ಬಿಲ್ಲವರ ಅಸೋಸಿಯೇಶನ್ ಭಾಯಂದರ್: ಗುರುಜಯಂತಿ
Team Udayavani, Sep 18, 2018, 4:27 PM IST
ಮುಂಬಯಿ: ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಧ್ಯಾತ್ಮಿಕ ತತ್ವದರ್ಶದ ಹಾದಿ ಆರಿಸಿಕೊಂಡವರು ಬ್ರಹ್ಮಶ್ರೀ ನಾರಾಯಣ ಗುರುಗಳು ಬದುಕು, ಬೋಧನೆಗಳಿಂದ ಅನೇಕತೆಯಲ್ಲಿ ಏಕತೆ ಮೈಗೂಡಿಸಿಕೊಂಡು ಮಹಾನ್ ದಾರ್ಶನಿಕನಾಗಿ ವಿಶ್ವಮಾನ್ಯತೆಯನ್ನು ಪಡೆದವರು. ಅಸ್ಪೃಶ್ಯತೆಯನ್ನು ನಿರ್ಮೂಲನಗೊಳಿಸಿ, ಆತ್ಮ ವಿಶ್ವಾಸದಿಂದ ಬದುಕುವಂತಾಗಲು ಸಂಘಟನೆಯ ಪಾತ್ರ ಹಿರಿದು ಎಂಬ ಅವರ ಸಂದೇಶವನ್ನು ಅನುಷ್ಠಾನ ಗೊಳಿಸುವುದೇ ಗುರುಜಯಂತಿಯ ಉದ್ದೇಶವಾಗಲಿ ಎಂದು ಮೀರಾ- ಭಾಯಂದರ್ ಶಾಸಕ ನರೇಂದ್ರ ಮೆಹ್ತಾ ನುಡಿದರು.
ಸೆ. 16ರಂದು ಭಾಯಂದರ್ ಪೂರ್ವದ ಜೆಸಾಲ್ ಪಾರ್ಕ್ನಲ್ಲಿರುವ ಇಂದ್ರವರುಣ್ ಸಭಾಗೃಹದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಸಮಿತಿಯ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿ ಆಚರಣೆಯ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕ್ರೀಡೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡಿ ಮಾನವ ಜನಾಂಗದ ಶ್ರೇಯೋಭಿವೃದ್ಧಿಗೆ ದುಡಿ ಯುವ ಮುಂಬಯಿ ಬಿಲ್ಲವರ ಅಸೋಸಿಯೇಶನ್ ಸನ್ನಡೆಯ ಭದ್ರತೆಯೊಂದಿಗೆ ಮೇಳೈಸುತ್ತಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವ ಪಾಲನೆಯೊಂದಿಗೆ ಸುಸಂಸ್ಕೃತ ದೇಶ ನಿರ್ಮಾಣಕ್ಕೆ ಮುಂದಾಗೋಣ ಎಂದು ನುಡಿದು ಶುಭಹಾರೈಸಿದರು.
ಸ್ಥಳೀಯ ನಗರ ಸೇವಕಿ, ಮೇಘನಾ, ನಗರ ಸೇವಕ ಮದನ್ ಸಿಂಗ್, ದೀಪಕ್ ರಾವಲ್ ಉಪಸ್ಥಿತರಿದ್ದು ಶುಭಹಾರೈಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಅವರು ಗುರು ಗಳ ವೃತ್ತಾಂತದ ಬಗ್ಗೆ ವಿವರಿಸಿ, ತ್ರಿಕರಣಪೂರ್ವಕ ಭಕ್ತಿಯಿಂದ ಭಗವಂತನ ಸಾಮೀಪ್ಯ ಹೊಂದಲು ಸಾಧ್ಯ. ಮಡಿಮೈಲಿಗೆಯಿಂದ ದೂರ ಸರಿದು ಮಾನವ ವರ್ಗದ ಸೇವೆ ಯಿಂದ ದೇವರನ್ನು ಕಾಣಬೇಕು ಎಂದರು.
ಭಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನರೇಶ್ ಕೆ. ಪೂಜಾರಿ ಅವರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಘುನಾಥ ಜಿ. ಹಳೆಯಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.
ಹರೀಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ಗಣಪತಿ, ಗುರು ಸ್ತೋತ್ರ, ಭಜನೆ, ಓಂ ನಮಃ ಶಿವಾಯ ಜಪಯಜ್ಞ, ಮಹಾಮಂಗಳಾರತಿ ಹಾಗೂ ಕೊನೆಯಲ್ಲಿ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಿತು.
ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಪ್ರಮೋದ್ ಕೆ. ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರು ಗಳಾದ ಉದಯ ಡಿ. ಸುವರ್ಣ ಮತ್ತು ವಾಸುದೇವ ಪೂಜಾರಿ, ಜತೆ ಕಾರ್ಯದರ್ಶಿ ಮಾಲತಿ ಆರ್. ಬಂಗೇರ, ಕೋಶಾಧಿಕಾರಿ ಅಶೋಕ್ ಎಸ್. ಪೂಜಾರಿ, ಜತೆ ಕೋಶಾಧಿಕಾರಿ ಕೃಷ್ಣ ಬಂಗೇರ, ಕೇಂದ್ರ ಕಚೇರಿಯ ಪ್ರತಿನಿಧಿ ಗಣೇಶ್ ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುಂದರ ಕೆ. ಪೂಜಾರಿ, ಚಿತ್ರಾಪು ಕೆ. ಎಂ. ಕೋಟ್ಯಾನ್, ಕುಸುಮಾ ಪೂಜಾರಿ, ವಾಮನ್ ಸಾಲ್ಯಾನ್, ಶಾಂತಾ ಎ. ಪೂಜಾರಿ, ಮೀರಾ ಅಮೀನ್, ವೆಂಕಟೇಶ್ ಟಿ. ಕೋಟ್ಯಾನ್, ಬಾಲಕೃಷ್ಣ ಸುವರ್ಣ, ವಿಶೇಷ ಆಮಂತ್ರಿತರು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದು ಗಣ್ಯರನ್ನು ಗೌರವಿಸಿದರು.
ಕೇಂದ್ರ ಕಚೇರಿ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಗುರುಭಕ್ತರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್