ಧೋನಿಯಿಂದ ಬೈಸಿಕೊಂಡು ಬುದ್ಧಿ ಕಲಿತ ಕುಲದೀಪ್ ಯಾದವ್
Team Udayavani, Jul 12, 2018, 11:41 AM IST
ಹೊಸದಿಲ್ಲಿ: ಉದ್ವೇಗ ರಹಿತ, ಸಮಚಿತ್ತದ ಆಟಕ್ಕೆ ಹೆಸರಾದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಒಮ್ಮೊಮ್ಮೆ ತಾಳ್ಮೆಗೆಡುತ್ತಾರೆ. ಆದರೆ ಅವರ ಸಿಟ್ಟು ಸಾತ್ವಿಕವಾಗಿರುತ್ತದೆ ಎಂದು ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.
“ವಾಟ್ ದ ಡಕ್’ ಎಂಬ ಕಾರ್ಯ ಕ್ರಮದಲ್ಲಿ ಮಾತನಾಡಿದ ಕುಲದೀಪ್ ಯಾದವ್, ಧೋನಿಯವರ ಸಾತ್ವಿಕ ಸಿಟ್ಟಿಗೆ ಉದಾಹರಣೆಯಾಗಿ, ಕಳೆದ ವರ್ಷ ಇಂದೋರ್ನಲ್ಲಿ ನಡೆದಿದ್ದ ಭಾರತ-ಶ್ರೀಲಂಕಾ ನಡುವಿನ ಟಿ20 ಪಂದ್ಯದ ಪ್ರಸಂಗವೊಂದನ್ನು ಉದಾಹರಿಸಿದ್ದಾರೆ.ಆ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾದ್ದರಿಂದ ರೋಹಿತ್ ಶರ್ಮ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಯಾದವ್ ಎಷ್ಟೇ ಕರಾರುವಾಕ್ ಆಗಿ ಬೌಲಿಂಗ್ ಮಾಡುತ್ತಿದ್ದರೂ ಅದನ್ನು ಶ್ರೀಲಂಕಾ ಬ್ಯಾಟ್ಸ್ ಮನ್ಗಳು ಲೀಲಾಜಾಲವಾಗಿ ಎದುರಿಸುತ್ತಿದ್ದರು. ಬೌಂಡರಿ, ಸಿಕ್ಸರ್ಗಳ ಸುರಿಮಳೆಯಾಗುತ್ತಿತ್ತು. ಯಾದವ್ ಅವರ ವೈಯಕ್ತಿಕ 4ನೇ ಓವರ್ನಲ್ಲೂ ಮತ್ತೆ ಅದೇ ಪುನರಾವರ್ತನೆಯಾಗಿದ್ದರಿಂದ ಧೋನಿ, ಯಾದವ್ ಅವರನ್ನು ಕರೆದು ಫೀಲ್ಡಿಂಗ್ನಲ್ಲಿ ಕೆಲವು ಬದ ಲಾವಣೆಗೆ ಸೂಚಿಸಿದ್ದರು. ಆದರೆ, ಇದಕ್ಕೆ ಯಾದವ್ ಒಪ್ಪಲಿಲ್ಲ. ಕೂಡಲೇ ಸಿಟ್ಟಾದ ಧೋನಿ, “ನನ್ನನ್ನು ಹುಚ್ಚನೆಂದು ತಿಳಿದಿದ್ದೀಯ? 300 ಏಕದಿನ ಪಂದ್ಯಗಳಿಂದ ಗಳಿಸಿದ ಅನುಭವ ಸುಮ್ಮನೇನಾ….?’ ಎಂದು ರೇಗಿದರು.
ಕೂಡಲೇ ಜಾಗೃತರಾದ ಯಾದವ್, ಧೋನಿಯ ಸಲಹೆ ಯಂತೆ ಫೀಲ್ಡಿಂಗ್ನಲ್ಲಿ ಬದಲಾವಣೆ ಮಾಡಿದರು. ಪರಿಣಾಮ, ರನ್ ಗತಿಗೆ ಕಡಿವಾಣ ಬಿತ್ತಲ್ಲದೆ, ಆ ಓವರ್ನಲ್ಲಿ 2 ವಿಕೆಟ್ ಕೂಡ ಲಭಿಸಿತು ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.