ಪೌರ ಕಾರ್ಮಿಕರ “ಗೋಳು ನೂರೇಳು
Team Udayavani, Jul 30, 2018, 6:00 AM IST
ರಾಜ್ಯದಲ್ಲಿ 35,000ಕ್ಕೂ ಹೆಚ್ಚು ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಆದರೆ, ವರ್ಷ ಕಳೆದರೂ ಅದು ಇನ್ನೂ ಕಾರ್ಯಗತವಾಗಿಲ್ಲ. ನಿಯಮಾನುಸಾರ ಪೌರಕಾರ್ಮಿಕರಿಗೆ ನೀಡಬೇಕಾದ ವೇತನ, ಭತ್ಯೆ, ಸ್ವಚ್ಚತಾ ಕಾರ್ಯಕ್ಕೆ ಅಗತ್ಯವಾದ ಸಲಕರಣೆ, ರಜೆ, ಆರೋಗ್ಯ ಸೌಲಭ್ಯ, ಕಾಯಂ ನೌಕರಿ, ಪ್ರತಿ ತಿಂಗಳ ವೇತನ ಬಿಡುಗಡೆ ಮತ್ತಿತರ ಬೇಡಿಕೆಗಳು ಬಾಕಿ ಉಳಿದುಕೊಂಡಿವೆ. ಹೀಗೆ ಪೌರಕಾರ್ಮಿರ ಸಂಕಷ್ಟ, ಅವರ ಮೇಲಾಗುತ್ತಿರುವ ದೌರ್ಜನ್ಯ, ವೇತನ ಜಮೆ ಆಗದಿರುವುದು, ಪೌರಕಾರ್ಮಿಕರ ಮೇಲಿನ ಒತ್ತಡ ಮತ್ತಿತರ ವಿಷಯಗಳ ಕುರಿತಾಗಿ ರಾಜ್ಯದ 11 ಮಹಾನಗರಪಾಲಿಕೆಗಳ ಸ್ಥಿತಿ-ಗತಿ ಕುರಿತು “ಉದಯವಾಣಿ’ ಬೆಳಕು ಚೆಲ್ಲುವ ಪ್ರಯತ್ನ ನಡೆಸಿದೆ.
ಸ್ಥಳೀಯ ಸಂಸ್ಥೆಗಳ ಅಡ್ಡಗಾಲು
ಗುತ್ತಿಗೆ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿ, ನಗರ ಸಭೆ ಹಾಗೂ ಮಹಾನಗರ ಪಾಲಿಕೆಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗುತ್ತಿಗೆದಾರರಿಂದ ಆಗುತ್ತಿದ್ದ ತೊಂದರೆ ತಪ್ಪಿಸುವ ಉದ್ದೇಶದಿಂದ ಸರ್ಕಾರ ಈಗಾಗಲೇ ಕನಿಷ್ಠ ವೇತನ ಅನುಷ್ಠಾನಗೊಳಿಸಿ, ನೇರವಾಗಿ ಕಾರ್ಮಿಕರ ಖಾತೆಗೆ ಸೇರುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಸರ್ಕಾರವೇ ನೇಮಕಾತಿಗೆ ಅನುಮೋದಿಸಿದರೂ ಸ್ಥಳೀಯ ಸಂಸ್ಥೆಗಳು ಮಾತ್ರ ಮುಂದಾಗುತ್ತಿಲ್ಲ.
ಹದಿನೈದು ಸಾವಿರ ಕಾರ್ಮಿಕರ ನೇಮಕ ಅಗತ್ಯ
ಬಿಬಿಎಂಪಿಗೆ ಒಟ್ಟು 8 ಸಾವಿರ ಕಾಯಂ ಪೌರಕಾರ್ಮಿಕರ ಹುದ್ದೆಗಳು ಮಂಜೂರಾಗಿದ್ದು, ಸದ್ಯ ಪಾಲಿಕೆಯಲ್ಲಿ ಸುಮಾರು 2,500 ಕಾಯಂ ಪೌರಕಾರ್ಮಿಕರಿದ್ದಾರೆ. ಆ ಪ್ರಕಾರ 1.25 ಕೋಟಿ ಜನಸಂಖ್ಯೆಗೆ ಸುಮಾರು 15 ಸಾವಿರ ಪೌರ ಕಾರ್ಮಿಕರ ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಬಯೋಮೆಟ್ರಿಕ್ ಹಾಜರಾತಿಯಂತೆ 18 ಸಾವಿರ ಪೌರ
ಕಾರ್ಮಿಕರಿದ್ದಾರೆ. ಆ ಪೈಕಿ 15 ಸಾವಿರ ಮಂದಿಗೆ ಮಾತ್ರ ನೇರವಾಗಿ ವೇತನ ಪಾವತಿಯಾಗುತ್ತಿದೆ. ಉಳಿದ 3,341 ಪೌರಕಾರ್ಮಿಕರಿಗೆ ಕಳೆದ ಐದು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ಮಿಕರ ಪೈಕಿ 4,000 ಜನರನ್ನು ಕಾಯಂಗೊಳಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಪಾಲಿಕೆ ಆಸಕ್ತಿ ತೋರಿಲ್ಲ.
