪನ್ನವಾಗಿತ್ತು. ನಾಡಿನ ವಿವಿಧ ಜಿಲ್ಲೆಗಳಿಂದ ಆಸಕ್ತ ಫ‌ಲಪ್ರಿಯರ ಉಪಸ್ಥಿತಿ.

ಸುಮಾರು ನೂರ ಇಪ್ಪತ್ತು ವಿವಿಧ ಕಾಡು ಹಣ್ಣುಗಳ ಪ್ರದರ್ಶನ. ಅವುಗಳಲ್ಲಿ ನೂರರಷ್ಟು ತಿನ್ನಬಹುದಾದ ಹಣ್ಣುಗಳು. ಹಣ್ಣುಗಳಲ್ಲಿ ಕೆಲವು ಕೈಯಳತೆಗೆ ಸಿಕ್ಕರೆ, ಇನ್ನೂ ಕೆಲವನ್ನು ಹುಡುಕಿ ಸಂಗ್ರಹಿ ಸುವುದು ಶ್ರಮ ಬೇಡುವ ಕೆಲಸ. ಕಾಲೇಜು ಎರಡು ತಿಂಗಳಿನಿಂದ ಕಾಡುಹಣ್ಣುಗಳ ಹಿಂದೆ ಬಿದ್ದಿತ್ತು. ಇದರ ಸಂಗ್ರಹಣೆಗೆ ಕೃಷಿಕರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ, ಫ‌ಲಪ್ರಿಯ ಮಂದಿಯ ಸಹಕಾರ. ಅಲ್ಲದೆ ಮೇಳಕ್ಕೆ ಆಗಮಿಸುವ ಪ್ರತಿನಿಧಿಗಳು ಕೂಡಾ ತಮಗೆ‌ ಲಭ್ಯವಾದ ತಳಿಗಳನ್ನು ಪ್ರದರ್ಶನಕ್ಕೆ ತಂದಿದ್ದರು.

ಕಾಲೇಜು ಸ್ಪಷ್ಟವಾದ ಉದ್ದೇಶಗಳನ್ನು ಗುರುತುಹಾಕಿಯೇ ಮೇಳವನ್ನು ನಡೆಸಿದೆ. ಈಗಾಗಲೇ ಪರಿಚಿತವಾಗಿರುವ, ಕಾಣೆ ಯಾಗಿರುವ ಕಾಡು ಹಣ್ಣುಗಳ ಪರಿಚಯ, ಅವುಗಳಲ್ಲಿರುವ ಪೌಷ್ಠಿಕಾಂಶ ಮತ್ತು ಔಷಧೀಯ ಗುಣಗಳ ಮಹತ್ವ, ಸಸ್ಯಗಳ ಸಂರಕ್ಷಣೆ, ಬೆಳೆಸಲು ಉತ್ತೇಜನ, ಮೌಲ್ಯವರ್ಧನೆ, ಈ ಕುರಿತ ಜಾಗೃತಿ…ಹೀಗೆ ವಿವಿಧ ಕಾರ್ಯ ಹೂರಣಗಳು. ಕಾಲೇಜಿನ ಅರಣ್ಯ ಜೀವವಿಜ್ಞಾನ ವಿಭಾಗದ ಸಂಶೋಧಕ ಡಾ| ಶ್ರೀಕಾಂತ್‌ ಗುಣಗಾ ಇನ್ನಷ್ಟು ಸೇರಿಸುತ್ತಾರೆ, “ಕಾಡುಹಣ್ಣುಗಳ ಕೊರತೆ ಅನುಭವಿಸುವ ವನ್ಯಮೃಗಗಳಿಗೆ ಆಹಾರದ ಕೊರತೆ ನೀಗಿಸುವ ಸಲುವಾಗಿ ಹೊಲ-ಗದ್ದೆಗಳ ಅಂಚಿನಲ್ಲಿ, ಬೆಟ್ಟ ಭೂಮಿಗಳಲ್ಲಿ, ಕಾಡಿನ ಅಂಚಿನಲ್ಲಿ ಕಾಡುಹಣ್ಣುಗಳನ್ನು ಬೆಳೆಸಲು ಮಾರ್ಗದರ್ಶನ ಮತ್ತು ಉತ್ತೇಜನ ನೀಡುವ ಅಗತ್ಯವಿದೆ.’

