ಪಶ್ಚಿಮ ಬಂಗಾಲದಲ್ಲಿ ಎನ್ಆರ್ಸಿ: ಬಿಜೆಪಿ ವಿರುದ್ಧ ಮಮತಾ ಆಕ್ರೋಶ
Team Udayavani, Aug 2, 2018, 7:13 PM IST
ಹೊಸದಿಲ್ಲಿ : ಪಶ್ಚಿಮ ಬಂಗಾಲದಲ್ಲಿ ಭಾರತೀಯ ಜನತಾ ಪಕ್ಷ ಎನ್ಆರ್ಸಿ ಯನ್ನು ಹೇಗೆ ಅನುಷ್ಠಾನಿಸುತ್ತದೆ ಎಂಬುದನ್ನು ನಾನು ನೋಡೇ ಬಿಡುತ್ತೇನೆ ಎಂಬುದಾಗಿ ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಯಾರೆಂದೇ ಜನರಿಗೆ ಗೊತ್ತಿಲ್ಲ. ಅವರು ಕೇವಲ ಗೂಂಡಾಗಳು ಎಂದಷ್ಟೇ ಇಲ್ಲಿನ ಜನರಿಗೆ ಗೊತ್ತಿರುವುದು. ಬಿಜೆಪಿಗೆ ಪಶ್ಚಿಮ ಬಂಗಾಲದಲ್ಲಿ ಅಸ್ತಿತ್ವವೇ ಇಲ್ಲ. ರಾಷ್ಟ್ರ ಮಟ್ಟದಲ್ಲೂ ಅದರ ಅಸ್ತಿತ್ವ ಈಗ ಪ್ರಶ್ನಾರ್ಹವಾಗಿದೆ. ಹಾಗಿರುವಾಗ ಅವರು ಪಶ್ಚಿಮ ಬಂಗಾಲದಲ್ಲಿ ಎನ್ ಆರ್ ಸಿ ಯನ್ನು ಹೇಗೆ ಅನುಷ್ಠಾನ ಮಾಡುತ್ತಾರೆ, ನೋಡೋಣ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಗುರುವಾರವಷ್ಟೇ ಬಿಜೆಪಿ ನಾಯಕರು “ಅಸ್ಸಾಂ ನಂತೆ ಪಶ್ಚಿಮ ಬಂಗಾಲದಲ್ಲೂ ಎನ್ಆರ್ಸಿ ಯ ಅಗತ್ಯವಿದೆ’ ಎಂದು ಹೇಳಿರುವುದಕ್ಕೆ ಮಮತಾ ಕಟುವಾಗಿ ಪ್ರತಿಕ್ರಿಯಿಸಿದರು.
ಅಸ್ಸಾಂ ಎನ್ಆರ್ಸಿಯಲ್ಲಿ ದಾಖಲಾಗದ ಸುಮಾರು 40 ಲಕ್ಷ ಜನರು ಅಕ್ರಮ ವಲಸಿಗರೆಂಬ ಹಣೆ ಪಟ್ಟಿಗೆ ಗುರಿಯಾಗಿ ಕಾನೂನು ಕ್ರಮಕ್ಕೆ ಈಡಾಗುವ ಸಾಧ್ಯತೆಗಳು ದಟ್ಟವಾಗಿರುವಾಗಲೇ ಪಶ್ಚಿಮ ಬಂಗಾಲದಲ್ಲೂ ಎನ್ಆರ್ಸಿ ಯ ಅಗತ್ಯವಿದೆ ಎಂದು ಬಿಜೆಪಿ ನಾಯಕರು ಹೇಳಿರುವುದು ಮಮತಾ ಆಕ್ರೋಶಕ್ಕೆ ಕಾರಣವಾಗಿದೆ.
ಅಸ್ಸಾಂ ಎನ್ಆರ್ಸಿ ಯಿಂದ ಹೊರಗುಳಿದಿರುವ 40 ಲಕ್ಷ ಮಂದಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮುಸ್ಲಿಮರು ಇರುವುದು “ತುಷ್ಟೀಕರಣ ರಾಜಕಾರಣದ ಹರಿಕಾರರಿಗೆ ತೀವ್ರ ಆತಂಕ ಉಂಟುಮಾಡಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.