30ರೊಳಗೆ ಜಾಹೀರಾತು ನೀತಿ ಸಲ್ಲಿಕೆಗೆ ಕೋರ್ಟ್ ಸೂಚನೆ
Team Udayavani, Aug 22, 2018, 12:24 PM IST
ಬೆಂಗಳೂರು: ಬೆಂಗಳೂರು ನಗರಕ್ಕೆ ಅನ್ವಯವಾಗುವಂತೆ ರೂಪಿಸಲಾಗುತ್ತಿರುವ ಜಾಹೀರಾತು ನೀತಿಯನ್ನು ಆಗಸ್ಟ್ 30ರೊಳಗೆ ಸಲ್ಲಿಸಿ ಎಂದು ಹೈಕೋರ್ಟ್ ಪಾಲಿಕೆಗೆ ನಿರ್ದೇಶನ ನೀಡಿದೆ.
ಈ ಕುರಿತ ಅರ್ಜಿ ವಿಚಾರಣೆಗಳನ್ನು ಮಂಗಳವಾರ ನಡೆಸಿದ ಮುಖ್ಯ ನ್ಯಾ ದಿನೇಶ್ ಮಹೇಶ್ವರಿ ಹಾಗೂ ಆರ್. ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಬೆಂಗಳೂರು ನಗರ ಹೊರವಲಯದಲ್ಲಿ ಇನ್ನೂ ಫ್ಲೆಕ್ಸ್ ಹಾಕುತ್ತಿದ್ದು, ತೆರವುಗೊಳಿಸುತ್ತಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ, ಅಂತಹ ಗ್ರಾಪಂ ಗಳನ್ನು ಈ ಅರ್ಜಿಗೆ ಪ್ರತಿವಾದಿಯನ್ನಾಗಿ ಪರಿಗಣಿಸಿ ಎಂದು ಸೂಚಿಸಿತು.
ಅಲ್ಲದೆ, ರಾಜ್ಯದ ಇತರೆ ಪಾಲಿಕೆಗಳಲ್ಲಿ ಅನುಸರಿಸಲಾಗುತ್ತಿರುವ ಜಾಹೀರಾತು ನೀತಿ ಕುರಿತು ಮಾಹಿತಿ ನೀಡಿ ಎಂದು ರಾಜ್ಯಸರ್ಕಾರಕ್ಕೆ ತಾಕೀತು ಮಾಡಿತು. ಅಲ್ಲದೆ, ಪದೇ ಪದೇ ಅಕ್ರಮವಾಗಿ ಫ್ಲೆಕ್ಸ್ಗಳನ್ನು ಹಾಕಿ ದಂಡ ಕಟ್ಟಿ ಪಾರಾಗುವವರ ಮಾಹಿತಿ ಸಂಗ್ರಹಿಸಿ. ಈ ಕುರಿತ ಪ್ರಕರಣಗಳ ಅಂಕಿ- ಅಂಶಗಳನ್ನು ಸಂಗ್ರಹಿಸಲು ರಾಜ್ಯ ಅಪರಾಧ ದತ್ತಾಂಶ ಸಂಗ್ರಹ ಘಟಕ(ಎಸ್ಸಿಆರ್ಬಿಗೆ) ಸೂಚಿಸಿತು.
ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಬೆಂಗಳೂರಿನ ಸೌಂದರ್ಯ ಕಾಪಾಡಲು ನ್ಯಾಯಪೀಠ ಸೂಚಿಸಿತು.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು, ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು 57 ಪ್ರಕರಣಗಳಲ್ಲಿ ಆರೋಪ ನಿಗದಿಪಡಿಸಲಾಗಿದೆ. ಜಾಹೀರಾತು ನೀತಿ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಜಾಹೀರಾತು ನೀತಿಯನ್ನು ಆಗಸ್ಟ್ 30ರೊಳಗಡೆ ಸಲ್ಲಿಸುವಂತೆ ನಿರ್ದೇಶಿಸಿ ಆ.31ಕ್ಕೆ ವಿಚಾರಣೆ ಮುಂದೂಡಿತು.