ನಗರ ನಕ್ಸಲ್ಗೆ ಕೇಜ್ರಿವಾಲ್ ದೊಡ್ಡ ಉದಾಹರಣೆ: ದಿಲ್ಲಿ BJP ಅಧ್ಯಕ್ಷ
Team Udayavani, Nov 17, 2018, 11:32 AM IST
ರಾಯಪುರ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಗರ ನಕ್ಸಲ್ ಗೆ ಬಹು ದೊಡ್ಡ ಉದಾಹರಣೆಯಾಗಿದ್ದಾರೆ ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ. ಈ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಒಂದೇ ರೀತಿಯ ಪಕ್ಷಗಳಾಗಿವೆ ಎಂದು ತಿವಾರಿ ಟೀಕಿಸಿದ್ದಾರೆ.
ನಗರ ನಕ್ಸಲ್ ಕುರಿತಾಗಿ ಈಚೆಗೆ ಪಕ್ಷದ ನಾಯಕರಾದ ರಾಜ್ ಬಬ್ಬರ್ ಮತ್ತು ನವಜ್ಯೋತ್ ಸಿಂಗ್ ಸಿಧು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಿವಾರಿ ಸುದ್ದಿ ಗೋಷ್ಠಿಯಲ್ಲಿ ಒತ್ತಾಯಿಸಿದರು.
“ಒಬ್ಬ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲರು ಗಣರಾಜ್ಯೋತ್ಸವ ಪರೇಡ್ ನಿಲ್ಲಿಸಲು ಧರಣಿ ಕುಳಿತದ್ದು ವಿಪರ್ಯಾಸದ ಸಂಗತಿ’ ಎಂದು ತಿವಾರಿ ಹೇಳಿದರು.
ನಕ್ಸಲರು ಕ್ರಾಂತಿಕಾರಿಗಳು ಎಂದು ವರ್ಣಿಸಿದ್ದ ಯುಪಿ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರನ್ನು ತಿವಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇನ್ನೋರ್ವ ಕಾಂಗ್ರೆಸ್ ನಾಯಕ ನವಜ್ಯೋತ್ ಸಿಂಗ್ ಅವರು ಈಚಿನ ತಮ್ಮ ಪಾಕ್ ಭೇಟಿಯಲ್ಲಿ ಅಲ್ಲಿನ ಸೇನಾ ಮುಖ್ಯಸ್ಥನನ್ನು ಆಲಂಗಿಸಿದುದು ಇನ್ನೊಂದು ಪರಮ ವಿಪರ್ಯಾಸದ ಸಂಗತಿಯಾಗಿದೆ ಎಂದು ತಿವಾರಿ ಹೇಳಿದರು.