ಹುಳಿಮಜ್ಜಿಗೆ ಹಣ್ಣು, ನ್ಯಾವಳದ ಹಣ್ಣು, ಹೊಸಮಡಿಕೆ ಹಣ್ಣು, ಗೊಂಬಳೆಕಾಯಿ, ಕರಿಬೇವಿನ ಹಣ್ಣು, ಈಚಲು ಹಣ್ಣು, ಹಲಗೆ ಹಣ್ಣು, ಸಿಂಬಳದ ಹಣ್ಣು, ತಟ್ಟೆಲೆ ಮರದ ಬೀಜ, ಬಸವನಾಟೆ ಬೀಜ, ಕಾಡು ಜಾಣಿಗೆ, ಬೀಡಿ ಹಣ್ಣು, ಬಿಸಿಲ ಹಣ್ಣು… ಹೀಗೆ ಅಪರೂಪದ ಹಣ್ಣುಗಳ ಪ್ರದರ್ಶನ. ವನಫ‌ಲಗಳ ಮೌಲ್ಯ ವರ್ಧನೆಯ ಸಂಗತಿ ಗಳು, ಕಾಡುಹಣ್ಣುಗಳ ಮೌನಕ್ಕೆ ಮಾತು ಕೊಟ್ಟವರ ಪರಿಚಯ, ವೈಜ್ಞಾನಿಕ ಮಾಹಿತಿಗಳ ವಿನಿಮಯ… ಮೇಳದ ವೈಶಿಷ್ಟ.  “ಕಾಡು ಹಣ್ಣಿನ ತಳಿಗಳು ಪುನರುತ್ಪಾದನೆಯ ಕೊರತೆಯಿಂದ ನಾಶದತ್ತ ತಲುಪಿವೆ. ಹಣ್ಣುಗಳನ್ನು ಸಂಗ್ರಹಿಸುವ ಭರದಲ್ಲಿ ಗಿಡಗಳನ್ನು ಅವೈಜ್ಞಾನಿಕವಾಗಿ ಕಡಿಯುವ ವಿಕ್ಷಿಪ್ತತೆ ಹಲವರಲ್ಲಿದೆ. ಇದರಿಂದ ಕಾಡು ಹಣ್ಣುಗಳ ತಳಿಗಳು ಕಳೆದುಹೋಗುತ್ತಿವೆ’ ಎನ್ನುವ ಆತಂಕ ಉಮಾಪತಿ ಭಟ್‌ ವಾಜಗಾರ ಅವರದು. ಅವರು ಈ ಕುರಿತು ಅಧ್ಯಯನ ಮಾಡಿದವರು. ವಿದ್ಯಾರ್ಥಿಗಳಿಗೆ ತಳಿಗಳನ್ನು ಪರಿಚಯಿ ಸುವ ದೊಡ್ಡ ಕೆಲಸ ಮಾಡುತ್ತಿದ್ದಾರೆ. “ಅರಣ್ಯದಲ್ಲಿ ಕಾಡು ಹಣ್ಣುಗಳನ್ನು ನೆಡಲು ಅರಣ್ಯ ಇಲಾಖೆ ಯವರಲ್ಲಿ ವಿನಂತಿಸಿದ್ದೇವೆ. ಎಲ್ಲಾ ಕಡೆಯೂ ಈ ಕೆಲಸ ಆಗಬೇಕು. ವನ್ಯಜೀವಿಗಳಿಗೆ ಕಾಡಲ್ಲೇ ಆಹಾರ ಸಿಗುವಂತಾದರೆ ಅವುಗಳು ನಾಡಿಗೆ ಇಳಿಯುವ ಪ್ರಮೇಯವೇ ಇಲ್ಲವಲ್ಲಾ. ಇದರಿಂದಾಗಿ ಉಂಟಾಗುವ ಕೃಷಿ ಹಾನಿಯನ್ನು ತಪ್ಪಿಸ ಬಹುದು.’ ಇದು ಉಮಾಪತಿಯವರ ದೂರದೃಷ್ಟಿ.

