ವಿಚಾರಣೆ ವೇಳೆ ಕ್ಷಮೆ ಕೋರಿದ ಚಂದನ್ ಶೆಟ್ಟಿ
Team Udayavani, Aug 29, 2018, 11:45 AM IST
ಬೆಂಗಳೂರು: “ಅಂತ್ಯ’ ಎಂಬ ಸಿನಿಮಾಕ್ಕಾಗಿ ಗಾಂಜಾ ಪರ ಹಾಡು ಹಾಡಿ ವಿವಾದಕ್ಕೆ ಸಿಲುಕಿದ್ದ ರ್ಯಾಪರ್ ಚಂದನ್ ಶೆಟ್ಟಿ ಮಂಗಳವಾರ ಸಿಸಿಬಿ ವಿಚಾರಣೆಗೆ ಹಾಜರಾಗಿ ಕ್ಷಮೆ ಕೋರಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದ ಚಂದನ್ ಶೆಟ್ಟಿ, ಮಹಿಳೆ ಮತ್ತು ಮಾದಕ ವಸ್ತು ತಡೆ ದಳದ ಎಸಿಪಿ ಮೋಹನ್ ಕುಮಾರ್ ಎದುರು ವಿಚಾರಣೆಗೆ ಹಾಜರಾಗಿದ್ದು, ಮೂರೂವರೆ ಗಂಟೆ ವಿಚಾರಣೆ ನಡೆಸಿ ಚಂದನ್ ಶೆಟ್ಟಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಗಾಂಜಾ ಸೇವನೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಹಾಡು ಹಾಡಿಲ್ಲ. ಮತ್ತೆ ಆ ರೀತಿಯ ತಪ್ಪು ಮಾಡುವುದಿಲ್ಲ ಎಂದು ಚಂದನ್ ಕ್ಷಮೆ ಕೋರಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ, ನನ್ನ ಕರಿಯರ್ನ ಆರಂಭದ ದಿನಗಳಲ್ಲಿ ಅಂತ್ಯ ಸಿನಿಮಾಗಾಗಿ ಹಾಡು ಹಾಡಿದ್ದೆ. ಆಗ ನಾನು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ.
ಹೀಗಾಗಿ ಮೂರು ವರ್ಷದ ಬಳಿಕ ಈ ಹಾಡು ಈ ರೀತಿಯ ತಿರುವು ಪಡೆದುಕೊಂಡಿದೆ. ನಾನು ಮಾದಕ ವಸ್ತುಗಳ ವಿರುದ್ಧ ಹೋರಾಡುತ್ತೇನೆ. ಮಾದಕ ವಸ್ತುಗಳನ್ನು ಸೇವನೆ ಮಾಡಬಾರದು ಎಂದು ಸಂದೇಶ ಇರುವ ಹಾಡನ್ನು ನಾನೇ ರಚಿಸುತ್ತೇನೆ. ಮತ್ತೂಮ್ಮೆ ಈ ರೀತಿಯ ಹಾಡು ರಚಿಸದಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.