ಆರೋಗ್ಯ ರಕ್ಷಣೆಯಿಲ್ಲ
ವೇತನದಲ್ಲಿ ಕಡಿತಗೊಳ್ಳುವ ಇಎಸ್ಐ, ಪಿಎಫ್ ಹೊರಡುಪಡಿಸಿ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳು ಗುತ್ತಿಗೆ ಪೌರಕಾರ್ಮಿಕರಿಗೆ ದೊರೆಯುವುದಿಲ್ಲ. ಇನ್ನು ಕೆಲ ಗುತ್ತಿಗೆದಾರರು ಇಎಸ್ಐ ಹಾಗೂ ಪಿಎಫ್ ಪಾವತಿಸದಿರುವುದರಿಂದ ಕಾರ್ಮಿಕರು ಕಷ್ಟ ಅನುಭವಿಸಬೇಕಿದೆ. ಆದರೆ, ಕಾಯಂ ಪೌರಕಾರ್ಮಿಕರಿಗೆ ಹೆಚ್ಚಿನ ವೇತನ ದೊರೆಯುತ್ತಿದ್ದು, ಪಿಂಚಣಿ ವ್ಯವಸ್ಥೆ, ಮನೆ ಬಾಡಿಗೆ ಭತ್ಯೆ, ಬೋನಸ್, ವೈದ್ಯಕೀಯ ವಿಮೆ ಸೇರಿ ಸರ್ಕಾರದ “ಡಿ’ ದರ್ಜೆಯ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳು ದೊರೆಯುತ್ತವೆ.
ಸೌಲಭ್ಯ ಕಡ್ಡಾಯ?
ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರಿಗೆ ಸುಮಾರು 22 ಸೌಲಭ್ಯಗಳನ್ನು ಒದಗಿಸಬೇಕು. ವಿಶ್ರಾಂತಿ ಗೃಹ,ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಶುಚಿತ್ವ ಸೌಲಭ್ಯ, ಸಮವಸ್ತ್ರ , ಹ್ಯಾಂಡ್ ಗ್ಲೋವ್ಸ್, ಟೋಪಿ,ರಬ್ಬರ್ ಬೂಟುಗಳು, ಚಪ್ಪಲಿ, ಶುಚಿಗೊಳಿಸುವ ಸಾಧನಗಳು ಹಾಗೂ ಉಪಕರಣಗಳು, ಕಸಬರಿಗೆ, ತರಿಮಣಿ, ಕಳೆಗುದ್ದಲಿ, ಸಲಿಕೆ,ಮಾಸ್ಕ್, ಗಮೇಲ, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಸಾಧನ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಣೆ ಬಂಡಿಗಳು (ಪುಷ್ಕಾರ್ಟ್ಸ್), ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್ನ್ನು ಪಾಲಿಕೆಯಿಂದ ಒದಗಿಸಬೇಕು.
ದೌರ್ಜನ್ಯ ತಪ್ಪಿದ್ದಲ್ಲ
ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಗುತ್ತಿಗೆ ಪೌರಕಾರ್ಮಿಕರ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯಗಳು ವರದಿಯಾಗುತ್ತಿದ್ದರೂ, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವುದರಿಂದ ಕೆಲಸ ಹೋಗುತ್ತದೆ ಎಂಬ ಭಯದಿಂದ ಎಲ್ಲ ದೌರ್ಜನ್ಯಗಳನ್ನು ಸಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ರಾಜ್ಯದೆಲ್ಲೆಡೆಯೂ ಸೌಲಭ್ಯ ಕಗ್ಗಂಟು
ರಾಜಧಾನಿ ಬೆಂಗಳೂರಿನಲ್ಲಷ್ಟೇ ಈ ಸಮಸ್ಯೆ ಎಂದುಕೊಳ್ಳುವಂತಿಲ್ಲ. ಉಳಿದ ಕಡೆಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಒಂದೊಂದು ಕಡೆ ಒಂದೊಂದು ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿ ಸುತ್ತಲೇ ಇದೆ. ಬಳ್ಳಾರಿ, ಕಲಬುರಗಿ, ಶಿವಮೊಗ್ಗ, ವಿಜಯಪುರ, ತುಮಕೂರು, ಬೆಳಗಾವಿ, ಮೈಸೂರು, ದಾವಣಗೆರೆಗಳಲ್ಲಿ ಪೌರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.ರಾಜಧಾನಿಗಿಂತ ಉಳಿದ ನಗರಗಳಲ್ಲಿ ಪೌರಕಾರ್ಮಿಕರ ಸಮಸ್ಯೆ ಅತಿಹೆಚ್ಚು.
