ಮಾಜಿ ಪ್ರಧಾನಿ, ಕವಿ ವಾಜಪೇಯಿ ನಿಧನಕ್ಕೆ ಮರುಗಿದ ಬಾಲಿವುಡ್
Team Udayavani, Aug 16, 2018, 6:59 PM IST
ಮುಂಬಯಿ : 93ರ ಹರೆಯದಲ್ಲಿ ಇಂದು ಅಸ್ತಂಗತರಾದ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ಮರುಗಿದೆ.
ಬಾಲಿವುಡ್ ಗಾನ ಕೋಗಿಲೆ ಎಂದೇ ಖ್ಯಾತಿವೆತ್ತಿರುವ ಭಾರತ ರತ್ನ ಲತಾ ಮಂಗೇಶ್ಕರ್ ಅವರು “ನನ್ನ ತಂದೆ ನಿಧನ ಹೊಂದಿದ್ದಾಗ ನನಗೆ ಎಷ್ಟು ನೋವಾಗಿತ್ತೋ ಅಷ್ಟೇ ನೋವು ಈಗ ವಾಜಪೇಯಿ ನಿಧನದಿಂದ ಆಗಿದೆ’ ಎಂದು ದುಃಖೀಸಿದ್ದಾರೆ. ಅಗಲಿದ ವಾಜಪೇಯಿ ಅವರ ಆತ್ಮಕ್ಕೆ ಭಗವಂತನು ಚಿರ ಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ತಮಿಳು ಮೆಗಾಸ್ಟಾರ್ ರಜನಿಕಾಂತ್ ಅವರು ವಾಜಪೇಯಿ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ನಿಧನದೊಂದಿಗೆ ಒಂದು ಯುಗವೇ ಅಂತ್ಯಗೊಂಡಿತು ಎಂದು ಲೇಖಕ ನಟ ಸುಹೇಲ್ ಸೇಟ್ ಹೇಳಿದ್ದಾರೆ.
‘ವಾಜಪೇಯಿ ಅವರಂತೆ ನಮ್ಮ ಎಲ್ಲ ಹಿರಿಯರು, ನಾಯಕರು ಇರಬೇಕೆಂದು ನಾವು ಸದಾ ಇಷ್ಟಪಡುತ್ತೇವೆ; ಅಂತಹ ಮಹೋನ್ನತ ವ್ಯಕ್ತಿ ತೀರಿಕೊಂಡದ್ದಕ್ಕೆ ದುಃಖವಾಗಿದೆ’ ಎಂದು ಸೋನಾ ಮೋಹಪಾತ್ರ ಹೇಳಿದ್ದಾರೆ.
ಖ್ಯಾತ ಲೇಖಕ ಚೇತನ್ ಭಗತ್, ನಟ ಬೋಮನ್ ಇರಾನಿ, ವಿವೇಕ್ ಆನಂದ್ ಒಬೆರಾಯ್, ಧನುಷ್, ರಣದೀಪ್ ಹೂಡ, ಕೈಲಾಶ್ ಖೇರ್ ಮೊದಲಾದವರು ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.