ವಿಶಿಷ್ಟ ಸಂಸ್ಕೃತಿಯ ಸಿಂಡಿಕೇಟ್ ಬ್ಯಾಂಕ್
Team Udayavani, Oct 31, 2018, 8:51 AM IST
ಉಡುಪಿ: ಸಿಂಡಿಕೇಟ್ ಬ್ಯಾಂಕ್ ಸಂಸ್ಥಾಪಕರ ಸದಾಶಯದಿಂದ ಉನ್ನತ ಮಟ್ಟದ ಸಂಸ್ಕೃತಿ ಬೆಳೆದು ಬಂದಿದೆ. ಇದನ್ನು ಉಳಿಸಿಕೊಂಡು ಬರಬೇಕಿದೆ ಎಂದು ಬ್ಯಾಂಕ್ನ ಮಾಜಿ ಅಧ್ಯಕ್ಷ ಮತ್ತು ಎಂಡಿ ಡಾ| ಎನ್.ಕೆ. ತಿಂಗಳಾಯ ಹೇಳಿದರು.
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಮಂಗಳವಾರ ನಡೆದ 93ನೇ ಸ್ಥಾಪನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗಾಗಿ ಅರ್ಥಶಾಸ್ತ್ರ ವಿಭಾಗ ತೆರೆದು ಬ್ಯಾಂಕ್ಗೆ ಸೇರುವಂತೆ ಮಾಡಿದ ಟಿ.ಎ. ಪೈ ವ್ಯಕ್ತಿತ್ವ, ಕೆ.ಕೆ. ಪೈಯವರ ಮಾರ್ಗದರ್ಶನ ದಲ್ಲಿ ಬ್ಯಾಂಕ್ ಬೆಳೆದ ಬಗೆಯನ್ನು ಸ್ಮರಿಸಿಕೊಂಡರು.
ತಾನು ಅಧ್ಯಕ್ಷನಾಗಿದ್ದಾಗ ಕೆನರಾ ಬ್ಯಾಂಕ್ ಅಧ್ಯಕ್ಷರ ಆಪ್ತ ಸಹಾಯಕರು “ವಿಲೀನ ಪ್ರಸ್ತಾವ’ಕ್ಕಾಗಿ ಬ್ಯಾಲೆನ್ಸ್ ಶೀಟು ಕೇಳಿದ್ದರು. ಆಗ ನಾನು ಸಿಟ್ಟಾಗಿ ಸಿಂಡಿಕೇಟ್ ಬ್ಯಾಂಕ್ನ ವಿಶಿಷ್ಟ ಸಂಸ್ಕೃತಿಯನ್ನು ನೆನಪಿಸಿ ವಿಲೀನ ಸಾಧ್ಯವಿಲ್ಲ ಎಂದಿದ್ದೆ ಎಂದು ಡಾ| ತಿಂಗಳಾಯ ನೆನಪಿಸಿಕೊಂಡರು.
ಗೌರವ ಅತಿಥಿಯಾಗಿ ಮಾತನಾಡಿದ ಟಿ. ಅಶೋಕ್ ಪೈ, ರಾಷ್ಟ್ರೀಕರಣದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ನಾನೀ ಪಾಲಿVàವಾಲರಂಥವರು ತಂದೆಗೆ ಸಲಹೆ ನೀಡಿದ್ದರು. “ಮಗಳಿದ್ದರೆ ಉತ್ತಮ ವರನನ್ನು ನೋಡಿ ಮದುವೆ ಮಾಡುತ್ತೇವಲ್ಲವೆ? ಸರಕಾರಕ್ಕಿಂತ ಉತ್ತಮ ವರ ಯಾರಿದ್ದಾರೆ?’ ಎಂದು ತಂದೆ ಹೇಳಿದ್ದರು ಎಂದು ಸ್ಮರಿಸಿಕೊಂಡರು.