ಅರಣ್ಯ ಕಾಲೇಜು ಅಪ್ಪೆ ಮಾವು, ಹಲಸು, ಗಾಸೀìನಿಯಾದ ಅಭಿವೃದ್ಧಿಗೆ ಗಟ್ಟಿ ಅಡಿಗಟ್ಟನ್ನು ಈ ಹಿಂದೆಯೇ ಹಾಕಿತ್ತು. ಕೇಂದ್ರ ಸರಕಾರದ ಯುನೈಟೆಡ್‌ ನೇಶನ್‌ ಎನ್‌ವಾಯರನ್‌ಮೆಂಟ್‌ ಪ್ರೋಗ್ರಾಂ ಅಡಿಯ ಟ್ರಾಫಿಕಲ್‌ ಫ್ರುಟ್‌ ಟ್ರೀಸ್‌ ಯೋಜನೆ ಯಡಿಯಲ್ಲಿ ಅಕಾಡೆಮಿಕ್‌ ಮಾದರಿಯಲ್ಲಿ ತಳಿಗಳ ಸಂರಕ್ಷಣೆ ಮತ್ತು ದಾಖಲಾತಿಯ ಕೆಲಸಗಳಾಗಿದ್ದವು. ಜತೆಗೆ ಸಸ್ಯಾಭಿವೃದ್ಧಿ, ಮೌಲ್ಯ ವರ್ಧನೆಯತ್ತಲೂ ಹೆಜ್ಜೆಯೂರಿತ್ತು. ಉತ್ತಮ ಕೃಷಿಕ ಸ್ವೀಕೃತಿ ಪಡೆದಿತ್ತು. ಯೋಜನೆಯ ಫ‌ಲವಾಗಿ ಏನಿಲ್ಲವೆಂದರೂ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಕಸಿ ಗಿಡಗಳು ತೋಟ ಸೇರಿವೆ. ಕೃಷಿಕರ ವೈಯಕ್ತಿಕ ಮಟ್ಟದಲ್ಲೂ ಅಪ್ಪೆಮಾವಿನ ಸಂರಕ್ಷಣೆಯು ನಡೆದಿದೆ, ನಡೆ ಯುತ್ತಿದೆ. ಈಗ ಕಾಡುಹಣ್ಣುಗಳ ಸರದಿ.

