ಹಸುವಿಗೆ ಚಿತ್ರಹಿಂಸೆ ನೀಡಿ ಕೊಂದ ದುಷ್ಕರ್ಮಿಗಳು
Team Udayavani, Jul 29, 2018, 12:02 PM IST
ಕೆ.ಆರ್.ಪುರ: ಮದ್ಯದ ಅಮಲಿನಲ್ಲಿ ಕೆಲ ದುಷ್ಕರ್ಮಿಗಳು ಹಸುವೊಂದಕ್ಕೆ ಚಿತ್ರಹಿಂಸೆ ನೀಡಿ ಕೊಂದಿರುವ ಘಟನೆ ಸಮೀಪದ ಭಟ್ಟರಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಎಂಬುವವರ ಮನೆ ಎದುರು ಕಟ್ಟಿಹಾಕಿದ್ದ ಹಸುವನ್ನು ಶುಕ್ರವಾರ ರಾತ್ರಿ ಬಿಚ್ಚಿಕೊಂಡು ಹೋದ ದುಷ್ಕರ್ಮಿಗಳು, ಆಂಜನೇಯಸ್ವಾಮಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿನ ನಿರ್ಮಾಣ ಹಂತದ ಮನೆಗೆ ಅದನ್ನು ಎಳೆದೊದ್ದಿದ್ದಾರೆ. ನಂತರ ಹಸುವಿನ ಕಾಲುಗಳನ್ನು ಕಟ್ಟಿ, ಮದ್ಯದ ಬಾಟಲಿಯಿಂದ ಗುಪ್ತಾಂಗ ಹಾಗೂ ಕೆಚ್ಚಲಿಗೆ ಚುಚ್ಚಿ ಕೊಂದಿದ್ದಾರೆ.
ನಾರಾಯಣಪ್ಪ ಅವರು 15 ಹಸುಗಳನ್ನು ಸಾಕಿದ್ದು, ರಾತ್ರಿ ಒಂದು ಹಸು ಕಾಣದಿದ್ದಾಗ ಇಡೀ ರಾತ್ರಿ ಹಸುವಿಗಾಗಿ ಹುಡುಕಾಡಿದರೂ ದೊರೆತಿಲ್ಲ. ಶನಿವಾರ ಬೆಳಗ್ಗೆ ನಿರ್ಮಾಣ ಹಂತದ ಮನೆ ಬಳಿ ಹಸು ಮೃತಪಟ್ಟಿರುವುದನ್ನು ಕಂಡ ದಾರಿ ಹೋಕರು, ಗ್ರಾಮಕ್ಕೆ ಬಂದು ವಿಷಯ ತಿಳಿಸಿದ್ದಾರೆ.