ಪಿಗ್ಮಿ ಸಂಗ್ರಹ, ಮಕ್ಕಳಿಗೆ ಶೂನ್ಯ ಶಿಲ್ಕಿನ ಖಾತೆ, ಶಿಕ್ಷಣಕ್ಕಾಗಿ ಸಾಲ, ಕೃಷಿ ಸಾಲ, ಮಹಿಳಾ ಸಿಬಂದಿ ನೇಮಕದಂತಹ ಬ್ಯಾಂಕ್ನ ಹೊಸ ಹೆಜ್ಜೆಗಳ ಸಂದರ್ಭ ಎಷ್ಟೋ ಜನರು ಗೇಲಿ ಮಾಡಿದ್ದರು. 50 ವರ್ಷಗಳ ಬಳಿಕ ಸರಕಾರವೇ ಇದನ್ನು ನೀತಿ ಯಾಗಿ ಜಾರಿಗೆ ತಂದಿತು. ಡಾ| ಟಿಎಂಎ ಪೈ ಬಹು ಹಿಂದೆಯೇ ಇಂತಹ ಸಾಮಾಜಿಕ ಕಳಕಳಿ ಹೊಂದಿ ದ್ದರು. ರಾಷ್ಟ್ರೀಕರಣಗೊಳ್ಳುವಾಗ ಶೇ. 90 ಸಣ್ಣ ಖಾತೆಗಳಾಗಿದ್ದವು, ಕಿರು ಷೇರುದಾರರಿದ್ದರು ಎಂದರು.
ಆಶಯ ಮುಂದುವರಿಕೆ
ಅಧ್ಯಕ್ಷತೆ ವಹಿಸಿ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿದ ಬ್ಯಾಂಕ್ನ ಕ್ಷೇತ್ರೀಯ ಮಹಾ ಪ್ರಬಂಧಕ ಭಾಸ್ಕರ ಹಂದೆ, ಡಾ| ಟಿಎಂಎ ಪೈ, ಉಪೇಂದ್ರ ಪೈ ಅವರಂತಹ ದೂರದರ್ಶಿತ್ವದವರು ರೂಪಿಸಿ ಬೆಳೆಸಿದ ಕಾರಣ ನಮ್ಮಂತಹ ಅನೇಕರು ಈ ಸ್ಥಾನದಲ್ಲಿದ್ದೇವೆ. ಡಾ| ಟಿಎಂಎ ಪೈ ಅವರ ಕೊಡುಗೆಗಳನ್ನು ಮುಂದುವರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸ್ಥಾಪಕರಾದ ಉಪೇಂದ್ರ ಪೈ, ಡಾ| ಟಿಎಂಎ ಪೈ, ವಿ.ಎಸ್. ಕುಡ್ವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನಡೆಯಿತು. ಸ್ಥಾಪಕರ ಕುಟುಂಬ ಸದಸ್ಯರಾದ ಟಿ. ನಾರಾಯಣ ಪೈ, ಟಿ. ಸತೀಶ್ ಯು. ಪೈ, ವಸಂತಿ ಆರ್. ಶೆಣೈ, ಗಾಯತ್ರಿ ಪೈ, ವನಿತಾ ಜಿ. ಪೈ ಅವರನ್ನು ಸಮ್ಮಾನಿಸಲಾಯಿತು. ಹಿರಿಯ ಗ್ರಾಹಕರಾದ ಡಾ| ಜಿ.ಎಸ್. ಚಂದ್ರಶೇಖರ್, ವಿಮಲಾ ಚಂದ್ರಶೇಖರ್, ಗೋಕುಲದಾಸ ಪೈ, ಶ್ರೀಧರ ಹಂದೆ, ಪ್ರೊ| ಎಂ. ರಾಮಚಂದ್ರ ದಂಪತಿ, ಮಂಜುನಾಥ ಮಲ್ಯರನ್ನು ಸಮ್ಮಾನಿಸಲಾಯಿತು. ವಿಶ್ವನಾಥ ಕಿಣಿ ಪ್ರಸ್ತಾವನೆಗೈದರು. ನಟರಾಜ್ ಎಸ್.ಇ. ಸ್ವಾಗತಿಸಿ, ಎನ್ನಾ ಮರಿಯಾ ನಿರ್ವಹಿಸಿದರು.
ಗುರುತು ಉಳಿಸಲು ಕರೆ
ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣಗೊಳ್ಳು ವಾಗ ಸ್ಥಾಪಕರು ಭಾರತ ಸರಕಾರಕ್ಕಿಂತ ಉತ್ತಮ ಅಳಿಯ ಯಾರಿದ್ದಾರೆಂದು ಕೇಳಿದ್ದರು. ಈಗ “ಸಿಂಡಿಕೇಟ್ ಬ್ಯಾಂಕ್ನ ಅಸ್ತಿತ್ವ, ಗುರುತನ್ನು ಉಳಿಸಿ ಕೊಳ್ಳಿ’ ಎಂದು ನಾನು ಭಾರತ ಸರಕಾರ ವನ್ನು ಆಗ್ರಹಿಸುತ್ತೇನೆಂದು ಸ್ಥಾಪಕ ಡಾ| ಟಿಎಂಎ ಪೈಯವರ ಪುತ್ರ ಟಿ. ಅಶೋಕ್ ಪೈ ಹೇಳಿದರು.