ಸಂಬಂಧಿಕರಿಂದಲೇ ಅರ್ಜಿ ಸಲ್ಲಿಕೆ
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ 176 ಪೌರ ಕಾರ್ಮಿಕರ ನೇರ ನೇಮಕಾತಿಗೆ ಪ್ರಕ್ರಿಯೆ ನಡೆಯುತ್ತಿದೆ. ಮೇಸ್ತ್ರಿ, ಸ್ಯಾನಿಟೇಷನ್ ಇನ್ಸ್ಪೆಕ್ಟರ್ಗಳು ತಮ್ಮ ಸಂಬಂಧಿ ಕರಿಂದ ಅರ್ಜಿ ಸಲ್ಲಿಸಿರುವುದು ಅಕ್ರಮಕ್ಕೆ ಕಾರಣ ಎನ್ನಲಾಗಿದೆ. ಬಳ್ಳಾರಿ ಪಾಲಿಕೆಗೆ ಒಟ್ಟು 650 ಪೌರಕಾರ್ಮಿಕರ ಅಗತ್ಯವಿದೆ. ಸದ್ಯ 178 ಕಾಯಂ, 465 ಗುತ್ತಿಗೆ ಸೇರಿ ಒಟ್ಟು 643 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಅಗತ್ಯವಿರುವ 465 ಪೌರಕಾರ್ಮಿಕರ ಬದಲಿಗೆ ಕೇವಲ 176 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 570 ಜನರಿಂದ ಅರ್ಜಿಗಳು ಸಲ್ಲಿಕೆಯಾಗಿವೆ.
ಕಾಯಂ ಆದೇಶ ಮಾತ್ರ ಬಾಕಿ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 258 ಕಾಯಂ ಪೌರ ಕಾರ್ಮಿಕರ ನೇಮಕಾತಿಗೆ ಕಳೆದ ಮಾರ್ಚ್ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲಾಗಿದೆ, ಆದರೆ ಕಾಯಂ ಕುರಿತಾಗಿ ಆದೇಶ ನೀಡಿಲ್ಲ.
ಪಾಲಿಕೆಯಲ್ಲಿ 1024 ಪೌರ ಕಾರ್ಮಿಕರು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ, ಕೇವಲ 181 ಮಂದಿ ಕಾಯಂ ಆಗಿದ್ದಾರೆ. ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೇ, ಜೀವವಿಮೆ
ಭಾಗ್ಯ ಯೋಜನೆ ಕಲ್ಪಿಸಲಾಗಿದ್ದು, ಇದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ಕಡು ಬಡವ 100 ಪೌರ ಕಾರ್ಮಿಕರಿಗೆ ರಾಜೀವ್ ಆವಾಸ ಯೋಜನೆ ಅಡಿ 100 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.
