ಧರ್ಮಸಂಸದ್ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ
Team Udayavani, Jul 24, 2018, 11:21 AM IST
ಬೆಳ್ತಂಗಡಿ : ಮುಂದಿನ ಜನಾಂಗಕ್ಕೆ ಮೌಲ್ಯಯುತ ಬೋಧನೆಯನ್ನು ನೀಡುವ ನಿಟ್ಟಿನಲ್ಲಿ ಮಕ್ಕಳಿಗೆ ಧರ್ಮಶಿಕ್ಷಣ ನೀಡುವುದು ಅಗತ್ಯ. ಇದೇ ಉದ್ದೇಶದಿಂದ ಧರ್ಮಸಾಮ್ರಾಜ್ಯ ಸ್ಥಾಪನೆಗಾಗಿ ಶ್ರೀ ರಾಮ ಕ್ಷೇತ್ರದಲ್ಲಿ ಧರ್ಮ
ಸಂಸದ್ ಮೇಳೈಸಲಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಸೆ. 3ರಂದು ನಡೆಯುವ ಧರ್ಮ ಸಂಸದ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಧರ್ಮ ಸಂಸದ್ನಲ್ಲಿ ದೇಶದ ವಿವಿಧ ಭಾಗಗಳ ಸುಮಾರು 2,000 ಸಂತರು ಭಾಗವಹಿಸಲಿದ್ದು, ವಿವಿಧ ನಾಯಕರೂ ಪಾಲ್ಗೊಳ್ಳಲಿದ್ದಾರೆ. ವಸತಿ, ವಾಹನ ವ್ಯವಸ್ಥೆ ಮಾಡಲಾಗುತ್ತಿದ್ದು, ಸುಮಾರು 500 ಮಂದಿ ಸ್ವಯಂ ಸೇವಕರ ಅಗತ್ಯವಿದೆ. ಈ ಕಾರ್ಯವನ್ನು ಎಲ್ಲರೂ ತಮ್ಮ ಮನೆಯ ಕಾರ್ಯ ಎಂದು ತಿಳಿದುಕೊಂಡು ಯಶಸ್ವಿಗೊಳಿಸಲು ಸ್ವಾಮೀಜಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯಶಸ್ಸಿನ ಕುರಿತು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಎಸ್ಡಿಎಂ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ| ಯಶೋವರ್ಮ, ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಅವರು ಮಾತನಾಡಿದರು.
ಮಾಜಿ ಶಾಸಕ ಪ್ರಭಾಕರ ಬಂಗೇರ, ಪ್ರಮುಖರಾದ ಸೀತಾರಾಮ ತೋಳ್ಪಡಿತ್ತಾಯ, ಭುಜಬಲಿ ಧರ್ಮಸ್ಥಳ, ಪ್ರತಾಪಸಿಂಹ ನಾಯಕ್, ಸುಜಿತಾ ವಿ. ಬಂಗೇರ, ಕೊರಗಪ್ಪ ನಾಯ್ಕ, ಚಂದನ್ ಕಾಮತ್, ಜಯರಾಮ ಶೆಟ್ಟಿ, ಸೋಮನಾಥ ಬಂಗೇರ ವರ್ಪಾಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಧಾನ ಸಂಚಾಲಕ ಸತ್ಯಜಿತ್ ಸುರತ್ಕಲ್ ಪ್ರಸ್ತಾವನೆಗೈದರು. ತಾಲೂಕು ಸಂಚಾಲಕ ಸಂಪತ್ ಸುವರ್ಣ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.