“ಕಾಡು ಹಣ್ಣುಗಳ ಬಗ್ಗೆ ಅರಿವು ಮೂಡಿಸಲು ಇಂತಹ ಮೇಳಗಳು ಉಪಯುಕ್ತ. ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಇದರಲ್ಲಿರುವ ಉತ್ತಮ ತಳಿ ಆಯ್ಕೆ, ಕೃಷಿ ವಿಧಾನ, ಮೌಲ್ಯವರ್ಧನೆ ಸಾಧ್ಯತೆಗಳನ್ನು ಅಧ್ಯಯನ ನಡೆಸಬೇಕು. ಇವುಗಳನ್ನು ನೆಟ್ಟು ಬೆಳೆಸುವುದನ್ನು ಜನಪ್ರಿಯ ಗೊಳಿಸಬೇಕಾಗಿದೆ.’ ಶಿರಸಿಯ ಬಾಲಚಂದ್ರ ಹೆಗಡೆ ಸಾಯಿಮನೆ ಯವರು ಮೇಳವನ್ನು ಕೃಷಿಕನ ಕಣ್ಣಿಂದ ನೋಡಿದ್ದಾರೆ.  ಕಾಡುಹಣ್ಣುಗಳನ್ನು ಜ್ಞಾಪಿಸಿಕೊಂಡರೆ ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ. ದಾರಿಯ ಇಕ್ಕೆಲೆಗಳಲ್ಲಿ ಎಷ್ಟೊಂದು ಹಣ್ಣುಗಳು. ನೇರಳೆ ಹಣ್ಣು, ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆೆಯಿಂದ ಇಣುಕುವ ಬೆಲ್ಲಮುಳ್ಳು, ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಜೇಡರ ಬಲೆಯ ಒಳಗಿರುವಂತೆ ಕಾಣುವ ಜೇಡರ ಹಣ್ಣು, ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬುÛಕ, ಪೇರಳೆ, ಹೆಬ್ಬಲಸು, ಪುನರ್ಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಶರೀರಕ್ಕೆ ಬೇಕಾದ ಎ,ಬಿ,ಸಿ…ಮಿಟಮಿನ್‌ ಅಂತ ಹೆಸರಿಸಲು ಗೊತ್ತಿಲ್ಲ. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ಏರುಪೇರುಗಳಿಗೆ ಇಂತಹುದೇ ಹಣ್ಣು ತಿನ್ನಬೇಕೆಂದು ಹಿರಿಯರಿಗೆ ಗೊತ್ತಿತ್ತು. ಉದಾಹರಣೆಗೆ: ಬಾಯಿಹುಣ್ಣು ಬಂದಾಗ ಕೊಟ್ಟೆಮುಳ್ಳು ಹಣ್ಣು ತಿನ್ನಲೇಬೇಕು ಅಂತ ಅಮ್ಮ ಹೇಳುತ್ತಿದ್ದರು. ಒಂದೊಂದು ಜಿಲ್ಲೆಯಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡಿದ ವನಫ‌ಲಗಳಿವೆ. ಅವು ನೆಟ್ಟು ಬೆಳೆಸುವಂತಹುದಲ್ಲ. ಕಾಡಿನ ಮಧ್ಯೆ ಅವು ಕಾಡಾಗಿ ಬೆಳೆಯುತ್ತವೆ. ನಾವು ಕಾಡೊಳಗೆ ಯಾವಾಗ ನುಗ್ಗಿದೆವೋ, ಸಂರಕ್ಷಣೆಗಾಗಿ ಇನ್ನು ಮೇಳಗಳನ್ನು ಸಂಘಟಿಸದೆ ವಿಧಿಯಿಲ್ಲ! ಈ ಮೂಲಕ ಸಂರಕ್ಷಣೆಯೊಂದೇ ದಾರಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಡಾ| ಎಲ್‌.ಸಿ. ಸೋನ್ಸರು ಹೇಳಿದ ಮಾತು ನೆನಪಾಗುತ್ತದೆ, “ಕಾಡು ಹಣ್ಣುಗಳು ನಮ್ಮನ್ನು ಕಾಡಬೇಕು. ಹಣ್ಣು ತಿನ್ನುವ ಅಭ್ಯಾಸವೇ ಬದುಕಿನಿಂದ ಮರೆತುಹೋಗಿದೆ. ಅದರಲ್ಲಿರುವ ಔಷಧೀಯ ಗುಣಗಳನ್ನು ಹಿರಿಯರು ಕಂಡು ಹಿಡಿದಿದ್ದರು. ಮನೆಯ ಎದುರು ಒಂದು ಚೆರ್ರಿ ಹಣ್ಣಿನ ಮರವಿರಲಿ. ಇದರ ಹಣ್ಣುಗಳು ಮಕ್ಕಳಿಗೆ ಖುಷಿ ಕೊಡು ತ್ತದೆ. ಹೇರಳವಾದ ವಿಟಮಿನ್‌ ಹಣ್ಣಿನಲ್ಲಿದೆ. ವಿಟಮಿನ್ನಿಗಾಗಿ ಮಾತ್ರೆಗಳನ್ನು ತಿನ್ನುವುದಕ್ಕಿಂತ ಇದು ಎಷ್ಟೋ ವಾಸಿ. ಮೊದಲು ಅಮ್ಮಂದಿರಿಗೆ ಇಂತಹ ಹಣ್ಣುಗಳು ತಿಂದು ಅಭ್ಯಾಸವಾಗಬೇಕು. ಆಗಷ್ಟೇ ಮಕ್ಕಳಿಗದು ತಿನ್ನಬೇಕೂಂತ ಕಾಣಬಹುದು.’ ಕೊಡಗಿನ ಕಾಡುಗಳಲ್ಲಿ ನುಚ್ಚಕ್ಕಿ ಹಣ್ಣು ಸಾಮಾನ್ಯ. ಮೂರು ವಿಧದ ರಾಸ್ಬೆರಿ. ಕಪ್ಪು ವರ್ಣದ ಮೈಸೂರು ರಾಸ್ಬೆರಿ. ಹಿಮಾಲಯ ಮೂಲದ ಹಳದಿ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಂಡು ಬರುವ ಕೆಂಪು ಬಣ್ಣದವು. “ಇವು ಮೂರೂ ಕೊಡಗಿನಲ್ಲಿವೆ. ಇದು ಇಲ್ಲಿಗೆ ಅಪರೂಪದ್ದು ಎನ್ನುವ ಅರಿವು ಇಲ್ಲದ್ದರಿಂದ ಕಾಡು ಹಣ್ಣು ಕಾಡಲ್ಲೇ ಮಣ್ಣಾಗುತ್ತಿವೆ,’ ಎಂದು ವಿಷಾದಿಸುತ್ತಾರೆ ಮಡಿಕೇರಿಯ ಇಂಜಿನಿಯರ್‌ ಕೃಷಿಕ ಶಿವಕುಮಾರ್‌.