ಸಂಬಳ ಇಲ್ಲದೇ ಪರದಾಟ
ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಜಿಲ್ಲೆ ತುಮಕೂರನ್ನು ಶೈಕ್ಷಣಿಕ, ಸ್ಮಾರ್ಟ್ಸಿಟಿ ನಗರ ಎಂದು ಘೋಷಿಸಲಾಗಿದೆ. ಆದರೆ,ನಗರಕ್ಕೆ ಅಗತ್ಯವಿರುವಷ್ಟು ಪೌರಕಾರ್ಮಿಕರಿಲ್ಲ. ಮಾಸಿಕ ವೇತನವನ್ನು ಸರಿಯಾಗಿ ನೀಡುತ್ತಿಲ್ಲ. ಕನಿಷ್ಠ ಇಎಸ್ಐ, ಪಿಎಫ್ ಸೌಲಭ್ಯಗಳೂ ಇಲ್ಲ. ತುಮಕೂರು ಮಹಾನಗರ ಪಾಲಿಕೆಯಲ್ಲಿ 53 ಕಾಯಂ ನೌಕರರು, ಮತ್ತು ಮೇ ತಿಂಗಳಲ್ಲಿ ಕಾಯಂ ಆಗಿರುವ 96 ನೌಕರರು, ಸಮಾನ ವೇತನ ಆಧಾರದ ಮೇಲೆ 362 ಕಾರ್ಮಿಕರು, 150 ಗುತ್ತಿಗೆ ಕಾರ್ಮಿಕರು, ನೀರು ಸರಬರಾಜು ವಿಭಾಗದಲ್ಲಿ 80 ಕಾಯಂ ನೌಕರರು, 216 ದಿನಗೂಲಿ ನೌಕರರು, ಕಂಪ್ಯೂಟರ್
ಆಪರೇಟರ್ 15 ಸೇರಿ 972ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಹದಿನೈದು ವರ್ಷದಿಂದ ಹೋರಾಟ “ಕಾಯಂ’
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 242 ಮಂದಿ ಗುತ್ತಿಗೆ ಪೌರ ಕಾರ್ಮಿಕರು ಕಾಯಂಗೆ ಹೋರಾಟ ನಡೆಸುತ್ತಿದ್ದಾರೆ. 170 ಮಂದಿ ಕಾಯಂ ನೌಕರರಿದ್ದು, 242 ಮಂದಿ ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಕೆಲಸಕ್ಕೆ ಸಂಬಂಧಿಸಿ ದೂರುಗಳು ಮುಂದುವರಿದಿವೆ. “ಪ್ರತಿ ವಾರ್ಡ್ಗೆ ಕನಿಷ್ಠ 15 ಜನ ಬೇಕು. ಆದರೆ ನಮ್ಮಲ್ಲಿ 5 ರಿಂದ 6 ಜನ ಇದ್ದಾರೆ. ಪ್ರತಿ ವಾರ್ಡ್ ಸಮಸ್ಯೆ ಮುಗಿಸಿಕೊಂಡು ಬರುವಷ್ಟರಲ್ಲಿ 15 ದಿನ ಕಳೆದಿರುತ್ತದೆ. ಸರಕಾರದ ಪ್ರಕಾರ ಜನಸಂಖ್ಯೆ ಆಧಾರದ ಮೇಲೆ ಕಾರ್ಮಿಕರ ನೇಮಕ ಮಾಡಬೇಕಾದರೆ 300 ಜನ ಬೇಕು’ ಎನ್ನುತ್ತಾರೆ ಮೇಯರ್ ನಾಗರಾಜ ಕಂಕಾರಿ.
ನಾಲ್ಕಾರು ತಿಂಗಳಾದರೂ ಸಂಬಳವಿಲ್ಲ
ಮಹಾನಗರ ಪಾಲಿಕೆಯಾಗಿ ವಿಜಯಪುರ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೆ ಏರಿದ ಬಳಿಕವೂ ಪೌರ ಕಾರ್ಮಿಕರ ಸಮಸ್ಯೆ, ಶೋಷಣೆ ನಿಂತಿಲ್ಲ. ಹೊರಗುತ್ತಿಗೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ 185 ಹುದ್ದೆಗೆ ಅರ್ಜಿ ಕರೆದರೂ ವಿವಿಧ ಮೀಸಲು ಸೇರಿ ಷರತ್ತಿನ ವ್ಯಾಪ್ತಿಯಲ್ಲಿ ಕಾಯಂ ನೇಮಕವಾದವರು 75 ಕಾರ್ಮಿಕರು ಮಾತ್ರ. ಇದರ ಹೊರತಾಗಿ ನಾಲ್ಕು ಖಾಸಗಿ ಸಂಸ್ಥೆಗಳ ಮೂಲಕ 450ಕ್ಕೂ ಅಧಿಕ ಪೌರ ಕಾರ್ಮಿಕರು ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ 300ಕ್ಕೂ ಅಧಿಕ ಪೌರ ಕಾರ್ಮಿಕರ ವಯೋಮಿತಿ ಮೀರಿದೆ.
