ಹೇಮೆ ಹಿನ್ನೀರಿನಲ್ಲಿ ಮುಳುಗಿದ ಚರ್ಚ್
Team Udayavani, Aug 1, 2018, 3:47 PM IST
ಹಾಸನ: ಭರ್ತಿಯಾದ ಹೇಮಾವತಿ ಜಲಾಶಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಈಗ ಜಲಾಶಯದ ಕ್ರಸ್ಟ್ಗೇಟ್ಗಳಲ್ಲಿ ನೀರಿನ ಹರಿವನ್ನು ಸ್ಥಗಿತಗೊಳಿಸಿದ ನಂತರ ಹೇಮಾವತಿ ಹಿನ್ನೀರಿನ ಪ್ರದೇಶಗಳು ಪ್ರವಾಸಿ ತಾಣ ಗಳಾಗಿವೆ. ಕೋನಾಪುರ ದ್ವೀಪ ಹಾಗೂ ಶೆಟ್ಟಿಹಳ್ಳಿಯ ಹಳೆಯ ಚರ್ಚ್ ಪ್ರವಾಸಿಗರನ್ನು ಸೆಳೆಯುತ್ತಿವೆ.
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿರುವ ಪುರಾತನ ಚರ್ಚ್ ತೇಲುವ ಹಡಗಿನಂತೆ ಗೋಚರಿಸುತ್ತಿದೆ. ಈ ಹಿಂದೆ ಕೆಲವು ಚಲನಚಿತ್ರಗಳ ಚಿತ್ರೀಕರಣದ ತಾಣ ವಾಗಿದ್ದ ಚರ್ಚ್ ಈಗ ಪ್ರವಾಸಿಗರ ತಾಣವಾಗಿದೆ. ಜಲಾಶಯದ ನೀರು ಇಳಿದ ಬೇಸಿಗೆಯ ಸಂದರ್ಭದಲ್ಲಿ ಯುವಜನರ ಮೋಜಿನ ತಾಣವಾಗುವ ಶೆಟ್ಟಿಹಳ್ಳಿ ಹಳೆಯ ಚರ್ಚ್ ಪರಿಸರ ಮಳೆಗಾಲದಲ್ಲಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.
1860 ರಲ್ಲಿ ಪ್ರಂಚ್ ಪಾದ್ರಿಗಳಾದ ಅಬ್ಬೆ – ದಬ್ಬೆ ಎಂಬುವರ ನೇತೃತ್ವದಲ್ಲಿ ನಿರ್ಮಾಣವಾಗಿದ್ದ ಚರ್ಚ್ ಹೇಮಾವತಿ ಜಲಾಶಯದ ನಿರ್ಮಾಣವಾಗಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಲುಗಡೆ ಮಾಡಿದ ನಂತರ ಮುಳುಗಡೆ ಪ್ರದೇಶವಾಯಿತು.
ಜಲಾಶಯವು ಭರ್ತಿಯಾದ ಸಂದರ್ಭದಲ್ಲಿ ಬಹುಪಾಲು ಮುಳುಗುವ ಚರ್ಚ್ ಮುಳುಗುವ ಹಡಗಿನಂತೆ ಗೋಚರಿಸುತ್ತದೆ. ಹಾಗಾಗಿ ಮಂಗಳೂರು -ಬೆಂಗಳೂರು ನಡುವೆ ಸಂಚ ರಿಸುವ ಪ್ರವಾಸಿಗರು ಸಮಯ ಸಿಕ್ಕರೆ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಿ ಫೋಟೋ ಕ್ಲಿಕ್ಕಿಸಿ ಕೊಂಡು ಹೋಗುತ್ತಾರೆ.
ಹಾಸನದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಶೆಟ್ಟಿಹಳ್ಳಿ ಪ್ರಮುಖ ಗ್ರಾಮ. ಹಾಸನದಿಂದ ಶಂಕರನಹಳ್ಳಿ – ಕಲ್ಲಹಳ್ಳಿ ಮಾರ್ಗವಾಗಿ ಶೆಟ್ಟಿಹಳ್ಳಿ ತಲಪ ಬಹುದು. ಹಾಸನ – ಅರಕಲಗೂಡು ರಸ್ತೆಯಲ್ಲಿ ಕಟ್ಟಾಯ ಗ್ರಾಮ ಕಡೆಯಿಂದಲೂ ಶೆಟ್ಟಿಹಳ್ಳಿಗೆ ಹೋಗಬಹುದು.
ಹೇಮಾವತಿ ಜಲಾಶಯದಲ್ಲಿ ಕಳೆದ 36 ವರ್ಷಗಳಿಂದ ನೀರು ನಿಲ್ಲಿಸಲಾಗುತ್ತಿದೆ. ಅಷ್ಟು ವರ್ಷಗಳಿಂದಲೂ ಶೆಟ್ಟಿಹಳ್ಳಿಯ
ಚರ್ಚ್ ಕೆಲವು ವರ್ಷಗಳ ಮಳೆಗಾಲದಲ್ಲಿ ಭಾಗಶಃ, ಜಲಾಶಯ ಭರ್ತಿಯಾದ ವರ್ಷ ದಲ್ಲಿ ಬಹುಪಾಲು ಮುಳುಗುತ್ತದೆ.
ಆದರೂ ಚರ್ಚ್ನ ಗೋಡೆಗಳು, ಕಮಾನುಗಳು ಮಾತ್ರ ಕುಸಿದು ಬಿದ್ದಿಲ್ಲ. ಇದು ಅಂದಿನ ಗುಣ ಮಟ್ಟದ ಕಾಮಗಾರಿಗೆ
ಸಾಕ್ಷಿಯಾದಂತಿದೆ. ಬೇಸಿಗೆ ಕಾಲದಲ್ಲಿ ನೀರು ಇಳಿದ ನಂತರ ಚರ್ಚ್ ಸುತ್ತಾಡಿ ಬರಬಹುದು. ಈಗ ನೀರು ತುಂಬಿರುವುದರಿಂದ ದೂರದಿಂದಲೇ ಚರ್ಚ್ನ ತುದಿಯ ಗೋಡೆಗಳು ಜಲ ರಾಶಿಯ ನಡುವೆ ಮಳುಗುತ್ತಿರುವ ಹಡಗಿನಂತಹ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.