ಎರಡು ವರುಷಗಳ ಹಿಂದೆ ಕಾಡು ಹಣ್ಣುಗಳನ್ನು ನೆನಪಿಸುವ ಕಾರ್ಯಾಗಾರವೊಂದನ್ನು ದ.ಕ. ಜಿಲ್ಲೆಯ ಅಳಿಕೆ ಸನಿಹದ ಕೇಪು- ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿತ್ತು. ಕೊಡಗಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ದಲ್ಲೂ ಕಾಡು ಹಣ್ಣುಗಳ ಕಾರ್ಯಗಾರ ನಡೆದಿತ್ತು. ಈ ಮೂಲಕ ಕಾಡು ಮಾವಿಗೆ, ಕಾಡು ಹಣ್ಣುಗಳಿಗೆ ದನಿ ನೀಡುವ ಸಣ್ಣ ಹೆಜ್ಜೆಯು ದೊಡ್ಡದಾಗುತ್ತಿದೆ. ಈ ಅರಿವು ಮನದೊಳಗೆ ಜಿನುಗುತ್ತಿದೆ.

ಕಾಡು ನುಣುಪಾಗುತ್ತಿರುವ ಕಾಲಘಟ್ಟದಲ್ಲಿ ಮೇಳಗಳ ಮೂಲಕ ಹಲಸು, ಮಾವು, ಕಾಡುಹಣ್ಣು.. ಮೊದಲಾದ ಫ‌ಲಗಳನ್ನು ರಕ್ಷಿಸುವತ್ತ ವಾಲುತ್ತಿದ್ದೇವಲ್ಲ…ಅದೇ ಸಮಾಧಾನ. ಇದರ ಹಿಂದೆ ಹಸಿರು ಮನಸ್ಸುಗಳು ರೂಪುಗೊಳ್ಳುತ್ತಿರುವುದು ಭರವಸೆ ಮೂಡಿ ಸುತ್ತಿವೆ. ಕಾಡುಹಣ್ಣುಗಳ ಸಂರಕ್ಷಣೆಗೆ ಶಿರಸಿ ಅರಣ್ಯ ಕಾಲೇಜು ಹೊಸ ವಿನ್ಯಾಸ ಬರೆದಿದೆ. ಫ‌ಲವಾಗಿ ಕೃಷಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ. ಬಾಲ್ಯದ ಅನುಭವಕ್ಕೆ ಮಾತು ಕೊಡುವ, ದಾಖಲಿಸುವ ಆಸಕ್ತಿ ಹಬ್ಬುತ್ತಿದೆ. ನೆಟ್ಟು ಬೆಳೆಸುವತ್ತ ಆಸಕ್ತಿ ಹೆಚ್ಚಾಗುತ್ತಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

e-10.jpg

ಆರಾಧನೆಗೆ ಥಳಕು ಹಾಕಿದ ಹಲಸು

b-11.jpg

ಜಾಲತಾಣ ಗುಂಪುಗಳ ಅಗೋಚರ ಕ್ಷಮತೆ

ankana-1.jpg

ತಳಿ ತಿಜೋರಿ ತುಂಬಲು ಇ-ಸ್ನೇಹಿತರ ಸಾಥ್‌

1.jpg

ಊಟದ ಬಟ್ಟಲಿಗೆ ತಟ್ಟಲಿರುವ ಅನ್ನದ ಬರದ ಬಿಸಿ!

14.jpg

ಹಳ್ಳಿಯಲ್ಲಿ ಬೀಸಿದ ತಂಪು ಬೇರಿನ ತಂಗಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.