ಇರ್ವತ್ತೂರು: ಮನೆಯ ಗೋಡೆ ಬಿದ್ದು ಹಾನಿ
Team Udayavani, Jun 29, 2018, 2:25 AM IST
ಪುಂಜಾಲಕಟ್ಟೆ: ಭಾರೀ ಮಳೆಯ ಪರಿಣಾಮ ಇರ್ವತ್ತೂರು ಗ್ರಾಮದ ಬಿ.ಎಸ್. ನಗರ ಫೈರೋಜ್ ಅವರ ಮನೆಯ ಪಾರ್ಶ್ವಗೋಡೆ ಗುರುವಾರ ಬೆಳಗ್ಗೆ ಕುಸಿದು ಬಿದ್ದ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ ಸುಮಾರು 5 ಗಂಟೆ ಹೊತ್ತಿಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ಹಂಚಿನ ಸಹಿತ ಮನೆಯ ಒಂದು ಭಾಗದ ಛಾವಣಿ ಕೂಡಾ ಕುಸಿದಿದೆ. ಈ ಸಂದರ್ಭ ಫೈರೋಜ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಒಳಗಿನ ಕೋಣೆಯಲ್ಲಿ ಮಲಗಿದ್ದರಿಂದ ಅಪಾಯ ತಪ್ಪಿದೆ.
ಫೈರೋಜ್ ಆಟೋ ಚಾಲಕರಾಗಿದ್ದು, 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿದ್ದರು. ಕೆಂಪು ಕಲ್ಲಿನಲ್ಲಿ ಗೋಡೆ ಕಟ್ಟಿದ್ದರೂ ಕಟ್ಟಡ ಕಾಮಗಾರಿ ಸಂಪೂರ್ಣವಾಗಿರಲಿಲ್ಲ. ಇದಕ್ಕೆ ಸರಕಾರದ ಸಹಾಯಧನವೂ ದೊರಕಿರಲಿಲ್ಲ. ಆದರೆ ಇದೀಗ ಛಾವಣಿ ಸಹಿತ ಪಾರ್ಶ್ವಗೋಡೆ ಕುಸಿದಿದ್ದು, ಮನೆಯೇ ಬೀಳುವ ಸ್ಥಿತಿಯಲ್ಲಿದೆ.ಇದರಿಂದ ಅಶಕ್ತ ಕುಟುಂಬ ಅಸಹಾಯಕರಾಗಿದ್ದಾರೆ. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಗ್ರಾ.ಪಂ. ಉಪಾಧ್ಯಕ್ಷ ಶಂಕರ ಶೆಟ್ಟಿ, ಪಂ.ಅ. ಅಧಿಕಾರಿ ಗಣೇಶ್ ಶೆಟ್ಟಿಗಾರ್, ಸದಸ್ಯ ದಯಾನಂದ ಕುಲಾಲ್, ಗ್ರಾಮಕರಣಿಕ ಸಹಾಯಕ ಸಂತೋಷ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.