ಉಪಚುನಾವಣೆ: “ಬೈಂದೂರಿನಲ್ಲಿ ಬಿಜೆಪಿಗೆ 50,000 ಲೀಡ್ ಗುರಿ’
Team Udayavani, Oct 14, 2018, 9:52 AM IST
ಉಡುಪಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರು 42,000 ಮತಗಳ ಮುನ್ನಡೆ ಪಡೆದಿದ್ದರು. ಈ ಬಾರಿ ಈ ಅಂತರವನ್ನು 50,000ಕ್ಕೆ ಹೆಚ್ಚಿಸಲು ಪಕ್ಷದಿಂದ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಅಭ್ಯರ್ಥಿ ಬಿ.ವೈ. ರಾಘವೇಂದ್ರ ಈ ಹಿಂದೆ ಸಂಸದರಾಗಿದ್ದಾಗ ಬೈಂದೂರಿನಲ್ಲಿ ನಿಕಟ ಸಂಪರ್ಕ ಹೊಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 25,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯೂ ಉತ್ತಮ ಸಿದ್ಧತೆ ನಡೆದಿದೆ.ಹಾಗಾಗಿ ಹೆಚ್ಚಿನ ಅಂತರದ ಗೆಲುವು ಸಾಧ್ಯವಾಗಲಿದೆ ಎಂದವರು ತಿಳಿಸಿದರು.
19ರಂದು ಯಡಿಯೂರಪ್ಪ ಸಭೆ
ವಿಧಾನಸಭೆ ವಿಪಕ್ಷ ನಾಯಕ ಯಡಿಯೂರಪ್ಪ ಅ.18ರಂದು ರಾತ್ರಿ ಬೈಂದೂರಿಗೆ ಆಗಮಿಸಿ 19ರಂದು ಕೊಲ್ಲೂರಿನಲ್ಲಿ ಚಂಡಿಕಾಯಾಗ, ಅನಂತರ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ.15ರಂದು ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಬೈಂದೂರು, ಉಡುಪಿ ಭಾಗದ ಜನಪ್ರತಿನಿಧಿಗಳು, ಕಾರ್ಯಕರ್ತರು ಶಿವಮೊಗ್ಗಕ್ಕೆ ತೆರಳಲಿದ್ದಾರೆ ಎಂದು ಮಟ್ಟಾರು ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಗೊಂದಲ
ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಇನ್ನೂ ಆಗಿಲ್ಲ.
ಕಾಂಗ್ರೆಸ್ ಸ್ಪರ್ಧೆ ಮಾಡುವುದೋ ಜೆಡಿಎಸೊ ಎಂಬುದು ತೀರ್ಮಾನವಾಗಿಲ್ಲ. ಆ ಪಕ್ಷಗಳಿಗೆ ಶಿವಮೊಗ್ಗದಲ್ಲಿ ಹಿಡಿತವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಮಟ್ಟಾರು ಹೇಳಿದರು.
ನೀತಿಸಂಹಿತೆ: ಆಯೋಗಕ್ಕೆ ಪತ್ರ
ಚುನಾವಣೆ, ಮಳೆಗಾಲ ಹಾಗೂ ಈಗ ಮತ್ತೆ ನೀತಿಸಂಹಿತೆಯಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬದಲಾಯಿಸಿದ ಸರಕಾರದ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದೆ. ಈ ಹಿಂದೆ ಘೋಷಿಸಿದ ಮೀಸಲಾತಿಯಂತೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ನಡೆಸುವಂತೆ ನ್ಯಾಯಾಲಯ ಸೂಚಿಸಿದ್ದರೂ ಇದುವರೆಗೆ ಸರಕಾರ ನೋಟಿಫಿಕೇಶನ್ ಹೊರಡಿಸಿಲ್ಲ. ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ
ಮಾತ್ರ ಚುನಾವಣೆ ಇದ್ದರೂ ಇಡೀ ಜಿಲ್ಲೆಗೆ ನೀತಿಸಂಹಿತೆ ಅನ್ವಯಗೊಳಿಸಿರುವುದರಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸುವುದು ಅಸಾಧ್ಯವಾಗಿದೆ. ಹಾಗಾಗಿ ನೀತಿ ಸಂಹಿತೆಯನ್ನು ಬೈಂದೂರು ಕ್ಷೇತ್ರಕ್ಕೆ ಮಾತ್ರವೇ ಸೀಮಿತಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಮಟ್ಟಾರು ತಿಳಿಸಿದರು.
ಲೋಕಸಭಾ ಚುನಾವಣೆಗಾಗಿ ಸಿದ್ಧತೆಗಳು ನಡೆಯುತ್ತಿವೆ. ಸ್ವತ್ಛತಾ ಕಾರ್ಯಗಳು ನಡೆಯುತ್ತಿವೆ. ವಾಜಪೇಯಿ ಅವರ ಜೀವನಗಾಥೆಯನ್ನು ತಿಳಿಸುವ ಕೆಲಸ ಸೆ. 15ರಿಂದ ನಡೆಯುತ್ತಿದೆ. ಕವಿ ಸಮ್ಮೇಳನ, ರಕ್ತದಾನದಂತಹ ಕಾರ್ಯಕ್ರಮ ಗಳ ನ್ನೊಳಗೊಂಡ “ಕಾರ್ಯಾಂಜಲಿ’ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಮೂಲಕ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು. ಮಹಾತ್ಮಾ ಗಾಂಧಿಯವರ ಜನ್ಮದಿನದ 150ನೇ ವರ್ಷದ ಹಿನ್ನೆಲೆಯಲ್ಲಿ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 30 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಸರ್ದಾರ್ ವಲ್ಲಭಾ ಬಾಯ್ ಪಟೇಲ್ ಜನ್ಮದಿನ ಪ್ರಯುಕ್ತ ಅ. 13ರಂದು ರಾಷ್ಟ್ರೀಯ ಏಕತಾ ಓಟ ಯುವಮೋರ್ಚಾ ನೇತೃತ್ವದಲ್ಲಿ ನಡೆಯಲಿದೆ ಎಂದವರು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ನಗರಾಧ್ಯಕ್ಷ ಪ್ರಭಾಕರ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮರಳು ಸಮಸ್ಯೆ: ಡಿ.ಸಿ.ಗೆ ಯಾಕೆ ಸಾಧ್ಯವಿಲ್ಲ ?
ದ.ಕ. ಜಿಲ್ಲೆಯಲ್ಲಿ ಸಿಆರ್ಝಡ್ ವ್ಯಾಪ್ತಿಯಲ್ಲಿಯೂ ಮರಳುಗಾರಿಕೆಗೆ ಅಲ್ಲಿನ ಜಿಲ್ಲಾಧಿಕಾರಿ ಕ್ರಮ ತೆಗೆದು ಕೊಂಡಿದ್ದಾರೆ. ಆದರೆ ಉಡುಪಿ ಜಿಲ್ಲಾಧಿಕಾರಿ ಕುಂಟುನೆಪ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯವರು ಹೊರಡಿಸಿದ ಆದೇಶ ಕೂಡ ಪಾಲನೆಯಾಗಿಲ್ಲ. ಅ. 16ಕ್ಕೆ ಮರಳುಗಾರಿಕೆಗೆ ಅವಕಾಶ ದೊರೆಯದಿದ್ದರೆ ಪಕ್ಷದ ನೇತೃತ್ವದಲ್ಲಿ ಮತ್ತೂಮ್ಮೆ ಹೋರಾಟ ನಡೆಸಲಾಗುವುದು. ವಿವಿಧ ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿವೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು