ಇಂಡೋನೇಶ್ಯ: ಭೂಕಂಪ, ಸುನಾಮಿ ಬಳಿಕ ಈಗ ಸಾಂಕ್ರಾಮಿಕ ರೋಗ ಭೀತಿ
Team Udayavani, Oct 6, 2018, 11:02 AM IST
ಪಾಲು, ಇಂಡೋನೇಶ್ಯ : ಭಾರೀ ಭೂಕಂಪ ಮತ್ತು ಸುನಾಮಿಗೆ ಅಪಾರ ಸಾವು ನೋವು, ನಾಶ ನಷ್ಟ ಅನುಭವಿಸಿರುವ ಇಂಡೋನೇಶ್ಯದ ಪಾಲು ನಗರದಲ್ಲೀಗ ಎಲ್ಲೆಂದರಲ್ಲಿ ಕೊಳೆತ ಶವಗಳು ಕಂಡು ಬರುತ್ತಿದ್ದು ನಾನಾ ಬಗೆಯ ಭೀಕರ ಸೋಂಕು ರೋಗಗಳು ಹರಡುವ ಭೀತಿ ಈಗ ತಲೆದೋರಿದೆ.
ಭೂಕಂಪ ಮತ್ತು ಸುನಾಮಿಗೆ ಬಲಿಯಾಗಿರುವವರ ಸಂಖ್ಯೆ ಈ ವರೆಗಿನ ಲಕ್ಕಾಚಾರದ ಪ್ರಕಾರ 1,571 ಆಗಿದೆ. ಸಮುದ್ರ ತಡಿಯ ನಗರವಾಗಿರುವ ಸುಲವೇಶಿ ದ್ವೀಪದಲ್ಲಿ ಸಾವಿರಕ್ಕೂ ಅಧಿಕ ಜನರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪ, ಸುನಾಮಿ ದುರಂತ ಸಂಭವಿಸಿ ಎಂಟು ದಿನಗಳ ಬಳಿಕ ಇದೀಗ ಈಗಿನ್ನು ಬದುಕುಳಿದವವರ ಬಗ್ಗೆ ಯಾವುದೇ ಆಶಾಕಿರಣ ಇಲ್ಲವಾಗಿದೆ. ಹಾಗಿದ್ದರೂ ಇಂಡೋನೇಶ್ಯದ ಅಧಿಕಾರಿಗಳು ಈಗಿನ್ನೂ ತಾವು ಬದುಕುಳಿದವರ ಶೋಧ ಕಾರ್ಯ ನಿಲ್ಲಿಸಿದ್ದೇವೆ ಎಂದು ಅಧಿಕೃತವಾಗಿ ಪ್ರಕಟಿಸಿಲ್ಲ.
ನಗರದ ಪೆಟೋಬೋ ಮತ್ತು ಬಲರೋವಾ ಪ್ರದೇಶಗಳಲ್ಲೀಗ ಎಲ್ಲೆಂದರಲ್ಲಿ ಕೊಳೆತ ಶವಗಳೇ ಕಂಡು ಬರುತ್ತಿವೆ. ಹಾಗಾಗಿ ಭೀಕರ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿ ಇದೆ. ನೆಲ, ಜಲ, ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಈಗ ನಮ್ಮ ಮೇಲಿದೆ ಎಂದು ಇಂಡೇಶ್ಯದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವಕ್ತಾರ ಯೂಸುಫ್ ಲತೀಫ್ ಹೇಳಿದ್ದಾರೆ.