ಹೆದ್ದಾರಿ, ಅಂಗಡಿಗಳು ಜಲಾವೃತ
Team Udayavani, Aug 17, 2018, 1:10 AM IST
ವೇಣೂರು: ನಿರಂತರವಾಗಿ ಸುರಿದ ಭಾರೀ ಮಳೆಗೆ ಗುರುವಾರ ವೇಣೂರು ಫಲ್ಗುಣಿ ನದಿಯ ಪ್ರವಾಹದಿಂದ ಶ್ರೀರಾಮ ನಗರದಲ್ಲಿ ಗೋಡೌನ್ ಸಹಿತ 4 ಅಂಗಡಿಗಳು ಮುಳುಗಡೆಗೊಂಡವು. ವೇಣೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯ ವೇಣೂರು ಚರ್ಚ್ ಬಳಿ ಹೆದ್ದಾರಿ ಮುಳುಗಡೆಗೊಂಡು ವಾಹನ ಸಂಚಾರ ಸಂಪೂರ್ಣ ಸಂಪರ್ಕ ಕಡಿತಗೊಂಡಿತು. ಪ್ರಯಾಣಿಕರಿಗೆ ಪೊಲೀಸರು ಹಾಗೂ ವೇಣೂರು ವಾಹನ ಚಾಲಕರು ಹೆದ್ದಾರಿ ದಾಟಲು ಸಹಕರಿಸಿದರು. ವೇಣೂರಿನಿಂದ ಅಳದಂಗಡಿಗೆ ಸಂಪರ್ಕಿಸುವ ಪೆರ್ಮುಡದಲ್ಲೂ ನದಿ ಪ್ರವಾಹ ನಡೆದು ರಸ್ತೆ ಸಹಿತ ಕಂಬಳ ಕ್ರೀಡಾಂಗಣ ಜಲಾವೃತಗೊಂಡಿತು.
ವೇಣೂರು ನಾರಾವಿ ರಸ್ತೆಯ ಅಂಡಿಂಜೆಯಲ್ಲೂ ನದಿ ಉಕ್ಕಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತು. ಪ್ರಯಾಣಿಕರು ಮೂಡು ಕೋಡಿ-ನೆಲ್ಲಿಂಗೇರಿ ಮಾರ್ಗದಲ್ಲಿ ಸುತ್ತು ಬಳಸಿ ಪ್ರಯಾಣಿಸುವಂತಾಯಿತು. ವೇಣೂರಿನಿಂದ ಸಿದ್ದಕಟ್ಟೆಗೆ ಸಂಪರ್ಕ ಕಲ್ಪಿಸುವ ಆರಂಬೋಡಿಯಲ್ಲೂ ಪ್ರವಾಹ ರಸ್ತೆಗೆ ಹರಿದು ಕೆಲವು ಹೊತ್ತು ಸಂಪರ್ಕ ಕಡಿತ ಗೊಂಡಿತು. ಶಾಸಕ ಹರೀಶ್ ಪೂಂಜ, ಲೋಕೋಪಯೋಗಿ ಇಲಾಖೆಯ ಸ. ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ ಭೇಟಿ ನೀಡಿದರು.