ಕಾಯಂ ನಿರೀಕ್ಷೆಯಲ್ಲಿ ಪೌರ ಕಾರ್ಮಿಕರು
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 270 ಪೌರ ಕಾರ್ಮಿಕರ ಕಾಯಂಗೆ ಪ್ರಕ್ರಿಯೆ ಚಾಲನೆಯಲ್ಲಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 70 ಜನರನ್ನು ಕಾಯಂಗೊಳಿಸಿ, 200 ಜನರನ್ನು ನೇರ ಪಾವತಿ ಕಾರ್ಮಿಕರನ್ನಾಗಿ ನಿಯೋಜಿಸಲಾಗಿದೆ. ಆದರೆ, 270 ಜನರನ್ನೂ ಕಾಯಂ ಮಾಡಬೇಕು ಎನ್ನುವುದು ಅವರ ಬೇಡಿಕೆಯಾಗಿದೆ. ದಾವಣಗೆರೆಯ ಬೆಳವಣಿಗೆಗೆ ಅನುಗುಣವಾಗಿ 1,500 ರಿಂದ 2 ಸಾವಿರದಷ್ಟು ಕಾರ್ಮಿಕರು ಬೇಕು. ಆದರೆ, ಇರುವುದು 264 ಕಾಯಂ, 270 ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು. ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಮಾಸಿಕ 15,120 ರೂ.ವೇತನ ನೀಡಲಾಗುತ್ತಿದೆ.
ಬೇಕಿದೆ ಪ್ರತ್ಯೇಕ ಅನುದಾನ
ಪೌರ ಕಾರ್ಮಿಕರಿಗೆ ವೇತನ, ಪಿಂಚಣಿ ನೀಡಲು ಬೆಳಗಾವಿ ಮಹಾನಗರ ಪಾಲಿಕೆ ಅಸಮರ್ಥವಾಗಿದೆ. ಅನುದಾನ
ಕೊರತೆಯಿಂದ ಬಳಲುತ್ತಿದ್ದು, ವೇತನ, ಪಿಂಚಣಿ, ಭತ್ಯೆ ಸೇರಿ ಸೌಲಭ್ಯ ನೀಡಲು ತಡಕಾಡುತ್ತಿದೆ. 58 ವಾರ್ಡ್ಗಳಲ್ಲಿ 273 ಜನ ಕಾಯಂ ಹಾಗೂ 1099 ಮಂದಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಕಾರ್ಮಿಕರಿಗೆ 14,040 ರೂ. ವೇತನದಂತೆ ಪ್ರತಿ ತಿಂಗಳು ಪಾಲಿಕೆಯಿಂದ 1.80 ಕೋಟಿ ರೂ. ಪಾವತಿಸಬೇಕಾಗಿದೆ. 20 ರೂ. ಉಪಾಹಾರ ಭತ್ಯೆ ನೀಡಲಾಗುತ್ತಿದೆ. ಇಎಸ್ಐ ಹಾಗೂ ಪಿಎಫ್ ಹಣ ಕಾರ್ಮಿಕರ ಖಾತೆಗೆ ಜಮಾ ಆಗುತ್ತದೆ. 548 ಜನರನ್ನು ಖಾಯಂಗೊಳಿಸುವಂತೆ ಸರಕಾರದಿಂದ ನಿರ್ದೇಶನ ಬಂದಿದೆ.
ಜನನಾಯಕರು ಬಂದಾಗ ಮಾತ್ರ ಸೌಲಭ್ಯ
ಸತತ ಎರಡು ಬಾರಿ ದೇಶದ ನಂಬರ್ ಒನ್ ಸ್ವಚ್ಚನಗರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಮೈಸೂರಿನ
ಪೌರಕಾರ್ಮಿಕರು ಇಂದಿಗೂ ಸೂಕ್ತ ಸಂಬಳ ಪಡೆಯುತ್ತಿಲ್ಲ. ಮತ್ತಿತರೆ ಕಾರಣಗಳಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. 525 ಜನ ಕಾಯಂ ಪೌರಕಾರ್ಮಿಕರು ಹಾಗೂ 1,848 ಜನ ಗುತ್ತಿಗೆ ಪೌರ ಕಾರ್ಮಿಕರು ನಗರದ ಸ್ವಚ್ಚತೆ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಕೊಟ್ಟಿದ್ದೇ ಸಂಬಳವಾಗಿದೆ. ಮಂತ್ರಿಗಳು, ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಎಲ್ಲಾ ಸೌಲಭ್ಯ ದೊರೆಯುತ್ತದೆ ಎಂಬ ಆರೋಪವಿದೆ. ಬೆಳಗಿನ ಉಪಾಹಾರ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಆದೇಶವಿದ್ದರೂ ಕಳೆದ ಎರಡು ವರ್ಷಗಳಿಂದ ಇದು ಪಾಲನೆಯಾಗುತ್ತಿಲ್ಲ.